ಕಾರವಾರ: ಸ್ಥಳೀಯ ಸಂಸ್ಥೆಗಳ ಹಾಗೂ ಸರಕಾರದ ಬಜೆಟ್ನ ಶೇ.೨೫ ಅನುದಾನವನ್ನು ವಿವಿಧ ಇಲಾಖೆಗಳ ಮೂಲಕ ಪರಿಶಿಷ್ಟ ಜಾತಿ, ಪಂಗಡದ ಅಭಿವೃದ್ಧಿಗಾಗಿ ಮೀಸಲಿಡುವುದು ಕಡ್ಡಾಯವಾಗಿದ್ದು, ಈ ಕುರಿತು ಎಸ್ಸಿಎಸ್ಪಿ, ಟಿಎಸ್ಪಿಯಲ್ಲಿ ಯೋಜನೆ ಹಮ್ಮಿಕೊಂಡು ಪರಿಶಿಷ್ಟರು ಅಭಿವೃದ್ಧಿ ಹೊಂದುವಂತೆ ಮಾಡುವುದು ಅವಶ್ಯಕ ಎಂದು ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ ಅಧಿಕಾರಿಗಳಿಗೆ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ನಡೆದ ೨೦೨೨-೨೩ನೇ ಸಾಲಿನ ಅನುಸೂಚಿತ ಜಾತಿ (ಎಸ್ಸಿಎಸ್ಪಿ) ಹಾಗೂ ಬುಡಕಟ್ಟು (ಟಿಎಸ್ಪಿ) ಉಪ ಹಂಚಿಕೆಯಡಿ ವಿವಿಧ ಇಲಾಖೆಗಳು ಸಾಧಿಸಿದ ಪ್ರಗತಿ ವಿವರದ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅನುಸೂಚಿತಜಾತಿ ಹಾಗೂ ಅನುಸೂಚಿತ ಬುಡಕಟ್ಟು ಉಪಹಂಚಿಕೆ ಯೋಜನೆಯು ಸರಕಾರದ ಕಡ್ಡಾಯ ಯೋಜನೆಯಾಗಿದೆ. ಶೇ.೨೫ ಅನುದಾನವನ್ನು ಅವರಿಗಾಗಿ ಮೀಸಲಿಟ್ಟು, ವಿವಿಧ ಕಾರ್ಯಕ್ರಮಗಳ ಮೂಲಕ ಅವರ ಅಭಿವೃದ್ಧಿಯನ್ನು ಕಾಣುವುದಾಗಿದೆ. ಈ ಕುರಿತು ಮಾಹಿತಿ ಒದಗಿಸದೇ ಹೋದರೆ ಅದು ನಮ್ಮ ಬಹುದೊಡ್ಡ ಲೋಪವಾಗುತ್ತದೆ. ಹಾಗಾಗಿ ಈ ಯೋಜನೆಯಕುರಿತಾಗಿ ಮಾಹಿತಿ ಒದಗಿಸಿ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳನ್ನು ಪಡೆದು ಪರಿಶೀಲಿಸಿ ಯೋಜನೆಯ ಲಾಭವನ್ನು ತಲುಪಿಸುವ ಕಾರ್ಯವಾಗಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಪ್ರತಿ ತ್ರೈಮಾಸಿಕ ಸಭೆಗೆ ಪ್ರತಿಯೊಂದು ನಿಗಮಗಳ ಮೂಲಕ ಎಸ್ಸಿಎಸ್ಪಿ ಹಾಗೂ ಟಿಎಸ್ಪಿ ಯೋಜನೆಯ ಮೂಲಕ ಸಾಧಿಸಲಾದ ಪ್ರಗತಿ ವಿವರವನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಆಗಸ್ಟ್ ಅಂತ್ಯದೊಳಗೆ ನಡೆದಿರುವ ಯೋಜನೆಗಳ ಸಾಮಾನ್ಯ ಮಾಹಿತಿ ಹಾಗೂ ಅಕ್ಟೋಬರ್ ಅಂತ್ಯದೊಳಗೆ ಆಗಿರುವ ಮಹತ್ವದ ಮಾಹಿತಿಯನ್ನು ಸಭೆಗೆ ತಿಳಿಸಬೇಕು ಎಂದು ಹೇಳಿದರು. ಇಂಧನ ಇಲಾಖೆಯಿಂದ ಜಾರಿಯಾದ ಉಚಿತ ವಿದ್ಯುತ್ ಸೌಲಭ್ಯದ ಮಾಹಿತಿಯನ್ನು ಪ್ರಚಾರ ಮಾಡಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯೋಜನ ಪಡೆಯಲು ತಿಳಿಸಬೇಕು. ೧೦ ಎಚ್ಪಿ ವರೆಗಿನ ಪಂಪ್ಸೆಟ್ಗಳನ್ನು ಹೊಂದಿರುವ ರೈತರ ಸಂಖ್ಯೆಯನ್ನು ಸರ್ವೇ ಮಾಡಿ ನಿಖರ ಹಾಗೂ ಖಚಿತ ಮಾಹಿತಿಯನ್ನು ನೀಡಬೇಕು ಎಂದು ತಿಳಿಸಿದ ಅವರು ಮುಂದಿನ ಸಭೆಯಲ್ಲಿ ಕಾಮಗಾರಿ ಪ್ರಗತಿಯ ಸಂಪೂರ್ಣವಾದ ಮಾಹಿತಿಯನ್ನು ಅಧಿಕಾರಿಗಳು ಒದಗಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಅಜ್ಜಪ್ಪ ಸೊಗಲದ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಪ್ರತೀಕ್ ಶೆಟ್ಟಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ಪ್ರವೀಣಕುಮಾರ, ಜಿಲ್ಲಾ ಆರೋಗ್ಯಾಧಿಕಾರಿ ಶರದ ನಾಯಕ್ ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.