ಬೀದರ್: ದೈನಂದಿನ ಜೀವನದಲ್ಲಿ ಯೋಗ ಮತ್ತು ಪ್ರಾಣಾಯಾಮಗಳನ್ನು ಮಾಡುವುದರಿಂದ ಆರೋಗ್ಯವಂತರಾಗಿ ಬಾಳುವುದು ಸಾಧ್ಯವಾಗುತ್ತದೆ ಎಂದು ಬೀದರ್ ಜಿಲ್ಲಾ ಕಾರಾ ಗೃಹದ ಅಧೀಕ್ಷಕರಾದ ಶರಣಬಸಪ್ಪನವರು ಅಭಿಪ್ರಾಯ ಪಟ್ಟರು.
ಅವರು ಜಿಲ್ಲಾ ಕಾರಾಗೃಹ (ಸುಧಾರಣಾ ಕೇಂದ್ರ) ದಲ್ಲಿ “9 ನೇ ವಿಶ್ವ ಯೋಗ ದಿನಾಚರಣೆ” ಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಇಂದಿನ ಯಾಂತ್ರಿಕ ಯುಗದಲ್ಲಿ ಪ್ರತಿಯೊಬ್ಬ ಮನುಷ್ಯನು ಅನೇಕ ಒತ್ತಡಗಳಿಂದ ಬಳಲುತ್ತಿದ್ದು, ಮಾನಸಿಕ ಹಾಗೂ ದೈಹಿಕವಾಗಿ ಒಂದಲ್ಲ ಒಂದು ರೋಗರುಜಿನಗಳಿಗೆ ತುತ್ತಾಗುತ್ತಿದ್ದಾನೆ.
ಯೋಗ ಧ್ಯಾನ ಮತ್ತು ಪ್ರಾಣಾಯಾಮವನ್ನು ನಿಯಮಿತವಾಗಿ ಮಾಡುವುದರಿಂದ ಶಾರೀರಿಕ ಸ್ವಾಸ್ಥ್ಯವನ್ನು ಕಾಪಾಡಿಕೊಂಡು ಮಾನಸಿಕ ನೆಮ್ಮದಿಯೊಂದಿಗೆ ಬದುಕಲು ಸಾಧ್ಯವಾಗುತ್ತದೆ ಎಂದರು.
ಜೈ ಹಿಂದ್ ಹಿರಿಯ ನಾಗರಿಕರ ಸಂಘದ ಕಾರ್ಯದರ್ಶಿ ವೀರಭದ್ರಪ್ಪ ಉಪ್ಪಿನ್ ಯೋಗ ತರಬೇತಿ ನೀಡಿ, ಕಾರಾಗೃಹದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳು ಪ್ರತಿನಿತ್ಯ ತಮ್ಮ ಕಾರ್ಯಚಟುವಟಿಕೆಗಳಲ್ಲಿ ಒತ್ತಡದಿಂದ ಮುಕ್ತರಾಗಲು ಯೋಗ ಮತ್ತು ಪ್ರಾಣಾಯಮ ಅತ್ಯವಶ್ಯಕವಾಗಿದೆ ಇದರಿಂದ, ಜಿಲ್ಲಾ ಕಾರಾಗೃಹದ ಕೆಲಸ ಕಾರ್ಯವು ಸುಗಮವಾಗುತ್ತದೆ. ಇಲ್ಲಿ ಬಂದಿರುವ ಎಲ್ಲಾ ಬಂದಿಗಳು ಪ್ರತಿನಿತ್ಯ ಯೋಗ ಪ್ರಾಣಾಯಾಮವನ್ನು ತಪ್ಪದೆ ಮಾಡಬೇಕು ಇದರಿಂದ ಜೀವನದಲ್ಲಿ ಆದಂತಹ ಕೆಟ್ಟ ಗಳಿಗೆಯನ್ನು ಮರೆತು ಮನಃಪರಿವರ್ತನೆಯಾಗಿ ಸಮಾಜದಲ್ಲಿ ಒಳ್ಳೆಯ ನಾಗರಿಕನಾಗಿ ಬದುಕಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಪ್ರ.ಶಾ.ತಂತ್ರಜ್ಞ ಅರವಿಂದ ಕುಲಕರ್ಣಿಯವರು ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯು ತಮ್ಮದೆ ಆದಂತಹ ವಿಶೇಷ ಪ್ರತಿಭೆಯನ್ನು ಹೊಂದಿರುತ್ತಾನೆ. ಅಂತಹ ಪ್ರತಿಭೆಗಳನ್ನು ಹೊರಹಾಕಿ ಇತರರಿಗೂ ಅವುಗಳನ್ನು ಕಲಿಸಿಕೊಡುವುದರ ಮೂಲಕ ಉತ್ತಮ ಮಾದರಿಯ ವ್ಯಕ್ತಿಯನ್ನಾಗಿ ಮಾಡಲು ಸಾಧ್ಯವಾಗುತ್ತದೆ ಎಂದರು.
