ಮೈಸೂರು: ಬಿಲ್ ಪಾವತಿಗೆ ಗುತ್ತಿಗೆದಾರನಿಗೆ ಹೊಸ ನೋಟ್ ನಲ್ಲಿ ಲಂಚಬೇಕೆಂದು ಪೀಡಿಸುತ್ತಿದ್ದ ಮೈಸೂರು ನಗರ ಪಾಲಿಕೆಯ ತೋಟಗಾರಿಕೆ ವಿಭಾಗದ ಇಂಜಿನಿಯರ್ ಹಾಗೂ ಪ್ರಥಮ ದರ್ಜೆ ಗುಮಾಸ್ತನನ್ನು ಎಸಿಬಿ ಬಲೆಗೆ ಬಿದ್ದು ಜೈಲು ಪಾಲಾಗಿದ್ದಾರೆ.
ನಗರದ ವಾರ್ಡ್ ನಂಬರ್ 48 ರ ಉದ್ಯಾನವನವೊಂದರ ಅಭಿವೃದ್ದಿ ಕಾಮಾಗಾರಿಯನ್ನು ಬೆಂಗಳೂರು ಮೂಲದ ರಾಜೇಶ್ ಎಂಬುವರು 10.45 ಲಕ್ಷಕ್ಕೆ ಗುತ್ತಿಗೆ ಪಡೆದಿದ್ದರು. ಏಳು ತಿಂಗಳ ಹಿಂದೆ ಕಾಮಗಾರಿ ಪೂರ್ಣಗೊಂಡಿದ್ದು ಬಿಲ್ ಪಾವತಿಗೆ ಪಾಲಿಕೆ ತೋಟಗಾರಿಕೆ ವಿಭಾಗದ ವಿಭಾಗದ ಇಂಜಿನಿಯರ್ ರಾಘವೇಂದ್ರ ಹಾಗೂ ಗುಮಾಸ್ತ ಪುಟ್ಟಸ್ವಾಮಿ ಅವರು ಬಿಲ್ ಮಾಡಲು 70 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಈ ವಿಷಯವನ್ನ ರಾಜೇಶ್ ಮೇಲಾಧಿಕಾರಿಗಳ ಗಮನಕ್ಕೂ ತಂದರೂ ಏನೂ ಪ್ರಯೋಜನವಾಗಿರಲಿಲ್ಲ. ಬಿಲ್ ಮಾಡಬೇಕಾದರೆ ಮೊದಲ ಕಂತಾಗಿ 35 ಸಾವಿರ ಹೊಸ ನೋಟು ನೀಡುವಂತೆ ಒತ್ತಾಯಿಸಿದ್ದರು. ಇದರಿಂದ ಬೇಸತ್ತ ರಾಜೇಶ್ ಎಸಿಬಿ ಪೊಲೀಸರಿಗೆ ದೂರು ನೀಡಿದರು.
ದೂರಿನ ಅನ್ವಯ ಕಾರ್ಯ ಪ್ರವೃತ್ತರಾದ ಎಸಿಬಿ ಪೊಲೀಸರು, ರಾಜೇಶ್ ಅವರು ನಗರಪಾಲಿಕೆಯ ಆವರಣದಲ್ಲಿರುವ ತೋಟಗಾರಿಕೆ ವಿಭಾಗದ ಕಛೇರಿಗೆ ಹಣ ತೆಗೆದುಕೊಂಡು ಹೋಗಿದ್ದರು. ಇಂಜಿನಿಯರ್ ರಾಘವೇಂದ್ರ ಅವರು 35 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ದಾಳಿ ನಡೆಸಿದ ಎಸಿಬಿ ಪೊಲೀಸರು ರಾಘವೇಂದ್ರ ಹಾಗೂ ಪುಟ್ಟಸ್ವಾಮಿ ಅವರನ್ನು ಬಂಧಿಸಿದ್ದಾರೆ. ಬಂಧಿತರನ್ನ ಅವರ ಮನೆ ಹಾಗೂ ಪಾಲಿಕೆ ಕಛೇರಿಯಲ್ಲಿ ದಾಖಲಾತಿಗಳನ್ನ ದಿನವಿಡೀ ಪರಿಶೀಲನೆ ನಡೆಸಿದ್ದು, ಸಂಜೆ ನ್ಯಾಯಾಲಯಕ್ಕೆ ಹಾಜರು ಪಡಿಸಿ ಜೈಲಿಗೆ ಕಳುಹಿಸಿದ್ದಾರೆ.