ಕಾರವಾರ: ವಿದ್ಯುತ್ ಬಿಲ್ ಏರಿಕೆಯಾಗಿದ್ದರಿಂದ ರಾಜ್ಯ ಸರಕಾರದ ವಿರುದ್ಧ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ವತಿಯಿಂದ ನೀಡಲಾಗಿದ್ದ ಬಂದ್ ಕರೆಗೆ ಕಾರವಾರ ನಗರದಲ್ಲಿ ಎಲ್ಲ ಅಂಗಡಿ ಮಳಿಗೆ ಬಂದ್ ಮಾಡಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನಗರದಲ್ಲಿ ಬೆಳಗ್ಗೆಯಿಂದಲೇ ಬಂದ್ ಆಗಿದ್ದರಿಂದ ಜನರು ತೊಂದರೆ ಅನುಭವಿಸುವಂತಾಗಿತು. ರಿಕ್ಷಾ ಚಾಲಕರ ಸಂಘಟನೆಯಿಂದ ಬಂದ್ ಗೆ ಬೆಂಬಲ ನೀಡಿದ್ದವು. ಶಾಲೆ-ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದವು. ಬಸ್ ವ್ಯವಸ್ಥೆ ಸಹಜವಾಗಿದ್ದವು. ಆದರೆ ಜನಜಂಗುಳಿಯಿಂದ ತುಂಬಿರುತ್ತಿದ್ದ ನಗರದ ವಿವಿಧ ರಸ್ತೆಗಳು ಭಾಗಶಃ ಖಾಲಿಯಾಗಿದ್ದವು. ನಗರದ ಸವಿತಾ ವೃತ್ತದಲ್ಲಿ ಜಮಾಯಿಸಿದ ಸಂಘದ ಸದಸ್ಯರು ಮತ್ತು ಅಂಗಡಿಗಾರರು ಹಾಗೂ ಆಟೋ, ಚಾಲಕರ ಮಾಲಕರು, ಸಣ್ಣ ವ್ಯಾಪಾರಿಗಳು ನಗರದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆಯ ಮೂಲಕ ಸಾಗಿ ಜಿಲ್ಲಾಧಿಕಾರಿ ಕಚೇರಿ ತಲುಪಿದರು.
ವಿದ್ಯುತ್ ದರ ಏರಿಕೆಯನ್ನು ಖಂಡಿಸಿ ದಾರಿಯುದ್ದಕ್ಕೂ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು. ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಮಾವೇಶಗೊಂಡ ಪ್ರತಿಭಟನಾಕಾರರನ್ನು ಉದ್ದೇಶಿಸಿ ಕಾರವಾರ ಚೆಂಬರ್ ಆಫ್ ಕಾಮರ್ಸ್ ನ ಅಧ್ಯಕ್ಷ ಜಿತೇಂದ್ರ ತನ್ನಾ ಮಾತನಾಡಿ, ರಾಜ್ಯ ಸರ್ಕಾರ ಏಕಾಏಕಿ ವಿದ್ಯುತ್ ದರ ಏರಿಕೆ ಮಾಡಿರುವುದರಿಂದ ದೊಡ್ಡ ಸೇರಿದಂತೆ ಸಣ್ಣ ಉದ್ದಿಮೆಗಳು ತೊಂದರೆಗೆ ಸಿಲುಕಿವೆ. ದುಪ್ಪಟ್ಟು ಬಿಲ್ ಬಂದಿದ್ದರಿಂದ ಉದ್ದಿಮೆಗಳನ್ನು ನಡೆಸಬೇಕೋ, ಬೇಡವೋ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ಕೇವಲ ಉದ್ದಿಮೆಗಳಿಗಷ್ಟೇ ಅಲ್ಲ 50ರಿಂದ 100 ಯುನಿಟ್ ಬಳಸಲು ಮನೆಗಳಿಗೂ ದುಪ್ಪಟ್ಟು ಬಿಲ್ ಬಂದಿದೆ. ವಿದ್ಯುತ್ ಬಿಲ್ ಏರಿಕೆಯ ಬಗ್ಗೆ ಹೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರೆ ಅವರು ಹಾರಿಕೆಯ ಉತ್ತರ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.