ಶಿವಮೊಗ್ಗ: ಕಾಳಿಂಗ ಸರ್ಪಗಳ ಪ್ರಭೇದಗಳ ಬಗ್ಗೆ ಅಧ್ಯಯನ ನಡೆಯುತ್ತಿದೆ. ಜಗತ್ತಿನಲ್ಲಿ ನಾಲ್ಕು ಪ್ರಭೇದಗಳ ಕಾಳಿಂಗ ಸರ್ಪಗಳನ್ನು ಮೊದಲ ಬಾರಿ ಅಧ್ಯಯನ ಮಾಡಿ ಗುರುತಿಸಿರುವುದಾಗಿ ಕಾಳಿಂಗ ಸರ್ಪಗಳ ಬಗ್ಗೆ ಅಧ್ಯಯನ ನಡೆಸುತ್ತಿರುವ ಉರಗ ತಜ್ಞ ಗೌರಿಶಂಕರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉರಗ ತಜ್ಞ ಗೌರಿ ಶಂಕರ್ , ಪಶ್ಚಿಮಘಟ್ಟ, ಆಂಧ್ರ ಪ್ರದೇಶ, ಉತ್ತರಾಖಂಡ್, ಫಿಲಿಪೈನ್ಸ್ ದೇಶ ಹೀಗೆ ಹಲವೆಡೆ ಕಾಳಿಂಗ ಸರ್ಪಗಳು ಕಂಡು ಬರುತ್ತವೆ. ಆದರೆ, ಪಶ್ಚಿಮಘಟ್ಟದಲ್ಲಿ ಮಾತ್ರ ಇದರ ವೈವಿಧ್ಯತೆ ಇದೆ. ಈ ಪ್ರಭೇದಗಳನ್ನು ಸರ್ಪದ ಮೇಲಿನ ಪಟ್ಟಿಗಳ ಆಧಾರದ ಮೇಲೆ ವಿಂಗಡಿಸಬಹುದಾಗಿದೆ ಎಂದು ತಿಳಿಸಿದರು .
ಸಾಮಾನ್ಯವಾಗಿ ಕಾಳಿಂಗ ಸರ್ಪಗಳು 15 ಅಡಿ ಉದ್ದವಿರುತ್ತವೆ. ಆದರೆ, ವಿದೇಶಗಳಲ್ಲಿ 18 ಅಡಿಗೂ ಹೆಚ್ಚಿರುತ್ತವೆ ಎಂದು ಮಾಹಿತಿ ನೀಡಿದರು.
ತಮ್ಮ ಅಧ್ಯಯನದ ಪ್ರಕಾರ, ಸಾಮಾನ್ಯವಾಗಿ ಆಗುಂಬೆ ಹಾಗೂ ಪಶ್ಚಿಮ ಘಟ್ಟದಲ್ಲಿರುವ ಕಾಳಿಂಗ ಸರ್ಪಗಳಿಗೆ ಸುಮಾರು 45 ಪಟ್ಟಿಗಳು ಇದ್ದರೆ, ಆಂಧ್ರಪ್ರದೇಶ ಮತ್ತು ಉತ್ತರಾಖಂಡ್ಗಳಲ್ಲಿ ಈ ಪಟ್ಟಿಗಳ ಸಂಖ್ಯೆ 60 ಇರುತ್ತದೆ. ಹಾಗೆಯೇ ಫಿಲಿಫೈನ್ಸ್ ಮುಂತಾದ ದೇಶಗಳಲ್ಲಿ 70 ಇರುತ್ತದೆ.
