ಕಡೂರು: ಕಾಂಗ್ರೆಸ್ ಪಕ್ಷವು ಈ ದೇಶಕ್ಕೆ ಅವಶ್ಯಕತೆ ಇಲ್ಲ. ದೇಶಕ್ಕೆ ಕಳಂಕ ತಂದಿರುವ ಕಾಂಗ್ರೆಸ್ ಪಕ್ಷವನ್ನು ಹೊಡೆದೋಡಿಸಲು ಸಂಕಲ್ಪ ಮಾಡಬೇಕು. ಕಾಂಗ್ರೆಸ್ ಮುಕ್ತ ಭಾರತ ಮಾಡಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹೇಳಿದರು. ಪಟ್ಟಣದ ಕೆಎಲ್ವಿ ವೃತ್ತದಲ್ಲಿ ವಿಜಯ ಸಂಕಲ್ಪ ಯಾತ್ರೆಯ ಹಿನ್ನೆಲೆಯಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು. ಈ ಜನರನ್ನು ನೋಡಿದರೆ ಬೆಳ್ಳಿ ಪ್ರಕಾಶ್ ಅವರ ಅವರ ವಿಜಯೋತ್ಸವ ನೋಡುತ್ತಿದ್ದೇವೆ ಎನಿಸುತ್ತಿದೆ. ಕಡೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬಿಜೆಪಿ ಮತ್ತೊಮ್ಮೆ ಗೆಲುವು ಸಾಧಿಸುವ ಮೂಲಕ ಅವರು ಶಾಸಕರಾಗಬೇಕು ಎಂಬುದು ನನ್ನ ಮಹಾದಾಸೆ ಎಂದರು.
ಶಾಶ್ವತ ನೀರಾವರಿ ಸೇರಿದಂತೆ ಸದಾ ಕಡೂರು ಕ್ಷೇತ್ರದ ಅಭಿವೃದ್ಧಿಯ ಚಿಂತನೆ ನಡೆಸುವ ಬೆಳ್ಳಿ ಪ್ರಕಾಶ್ ನೀವು ನೀಡಿರುವ ವೋಟಿಗೆ ನ್ಯಾಯ ದೊರಕಿಸಿದ್ದಾರೆ. ಮುಂದಿನ ಐದು ವರ್ಷಕ್ಕೆ ಮತ್ತೊಮ್ಮೆ ಶಾಸಕರಾಗಲು ಅವರಿಗೆ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು. ನಮ್ಮ ಕಾರ್ಯಕರ್ತರೇ ಬಿಜೆಪಿಯ ದೇವರಾಗಿದ್ದು, ಹಳ್ಳಿಗಳಲ್ಲಿ ಮನೆ ಮನೆಗೆ ತೆರಳಿ ನಮ್ಮ ಸರ್ಕಾರದ ಸಾಧನೆಗಳನ್ನು ಹೇಳಿ ಮತ ಕೊಡಿಸಬೇಕು ಎಂದು ಸಚಿವರು ಕೋರಿದರು.
ಶಾಸಕ ಬೆಳ್ಳಿ ಪ್ರಕಾಶ್ ಮಾತನಾಡಿ, ನನ್ನ ಅಧಿಕಾರದ ಕಳೆದ ಐದು ವರ್ಷಗಳಲ್ಲಿ ಕಡೂರು ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿದ್ದೇನೆ. ನನಗೆ ಮತ ನೀಡಿದ ಜನರಿಗಾಗಿ ಆತ್ಮತೃಪ್ತಿಯಾಗಿ ಕೆಲಸ ಮಾಡಿದ್ದೇನೆ. ಜಾತಿಗೆ ಆದ್ಯತೆ ನೀಡದೆ, ಸರ್ವ ಜನರ ಅಭ್ಯುದಯಕ್ಕಾಗಿ ದುಡಿದಿದ್ದೇನೆ. ನಮ್ಮ ನಾಯಕರಾದ ಬಿ.ಎಸ್ ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೇರಿ ಈ ನಮ್ಮ ಕಡೂರು ಬರದನಾಡಿಗೆ ಶಾಶ್ವತ ನೀರಾವರಿ ಯೋಜನೆ ನೀಡಿದ್ದಾರೆ ಎಂದರು.
ದೇಶವನ್ನು ಸುಭದ್ರವಾಗಿ ಕಟ್ಟಲು ಮತ್ತು ನಾವುಗಳು ಸುರಕ್ಷಿತವಾಗಿ ಬದುಕುವಂತೆ ಮಾಡುವಲ್ಲಿ ಭಾರತೀಯ ಜನತಾ ಪಕ್ಷವು ಕಂಕಣ ಬದ್ಧವಾಗಿದೆ. ಮತ್ತೊಮ್ಮೆ ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲಿರಬೇಕು ಎಂದು ಕೋರಿದರು. ರೋಡ್ ಶೋನಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ .ಪ್ರಾಣೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮರಡಪ್ಪ, ಬಿಜೆಪಿ ಜಿಲ್ಲಾ ಸಹ ವಕ್ತಾರ ರವಿ ಚಿಕ್ಕ ದೇವನೂರು, ಬಿಜೆಪಿ ಮುಖಂಡರಾದ ಮಹೇಶ್ ಒಡೆಯರ್, ಕೆ.ಬಿ.ಸೋಮೇಶ್ , ಅಡಿಕೆ ಚಂದ್ರು, ನವೀನ್, ಸುದರ್ಶನ್, ಜಿಗಣೇಹಳ್ಳಿ ನೀಲಕಂಠಪ್ಪ, ಶಾಮಿಯಾನ ಚಂದ್ರು, ಪುರಸಭೆ ಸದಸ್ಯರು, ಮಹಿಳಾ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.