ಮಡಿಕೇರಿ: ಕೊಡಗು ಜಿಲ್ಲಾ ಎಸ್ವೈಎಸ್ ಸಮಿತಿ ವತಿಯಿಂದ ಪ್ರವಾದಿ ಮೊಹಮ್ಮದ್ ಪೈಗಂಬರ್ (ಸ) ಅವರ ಶಾಂತಿ ಸಂದೇಶದ ಬೃಹತ್ ರ್ಯಾಲಿ ಸೆ.27 ರಂದು ಸಿದ್ದಾಪುರ ಜುಮ್ಮಾ ಮಸೀದಿಯಿಂದ ನೆಲ್ಯಹುದಿಕೇರಿ ಶಾದಿ ಮಹಲ್ ವರೆಗೆ ನಡೆಯಲಿದೆ ಎಂದು ಕೊಡಗು ಜಿಲ್ಲಾ ಸುನ್ನಿ ಮಹಲ್ ಒಕ್ಕೂಟದ ಜಿಲ್ಲಾಧ್ಯಕ್ಷ ಸಿ.ಎಂ.ಅಬ್ದುಲ್ ಹಮೀದ್ ಮೌಲವಿ ಹಾಗೂ ಪ್ರಧಾನ ಕಾರ್ಯದರ್ಶಿ ಸಿ.ಎಂ.ಅಬ್ದುಲ್ ಕರೀಂ ತಿಳಿಸಿದ್ದಾರೆ.
ಸಂಜೆ 4 ಗಂಟೆಗೆ ಪ್ರವಾದಿಯ ಶಾಂತಿ ಸಂದೇಶವನ್ನು ಸಾರುವ ಬೃಹತ್ ಮೆರವಣಿಗೆ ಸಾಗಲಿದೆ. ನಮಾಜಿನ ನಂತರ ಶಾದಿ ಮಹಲ್ ನಲ್ಲಿ ಹುಬ್ಬುರ ಸೂಲ್ ಪ್ರಭಾಷಣವನ್ನು ಆಯೋಜಿಸಲಾಗಿದೆ. ಎಸ್ವೈಎಸ್ ನ ಜಿಲ್ಲಾಧ್ಯಕ್ಷ ಬಶೀರ್ ಹಾಜಿ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಜಿಲ್ಲಾ ಜಮ್ಯ ತುಲ್ ಉಲಮ ಅಧ್ಯಕ್ಷ ಅಬ್ದುಲ್ಲ ಫೈಜಿ ಉದ್ಘಾಟಿಸಲಿದ್ದಾರೆ.
ಸಮಸ್ತ ಕಾನೂನು ಸಮಿತಿಯ ಸದಸ್ಯ ಓಣಂ ಪಿಳಿ ಮುಹಮ್ಮದ್ ಪೈಝಿ ಮುಖ್ಯ ಪ್ರಭಾಷಣ, ಅಬ್ದುಲ್ ರಹಮಾನ್ ಮುಸ್ಲಿಯಾರ್ ಸಂದೇಶ ಭಾಷಣ ಮತ್ತು ಎಸ್ವೈಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಫೈಝಿ ಸ್ವಾಗತ ಭಾಷಣ ಮಾಡಲಿದ್ದಾರೆ.
ಸಾರ್ವತ್ರಿಕ ಸಮಾನತೆ, ಸಾಮಾಜಿಕ ನ್ಯಾಯ, ಧಾರ್ಮಿಕ ಸ್ವಾತಂತ್ರ ಒದಗಿಸಿಕೊಟ್ಟು ಮಹಿಳೆಯರ, ಶೋಷಿತರ, ಅನ್ಯಾಯಕ್ಕೆ ಒಳಗಾದವರ ಹಕ್ಕುಗಳನ್ನು ನ್ಯಾಯಯುತವಾಗಿ ದೊರಕಿಸಿಕೊಟ್ಟು ಮನುಕುಲಕ್ಕೆ ಮಾತ್ರವಲ್ಲ ಸರ್ವ ಸೃಷ್ಟಿಗಳ ಮೇಲು ಕರುಣೆಯನ್ನು ತೋರಿ ಎಂಬ ಶಾಂತಿಯ, ಪ್ರೀತಿಯ ಸಹಬಾಳ್ವೆಯ, ಸಹಿಷ್ಣುತೆಯ ಸಂದೇಶವನ್ನು ಸಾರಿದ ಪ್ರವಾದಿಯ ಸಂದೇಶಗಳನ್ನು ನಾಡಿಗೆ ತಲುಪಿಸುವ ಸಂದೇಶ ಯಾತ್ರೆಯಲ್ಲಿ ಸರ್ವರು ಭಾಗಿಯಾಗಬೇಕೆಂದು ಮನವಿ ಮಾಡಿದ್ದಾರೆ.
ವಿಶ್ವ ಕಂಡ ಶ್ರೇಷ್ಠ ಸಾಹಿತಿಗಳು, ವಿಜ್ಞಾನಿಗಳು, ಸಮಾಜ ಸುಧಾರಕರು, ರಾಷ್ಟç ನಾಯಕರು ಪ್ರವಾದಿಯು ಸಮಾಜದಲ್ಲಿ ತಂದ ಸುಧಾರಣೆ, ಕ್ರಾಂತಿಕಾರಿ ಬದಲಾವಣೆ ಮತ್ತು ಮಾನವೀಯತೆ ಕಾಲಕಾಲಕ್ಕೆ ಉಪಯುಕ್ತವಾದದ್ದು ಎಂದು ಹೇಳಿದ್ದಾರೆ.
ಸರ್ವಸೃಷ್ಟಿಗಳಿಗೂ ಅನುಗುಣವಾಗುವ ಈ ಸಂದೇಶಗಳನ್ನು ಜನರಿಗೆ ತಲುಪಿಸುವ ಕಾರ್ಯಕ್ರಮ ಇದಾಗಿದೆ ಎಂದು ಅಬ್ದುಲ್ ಹಮೀದ್ ಮೌಲವಿ ಹಾಗೂ ಅಬ್ದುಲ್ ಕರೀಂ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.