ಸುಮಾರು 25 -30 ವರ್ಷಗಳ ಕಾಲ ಬದುಕುವ ಈ ಜೀವಿಗಳು ಮನುಷ್ಯನಿಗೆ ವಿನಾಕಾರಣ ತೊಂದರೆ ಕೊಡುವುದಿಲ್ಲ. ನಾನು ಕಾಳಿಂಗ ಸರ್ಪಗಳ ಬಗ್ಗೆ ಕಳೆದ 7 ವರ್ಷಗಳಿಂದ ಪಿಎಚ್ಡಿಗಾಗಿ ಅಧ್ಯಯನ ನಡೆಸುತ್ತಿದ್ದು, ಇದೀಗ ಅಧ್ಯಯನ ಮುಗಿದಿದೆ. ಇಷ್ಟರಲ್ಲಿಯೇ ಸಂಶೋಧನಾ ಪ್ರಬಂಧ ಮಂಡಿಸುವುದಾಗಿ ಗೌರಿಶಂಕರ್ ತಿಳಿಸಿದರು.
ಪಶ್ಚಿಮ ಘಟ್ಟದಲ್ಲಿ ಕಾಳಿಂಗ ಸರ್ಪದ ಸಂತತಿ ಕಡಿಮೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿರುವ ಗೌರಿಶಂಕರ್, ಅಭಿವೃದ್ಧಿ ಹೆಸರಿನಲ್ಲಿ ಕಾಡುಗಳ ವಿನಾಶದಿಂದ ಕಾಳಿಂಗ ಸರ್ಪಗಳ ಸಂತತಿ ಕಡಿಮೆ ಆಗುತ್ತಿದೆ. ಇದು ವಿಷಾದದ ಸಂಗತಿಯಾಗಿದೆ. ಕಾಳಿಂಗ ಸರ್ಪಗಳು ಇತರೆ ಹಾವುಗಳನ್ನು ನುಂಗುವುದರಿಂದ ಈ ಹಾವುಗಳ ಸಂತತಿ ಕಡಿಮೆಯಾಗಿ ಅದರಿಂದ ಮಾನವರು ಮರಣ ಹೊಂದುವ ಸಂಖ್ಯೆ ಕಡಿಮೆಯಾಗುತ್ತದೆ. ಹೀಗಾಗಿ, ಕಾಳಿಂಗ ಸರ್ಪಗಳು ಮಾನವನಿಗೆ ಉಪಕಾರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಳೆದ 7 ವರ್ಷಗಳಿಂದ ಹಲವು ಕೋನದಲ್ಲಿ ಕಾಳಿಂಗ ಸರ್ಪಗಳ ಬಗ್ಗೆ ಅಧ್ಯಯನ ಮಾಡಿದ್ದು, ಇದರ ಡಿಎನ್ಎ ಸ್ಯಾಂಪಲ್ಗಳನ್ನು ತೆಗೆದುಕೊಂಡಿದ್ದೇನೆ. ಕಾಳಿಂಗ ಸರ್ಪ ಸಾಮಾನ್ಯವಾಗಿ ಕಚ್ಚುವುದಿಲ್ಲ. ಅದು ನುಂಗುತ್ತದೆ. ಯಾವುದೇ ಪ್ರಾಣಿಯನ್ನು ಇಡಿಯಾಗಿ ನುಂಗುತ್ತದೆ ಹೊರತು ಜಗಿಯುವುದಿಲ್ಲ. ಕಾಳಿಂಗ ಸರ್ಪಗಳು ಮೊಟ್ಟೆಯನ್ನು ಇಡುತ್ತವೆಯಾದರೂ ಶೇ.2ರಷ್ಟು ಮಾತ್ರ ಇವು ಮರಿಯಾಗಿ ಬದುಕುತ್ತವೆ ಎಂದರು. ಭಾರತದಲ್ಲಿ ಕಾಳಿಂಗ ಸರ್ಪಗಳನ್ನು ಕೊಲ್ಲುವುದಿಲ್ಲ. ಆದ್ದರಿಂದ ಸಂಖ್ಯೆ ಹೆಚ್ಚಿದೆ. ಆದರೆ, ಫಿಲಿಪೈನ್ಸ್ ಮುಂತಾದ ಕಡೆಗಳಲ್ಲಿ ಈ ಹಾವುಗಳನ್ನು ಕೊಲ್ಲಲಾಗುತ್ತದೆ ಎಂದು ತಿಳಿಸಿದರು.