ಶಿವಮೊಗ್ಗ: ಶಂಕಿತ ಆರೋಪಿ ಮಾಝ ಮುನೀರ್ ಅಹಮದ್ ತಂದೆ ಮುನೀರ್ ಅಹ್ಮದ್(52) ಮಂಗಳೂರು ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದು ಅವರ ಅಂತ್ಯ ಕ್ರಿಯೆಗೆ ಭಾಗಿಯಾಗಲು ಮಗ ಮಾಝ್ ಗೆ ಅನುಮತಿ ನೀಡಲಾಗಿದೆ.
ಅಂತ್ಯ ಕ್ರಿಯೆಗೆ ಭಾಗಿಯಾಗಲು ಮಗ ಮಾಝ್ ಗೆ ಅನುಮತಿ
ಶಿವಮೊಗ್ಗ ಪೊಲೀಸರಿಂದ ಬಂಧಿತನಾಗಿರುವ ಉಗ್ರಗಾಮಿಗಳ ಸಂಪರ್ಕದ ಶಂಕಿತ ಆರೋಪಿ ಮಾಝ ಮುನೀರ್ ಅಹ್ಮದ್ ನ ತಂದೆ ಮುನೀರ್ ಅಹ್ಮದ್ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಹೃದಯಾ ಘಾತದಿಂದ ಸಂಜೆ 5 ಗಂಟೆಗೆ ನಿಧನರಾಗಿರುತ್ತಾರೆ.
ಮೃತ ಮುನೀರ್ ಅಹ್ಮದ್ ರವರು ತೀರ್ಥಹಳ್ಳಿಯ ಮಾಜಿ ಪುರಸಭಾ ಸದಸ್ಯ ಕಾಂಗ್ರೆಸ್ ಮುಖಂಡ ದಿವಂಗತ ಸಾಬ್ಜಾನ್ ಸಾಹೇಬರವರ ಮಗನಾಗಿದ್ದರು .ಮೃತದೇಹವನ್ನು ರಾತ್ರಿ ತೀರ್ಥಹಳ್ಳಿಗೆ ತರಬಹುದೆಂದು ಕುಟುಂಬದವರು ತಿಳಿಸಿದ್ದಾರೆ .
ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕಿದೆ .ಮುನೀರ್ ಅಹಮ್ಮದ್ ರವರ ಮನೆ ತೀರ್ಥಹಳ್ಳಿ ಮೀನು ಮಾರ್ಕೆಟ್ ಹತ್ತಿರ ಸೊಪ್ಪುಗುಡ್ಡೆ ಯಲ್ಲಿರುತ್ತದೆ . ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮುನೀರ್ ಅಹ್ಮದ್ ರವರು ಮಂಗಳೂರಿನಲ್ಲಿ ಮನೆ ಮಾಡಿ ನೆಲೆಸಿದ್ದರು.
ನಿಷೇಧಿತ ಉಗ್ರರ ಸಂಘಟನೆಯ ಸಂಪರ್ಕದಲ್ಲಿ ಮಗ ಇರುವ ವಿಷಯ ತಿಳಿದು ತಂದೆ ಮುನೀರ್ ಗೆ ಆಘಾತವಾಗಿತ್ತು ಎಂದು ತಿಳಿದು ಬಂದಿದೆ. ಪೊಲೀಸ್ ಕಸ್ಟಡಿಯಲ್ಲಿ ಇರುವ ಮಾಜ್ ಗೆ ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಅವಕಾಶ ನೀಡಲಾಗಿದೆ. ನಾಳೆ 11 ಗಂಟೆಗೆ ಶಿವಮೊಗ್ಗದಿಂದ ಆತನನ್ನ ಕರೆದುಕೊಂಡು ಹೋಗಲಾಗುವುದು ಎಂದು ಜಿಲ್ಲಾ ರಕ್ಷಣಾಧಿಕಾರಿ ಎಸ್ಪಿ ಲಕ್ಷ್ಮೀ ಪ್ರಸಾದ್ ಸ್ಪಷ್ಟಪಡಿಸಿದ್ದಾರೆ.