ಶೃಂಗೇರಿ: ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಗಂಗಾವತಿ ಶಾಸಕ, ಮಾಜಿ ಸಚಿವ ಜನಾರ್ಧನ ರೆಡ್ಡಿ ಕುಟುಂಬ ಸಮೇತರಾಗಿ ಶೃಂಗೇರಿಗೆ ಭೇಟಿ ನೀಡಿ ವಿದ್ಯಾ ಅಧಿದೇವತೆ ತಾಯಿ ಶಾರದಾಂಬೆಯ ದರ್ಶನವನ್ನು ಪಡೆದರು.
ಜನಾರ್ಧನ ರೆಡ್ಡಿಯ ಮೊಮ್ಮಗಳು ಬ್ರಮರಳ ಹುಟ್ಟು ಹಬ್ಬದ ದಿನದ ಅಂಗವಾಗಿ ಅಕ್ಷರಾಭ್ಯಾಸ ಮಾಡಿಸಿ, ಶಾರದಾ ಪೀಠದ ಉಭಯ ಜಗದ್ಗುರುಗಳ ಆಶೀರ್ವಾದ ಪಡೆದುಕೊಂಡರು.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಶೃಂಗೇರಿಯ ನರಸಿಂಹವನದಲ್ಲಿ ಸನ್ನಿಧಾನ ಶ್ರೀ ಶ್ರೀ ಜಗದ್ಗುರು ವಿಧುಶೇಖರ ಭಾರತಿಗಳ ದರ್ಶನ ಪಡೆದು, ಹಲವಾರು ವಿಚಾರಗಳನ್ನು ಚರ್ಚಿಸಿ ಆಶೀರ್ವಾದ ಪಡೆದಿದ್ದು ನನ್ನ ಪೂರ್ವಜನ್ಮದ ಪುಣ್ಯವೆಂದೇ ಭಾವಿಸಿದ್ದೇನೆ. ಶೃಂಗೇರಿ ಪೀಠದ ಆಡಳಿತಾಧಿಕಾರಿಗಳಾದ ಪದ್ಮಶ್ರೀ ಗೌರಿ ಶಂಕರ್ ಅವರನ್ನು ಈ ಸಂದರ್ಭದಲ್ಲಿ ನೆನೆಯುತ್ತಿದ್ದೇನೆ. ಶೃಂಗೇರಿ ಮಠದ ಬಳ್ಳಾರಿ ಶಾಖೆಯ ಮಠಾಧಿಕಾರಿ ಬಿ.ಕೆ.ಬಿ.ಎನ್.ಮೂರ್ತಿ ಹಾಗೂ ಮೋಹನ್ ಶಾಸ್ತ್ರಿ ಅವರ ಸಹಕಾರಕ್ಕಾಗಿ ಈ ಸಂದರ್ಭದಲ್ಲಿ ಧನ್ಯವಾದಗಳನ್ನು ತಿಳಿಸುತ್ತಿದ್ದೇನೆ ಎಂದರು.
ಜನಾರ್ಧನ ರೆಡ್ಡಿ ಅವರ ಆಸ್ತಿ ಜಪ್ತಿಗೆ ಆದೇಶ ನೀಡಿದ ಕೋರ್ಟ್:
ಕ್ರಿಮಿನಲ್ ಕೇಸ್ ಮುಗಿಯುವವರೆಗೆ ಶಾಸಕ ಜನಾರ್ಧನ ರೆಡ್ಡಿ ಮತ್ತು ಪತ್ನಿ ಲಕ್ಷ್ಮೀ ಅರುಣಾ ರೆಡ್ಡಿಗೆ ಸೇರಿದ ಆಸ್ತಿ ಜಪ್ತಿ ಮಾಡುವಂತೆ ಸಿಬಿಐ ವಿಶೇಷ ಕೋರ್ಟ್ ಆದೇಶ ಹೊರಡಿಸಿದೆ.
ಜನಾರ್ಧನ ರೆಡ್ಡಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಕೇಸ್ ಮುಗಿಯುವವರೆಗೆ ಒಟ್ಟು ೭೭ ಆಸ್ತಿಗಳನ್ನು ಜಪ್ತಿ ಮಾಡುವಂತೆ ಸಿಬಿಐ ವಿಶೇಷ ಕೋರ್ಟ್ ಆದೇಶ ಹೊರಡಿಸಿದೆ. ಜನಾರ್ಧನ ರೆಡ್ಡಿ ದಂಪತಿಗೆ ಸೇರಿದ ಒಟ್ಟು ೧೨೪ ಆಸ್ತಿಗಳ ಜಪ್ತಿ ಕೋರಿ ಸಿಬಿಐ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಇದೀಗ ನ್ಯಾಯಾಲಯ ಭ್ರಷ್ಟಾಚಾರ ತಡೆ ಕಾಯ್ದೆ, ಕ್ರಿಮಿನಲ್ ಲಾ ತಿದ್ದುಪಡಿ ಕಾಯ್ದೆಯಡಿಯಲ್ಲಿ ಒಟ್ಟು ೭೭ ಆಸ್ತಿಗಳನ್ನು ಜಪ್ತಿ ಮಾಡುವಂತೆ ಆದೇಶ ಹೊರಡಿಸಿದೆ.