ಬೀದರ್ ಜಿಲ್ಲಾ ಕಾರ್ಯಗೃಹ (ಸುಧಾರಣಾ ಕೇಂದ್ರ)ದಲ್ಲಿ, ಬಂದಿಗಳ ಮನಃಪರಿವರ್ತನೆಗೊಳಿಸಲು ಮತ್ತು ವ್ಯಸನಗಳಿಂದ ಮುಕ್ತಗೊಳಿಸಲು ಇಲ್ಲಿನ ಅಧೀಕ್ಷಕರು ತಿಂಗಳಿಗೊಂದು ವಿಶಿಷ್ಟವಾದಂತಹ ಶಿಬಿರವನ್ನು ಆಯೋಜಿಸಿ, ವಿಶೇಷ ಪರಿಣಿತರನ್ನು ಆಹ್ವಾನಿಸಿ, ತರಬೇತಿಯನ್ನು ನಡೆಸುವ ಮೂಲಕ ಜಿಲ್ಲೆಗೆ ಉತ್ತಮ ಸೇವೆಯನ್ನು ಸಲ್ಲಿಸುತ್ತಿರುವುದು ಶ್ಲಾಘನೀಯವಾದದ್ದು ಎಂದರು.
ಅತಿಥಿಗಳಾಗಿ ಆಗಮಿಸಿದ್ದ, ನಿವೃತ್ತ ಮುಖ್ಯೊಪಾಧ್ಯಾಯರಾದ ನಿಜಲಿಂಗಪ್ಪ ತಗಾರೆಯವರು ಯೋಗ ಪ್ರಾತ್ಯಕ್ಷಿಕೆಯನ್ನು ನಡೆಸಿ ಕೊಟ್ಟು, ಬಂದಿಗಳಿಗೆ ಯೋಗದ ಮಹತ್ವಗೊತ್ತಿದೆ. ಅದನ್ನು ಇತರ ಸಹಪಾಠಿಗಳಿಗೂ ಕಲಿಸಿಕೊಡಬೇಕೆಂದು ಕೋರಿದರು.
ಸಿಬ್ಬಂದಿಗಳಾದ ಜೈಲರ್ ಟಿ. ಬಿ. ಭಜಂತ್ರಿ, ಸಿದ್ಧ ಪ್ರಕಾಶ ಪಾಟೀಲರವರು ವೇದಿಕೆಯಲ್ಲಿದ್ದರು. ಸಹಾಯಕ ಜೈಲರ್ ಗಳಾದ ಸುಜಾತಾ, ಫಕೀರ್ ಪಟೇಲ್, ಎಮ್. ಎಲ್. ಕಂಬಾರ್, ಎಸ್. ಬಿ. ಅಂಗಡಿ, ಸಂತೋಷ ರೆಡ್ಡಿವರು ಹಾಜರಿದ್ದರು.
ಬಂದಿಗಳಾದ ಅಂಬರೀಶ್, ಸತೀಶ ಮತ್ತು ಇನಾಯತ್ ರವರು ತಾವು ನಿಯಮಿತವಾಗಿ ಯೋಗ ಮಾಡಿ, ಇದರಿಂದ ಲಾಭಾನ್ವಿತರಾಗಿದ್ದು, ಬೇರೆ ಸಹಪಾಠಿಗಳಿಗೂ ಕೂಡ ತರಬೇತಿ ನೀಡುವುದಾಗಿ ತಿಳಿಸಿದರು. ಜೈಲಿನಲ್ಲಿರುವ ಬಂದಿಗಳು ಯೋಗದಲ್ಲಿ ಭಾಗವಹಿಸಿದ್ದರು.