ಬೀರೂರು: ಗ್ಯಾರಂಟಿ ಯೋಜನೆಗಳಿಗೆ ಕಾಡುತ್ತಿರುವ ಸರ್ವರ್ ಸಮಸ್ಯೆ ಪಡಿತರ ವಿತರಣೆಗೂ ವಿಸ್ತರಿಸಿದೆ. ಜೂನ್ ತಿಂಗಳ ಪಡಿತರ ವಿತರಣೆ ಆರಂಭವಾಗಿದ್ದು, ಕಳೆದ 21ರಂದು ಆರಂಭವಾದ ಸರ್ವರ್ ಸಮಸ್ಯೆ ಮೂರು ದಿನ ಕಳೆದರೂ ಸರಿಯಾಗದೆ ರೇಷನ್ಕಾರ್ಡ್ ಹೊಂದಿರುವವರು ನ್ಯಾಯಬೆಲೆ ಅಂಗಡಿಗಳ ಬಾಗಿಲಿಗೆ ಅಲೆಯುವಂತಾಗಿದೆ. ಅಲ್ಲದೆ, ಅನ್ನ ಭಾಗ್ಯ ಯೋಜನೆಯ ತಿದ್ದುಪಡಿ, ಅಪ್ಡೇಟ್ ಸಲುವಾಗಿ ಜೂನ್ 28ರಿಂದ 30ರವರೆಗೂ ಸರ್ವರ್ ಕಾರ್ಯನಿರ್ವಹಿಸುವುದಿಲ್ಲ ಎಂದು ಆದೇಶ ಹೊರಡಿಸಲಾಗಿತ್ತು. ಈ ಬಗ್ಗೆ ನ್ಯಾಯಬೆಲೆ ಅಂಗಡಿಗಳ ವ್ಯಾಪ್ತಿಯಲ್ಲೂ ಪ್ರಚಾರ ಮಾಡಲಾಗಿತ್ತು. ಇದರಿಂದಾಗಿ ಪಡಿತರ ಪಡೆಯಲು ಸಾಲುಗಟ್ಟಿ ನಿಲ್ಲುತ್ತಿದ್ದಾರೆ.
ದಿನವಿಡೀ ಬಾಗಿಲು ತೆರೆದು ವಿತರಣೆಗೆ ಕುಳಿತರೂ ಗಂಟೆಗೆ ಒಂದು ಅಥವಾ ಎರಡು ಕಾರ್ಡ್ಗೆ ಮಾತ್ರ ಪಡಿತರ ವಿತರಣೆ ಮಾಡಲಾಗುತ್ತಿದೆ. ಇದರಿಂದ ಜನರಿಗೆ ಉತ್ತರ ನೀಡುವುದೇ ಕಷ್ಟವಾಗುತ್ತಿದೆ ಎನ್ನುವುದು ನ್ಯಾಯ ಬೆಲೆ ಅಂಗಡಿಯವರ ಅಳಲು. ಕೂಲಿ ಬಿಟ್ಟು, ಮನೆಕೆಲಸವನ್ನೂ ಬದಿಗಿಟ್ಟು ರೇಷನ್ಅಂಗಡಿ ಮುಂದೆ ಸಾಲು ನಿಲ್ಲುತ್ತಿದ್ದೇವೆ. ಆದರೂ ರೇಷನ್ ಪಡೆಯಲು ಸಾಧ್ಯ ವಾಗುತ್ತಿಲ್ಲ ಬರೀ ಸರ್ವರ್ ಸಮಸ್ಯೆ ಎನ್ನುವುದು ಜನರ ಅಳಲು.
ಈ ಕುರಿತು ಪತ್ರಿಕೆಗೆ ಪ್ರತಿಕ್ರಿಯಿಸಿದ ಆಹಾರ ಇಲಾಖೆ ಉಪನಿರ್ದೇಶಕ ಸುಬ್ರಹ್ಮಣ್ಯ, ಸರ್ಕಾರದ ವಿವಿಧ ಯೋಜನೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸ್ವೀಕರಿಸುವುದು ಮತ್ತು ವಿವಿಧ ಅಪ್ಡೇಟ್ಗಳಿಗೆ ಸರ್ವರ್ ಬಳಕೆಯಾಗುವುದು ಸಹಜ ಪ್ರಕ್ರಿಯೆ. ಇಂಥ ಸಂದರ್ಭದಲ್ಲಿ ಸರ್ವರ್ ಮೇಲೆ ಒತ್ತಡ ಬೀಳುವುದೂ ಸಹಜ. ಪಡಿತರ ಸರ್ವರ್ ಅಪ್ಡೇಟ್ ಸಲುವಾಗಿ ನಿರಂತರ ಪ್ರಕ್ರಿಯೆ ನಡೆದಿದ್ದು, ಜೂನ್ 27ರ ಒಳಗೆ ಪಡಿತರ ವಿತರಿಸಬೇಕು ಎನ್ನುವ ಆದೇಶ ಹಿಂಪಡೆದು ಆಯುಕ್ತರು ಜೂನ್ 30ರವರೆಗೂ ಪಡಿತರ ವಿತರಿಸುವಂತೆ ಹೊಸ ಆದೇಶ ಹೊರಡಿಸಿದ್ದಾರೆ. ಪಡಿತರದಾರರು ಒತ್ತಡಕ್ಕೆ ಒಳಗಾಗದೆ ಪಡಿತರ ಪಡೆಯಬೇಕು. ನ್ಯಾಯಬೆಲೆ ಅಂಗಡಿಯವರಿಗೂ ಈ ಬಗ್ಗೆ ಸಂದೇಶ ರವಾನಿಸಿದ್ದು, ತಾಳ್ಮೆಯಿಂದ ವರ್ತಿಸಿ ಪಡಿತರ ವಿತರಿಸಬೇಕು ಎಂದರು.