ಮೈಸೂರು: ಇದೇ ಮೊದಲ ಬಾರಿಗೆ ದೀಪದ ಬೆಳಕಿನಲ್ಲಿತಾಲೀಮು ನಡೆಸಿದ ಅಭಿಮನ್ಯ ನೇತೃತ್ವದ ಗಜಪಡೆಯ ಎಲ್ಲಾ ಆನೆಗಳು ಒಂದಿಷ್ಟೂ ಹೆದರದೆ ನಿರಾತಂಕವಾಗಿ ಬನ್ನಿಮಂಟಪಕ್ಕೆ ತೆರಳಿವೆ ಎಂದು ಡಿಸಿಎಫ್ ಡಾ.ವಿ.ಕರಿಕಾಳನ್ ಹೇಳಿದ್ದಾರೆ.
ಗಜಪಡೆಗೆ ದೀಪಾಲಂಕಾರದ ಬೆಳಕಿನಲ್ಲಿ ತಾಲೀಮು ನಡೆಸಿದ ಕುರಿತಂತೆ ಮಾಹಿತಿ ನೀಡಿದ ಅವರು ಈ ಮೂಲಕ ಬೆಳಕಿನ ತೋರಣದ ಎತ್ತರವನ್ನೂ ಪರೀಕ್ಷಿಸಲಾಗಿದೆ. ಒಂದೆರೆಡು ಸ್ಥಳಗಳಲ್ಲಿ ಮರದ ಅಂಬಾರಿಗೆ ತೋರಣ ತಾಗಿದೆ. ಈ ಬಗ್ಗೆ ಸೆಸ್ಕ್ ಅಧಿಕಾರಿಗಳಿಗೆ ಮಾಹಿತಿ ನೀಡಿವೆ. ಇನ್ನೂ ಎರಡುನ ದಿನ ಇದೇ ರೀತಿ ತಾಲೀಮು ನಡೆಸುತ್ತೇವೆ ಎಂದು ತಿಳಿಸಿದ್ದಾರೆ.
ಈ ಬಾರಿ ಜಂಬೂಸವಾರಿ ತಡವಾಗಿ ನಡೆಯುವುದರಿಂದ ಅಂಬಾರಿ ಹೊತ್ತ ಆನೆ ಬನ್ನಿಮಂಟಪ ತಲುಪಲು ಕತ್ತಲಾಗುವುದರಿಂದ ಎಲ್ಲಾ ಆನೆಗಳಿಗೂ ದೀಪಾಲಂಕಾರದ ಬೆಳಕಿನ ಅಭ್ಯಾಸ ಮಾಡಿಸುವ ಸಲುವಾಗಿ ಶುಕ್ರವಾರ ಸಾಯಂಕಾಲ ಅರಮನೆಯಿಂದ ಬನ್ನಿ ಮಂಟಪದವರೆಗೆ ಗಜಪಡೆಗೆ ಶುಕ್ರವಾರ ದೀಪಾಲಂಕಾರದ ಬೆಳಕಿನಲ್ಲಿ ಮರದ ಅಂಬಾರಿಯ ತಾಲೀಮು ನಡೆಸಲಾಗಿದೆ.
ಅಭಿಮನ್ಯು ಬದಲಿಗೆ ಗೋಪಾಲಸ್ವಾಮಿಗೆ ಮರದ ಅಂಬಾರಿ ಹೊರಿಸಿ ತಾಲೀಮು ನಡೆಸುವ ಮೂಲಕ ಜಂಬೂ ಸವಾರಿ ಮಾರ್ಗದಲ್ಲಿ ದೀಪಾಲಂಕಾರದ ತೋರಣ ಅಂಬಾರಿಗೆ ತಾಗುತ್ತಿದೆಯೇ ಎಂಬುದನ್ನು ಪರೀಕ್ಷೆ ಮಾಡಲಾಯಿತು.ಈ ವೇಳೆ ಮೂರು ಸ್ಥಳಗಳಲ್ಲಿ ವಿದ್ಯುತ್ ದೀಪದ ತೋರಣ ಅಂಬಾರಿಗೆ ತಾಕಿತು. ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳವನ್ನು ಗುರುತು ಮಾಡಿಕೊಂಡು ಸ್ಥಳದಲ್ಲಿಯೇ ಇದ್ದ ಸೆಸ್ಕ್ ಅಧಿಕಾರಿಗಳಿಗೆ ಮತ್ತಷ್ಟು ಎತ್ತರಕ್ಕೆ ತೋರಣ ಕಟ್ಟುವಂತೆ ತಿಳಿಸಲಾಗಿದೆ.
ದೀಪಾಲಂಕಾರದ ಬೆಳಕಿನಲ್ಲಿ ಹದಿಮೂರು ಆನೆಗಳು ರಾಜಮಾರ್ಗದಲ್ಲಿ ತಾಲೀಮು ನಡೆಸುವುದನ್ನು ನೋಡಲು ನೂರಾರು ಜನ ರಸ್ತೆಯ ಇಕ್ಕೆಲದಲ್ಲಿ ನಿಂತು ನೋಡಲು ಮುಗಿಬಿದ್ದರು. ಕೆಲವು ವಾಹನ ಚಾಲಕರುರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿ ಆನೆಗಳನ್ನು ವೀಕ್ಷಣೆ ಮಾಡಿದರೆ ಇನ್ನೂ ಕೆಲವರು ತಮ್ಮ ಮೊಬೈಲ್ಗಳಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದಾರೆ.ಈ ತಾಲೀಮು ಇನ್ನೆರಡು ದಿನಗಳ ಕಾಲ ನಡೆಯಲಿದೆ.