ಚಿಕ್ಕಮಗಳೂರು: ಸರ್ಕಾರಿ ಶಾಲೆಗಳಲ್ಲಿ ಓದಿದ ಮಕ್ಕಳಿಗೆ ಮಾತ್ರ ಉನ್ನತ ಶಿಕ್ಷಣದಲ್ಲಿ ಅವಕಾಶ ಎನ್ನುವ ಕಾನೂನನ್ನು ಜಾರಿಗೆ ತರಬೇಕು ಎಂದು ಸಾಲುಮರದ ತಿಮ್ಮಕ್ಕ ಅವರ ದತ್ತು ಪುತ್ರ ಉಮೇಶ್ ವನಸಿರಿ ಹೇಳಿದರು.
ದುರ್ಗಾ ಫೌಂಡೇಶನ್ ಟ್ರಸ್ಟ್ ಹಾಗೂ ಅನ್ನಪೂರ್ಣೇಶ್ವರಿ ಚಾರಿಟಿ ಫೌಂಡೇಶನ್ ವತಿಯಿಂದ ನಗರದ ಎಐಟಿ ಕಾಲೇಜಿನ ಬಿಜಿಎಸ್ ಸಭಾಂಗಣದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕ ಗಳಿಸಿದ ಜಿಲ್ಲೆಯ ಮೊರಾರ್ಜಿ ದೇಸಾಯಿ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಣವಂತರ ಮಕ್ಕಳಿಗೆ ಪ್ರಾಥಮಿಕ, ಪ್ರೌಢಶಿಕ್ಷಣಕ್ಕೆ ಖಾಸಗಿ ಶಾಲೆಯೇ ಆಗಬೇಕು. ಆದರೆ ವೈದ್ಯಕೀಯ, ಇಂಜಿನೀಯರಿಂಗ್ ಇನ್ನಿತರೆ ಉನ್ನತ ಶಿಕ್ಷಣದ ಸೀಟುಗಳು ಮಾತ್ರ ಸರ್ಕಾರದ್ದೇ ಆಗಬೇಕು. ಸರ್ಕಾರಗಳು ಇದರ ಬಗ್ಗೆ ಬಹಳ ಚಿಂತನೆ ಮಾಡಿ ಒಳ್ಳೆಯ ಕಾಯ್ದೆ ತರಬೇಕು ಎಂದರು.
ಸರ್ಕಾರಿ ಶಾಲೆಗಳಲ್ಲಿ ಓದಿದ ಮಕ್ಕಳಿಗೆ ಉನ್ನತ ಶಿಕ್ಷಣಗಳಲ್ಲಿ ಶೇ. ೯೦ ರಷ್ಟು ಸೀಟುಗಳನ್ನು ಮೀಸಲಿಡಬೇಕು. ಉಳಿದ ಹತ್ತು ಭಾಗ ಮಾತ್ರ ಖಾಸಗಿ ಶಾಲೆಯಲ್ಲಿ ಓದಿದವರಿಗೆ ಮಾತ್ರ ನೀಡಬೇಕು. ಖಾಸಗಿ ಶಾಲೆಗಳಲ್ಲಿ ಓದು ಓದು ಬಿಟ್ಟರೆ ಬೇರೆ ಏನೂ ಇಲ್ಲ. ಆದರೆ ಸರ್ಕಾರಿ ಶಾಲೆಗಳಲ್ಲಿ ಬದುಕಿನ ಪಾಠದ ಜೊತೆಗೆ ಎಲ್ಲಾ ಸಂಸ್ಕಾರಗಳನ್ನ ಬೆಳೆಸಿಕೊಂಡು ಹೋಗುತ್ತಾರೆ. ಖಾಸಗಿ ಶಾಲೆಗಳಲ್ಲಿ ಹಾಗೆ ನಡೆಯುವುದಿಲ್ಲ ಎಂದರು.
ಖಾಸಗಿ ಶಾಲೆಗಳಲ್ಲಿ ಡಿಗ್ರಿ ಫೇಲಾದವರು, ಪಿಯುಸಿ ಫೇಲಾದವರನ್ನು ಕರೆಸಿ ಪಾಠ ಮಾಡಿಸುತ್ತಾರೆ. ಒಳ್ಳೆಯ ಸೀರೆ, ಸೂಟು-ಬೂಟುಗಳನ್ನು ಹಾಕಿಕೊಂಡಿರುತ್ತಾರೆ ಅಷ್ಟೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಾಗಬೇಕಾದರೆ ಸರ್ಕಾರದ ಮಾನದಂಡಗಳನ್ನ ಪೂರೈಸಲೇ ಬೇಕಾಗುತ್ತದೆ. ಅಗತ್ಯ ಅರ್ಹತೆಗಳನ್ನು ಗಳಿಸಿರಲೇಬೇಕಾಗುತ್ತದೆ.
ತರಬೇತಿ ಪಡೆದು ಎಲ್ಲಾ ಕೌಶಲ್ಯಗಳನ್ನು ಗಳಿಸಿಕೊಂಡು ಮಕ್ಕಳ ಮುಂದೆ ಬಂದು ಪಾಠ ಮಾಡಬೇ ಕಾಗುತ್ತದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ ನಮ್ಮ ಮಕ್ಕಳು ಓದುವಂತಾಗಬೇಕು ಎಂದರು.