ಕಾರವಾರ: ಸನಾತನ ಪರಂಪರೆ ತಿಳಿಯದ ಕಾಂಗ್ರೆಸಿಗರು ತಮ್ಮ ಪ್ರನಾಳಿಕೆಯಲ್ಲಿ ಭಜರಂಗದಳವನ್ನು ದೇಶದ್ರೋಹಿ ಪಿಎಫ್ಐ ಜೊತೆಗೆ ಹೋಲಿಕೆ ಮಾಡಿದ್ದಾರೆ ಎಂದು ಬಿಜೆಪಿಯ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ನಾಯ್ಕ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕಾಂಗ್ರೆಸ್ ತನ್ನ ಪ್ರನಾಳಿಕೆಯಲ್ಲಿ ಭಜರಂಗದಳವನ್ನು ನಿಷೇಧ ಮಾಡುವುದಾಗಿ ಹೇಳಿರುವುದು ವಿಶೇಷವಲ್ಲ. ಸನಾತನ ಪರಂಪೆರ ತಿಳಿಯದವರು ಹೀಗೆ ಮಾತನಾಡುತ್ತಾರೆ. ಹಿಂದೆ ರಾಮ ಮಂದಿರ ನಿರ್ಮಿಸುವಾಗಲೂ ಅವರ ವಿರೋಧ ಮಾಡಿದ್ದರು. ಅಲ್ಲದೇ ರಾಮ ಸೇತುವೆಯನ್ನು ತೆರವುಗೊಳಿಸಿ ಹಡಗುಗಳ ಓಡಾಟಕ್ಕೆ ಜಾಗ ಮಾಡಿಕೊಡಲು ಹೊರಟಿದ್ದರು. ಈಗ ದೇಶದ್ರೇಹಿ ಪಿಎಫ್ಐ ಜತೆಗೆ ಭಜರಂಗದಳವನ್ನು ಹೋಲಿಕೆ ಮಾಡಿದ್ದಾರೆ. ಹೀಗಾಗಿ ಅದು ವಿಷೇಶವಲ್ಲ ಎಂದರು.
ಜಿಲ್ಲಾ ಬಿಜೆಪಿಯ ಎಲ್ಲಾ ಕಾರ್ಯಕರ್ತರ ಸಹಾಯದಿಂದ ಅಂಕೋಲಾದಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮವು ಯಶಸ್ವಿಯಾಗಿದೆ. ಕಾರ್ಯಕ್ರಮಕ್ಕೆ ಜಿಲ್ಲೆಯ 6 ಕ್ಷೆತ್ರಗಳಿಂದ 2 ಲಕ್ಷ ಜನರು ಆಗಮಿಸಿದ್ದರು. ಅವರು ಮೋದಿಯವರ ಮಾತುಗಳನ್ನು ಇತರರಿಗೆ ತಲುಪಿಸಿ ಈ ಚುನಾವಣೆಯಲ್ಲಿ ಆರು ಕ್ಷೇತ್ರಗಳನ್ನು ಕೂಡಾ ಗೆಲ್ಲಿಸುತ್ತಾರೆ ಎಂದರು.
ಜಿಲ್ಲೆಯಲ್ಲಿ ಚುನಾವಣೆಯ ಪ್ರಚಾರಕ್ಕಾಗಿ ಮೇ 6 ರಂದು ಹೊನ್ನಾವರದ ಸೆಂಟ್ ಜೋಸೆಫ್ ಮೈದಾನಕ್ಕೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾತ ಅವರು ಆಗಮಿಸಲಿದ್ದಾರೆ. ಈ ಮೂಲಕ ಕಾರ್ಯಕರ್ತರಲ್ಲಿ ಇನ್ನಷ್ಟು ಹುಮ್ಮಸ್ಸು ಮೂಡಲಿದೆ. ಜಿಲ್ಲೆಯ ಎಲ್ಲಾ ಭಾಗದಿಂದ 20 ಸಾವಿರ ಜನರು ಸೇರುವ ನಿರೀಕ್ಷೆ ಇದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮಕ್ಕೆ ಸಂಸದ ಅತಂತ ಕುಮಾರ ಹೆಗಡೆ ಅವರು ಗೈರಾದ ಬಗ್ಗೆ ಮಾತನಾಡಿ, ಕಾರ್ಯಕ್ರಮಕ್ಕೂ ಕೆಲವು ದಿನಗಳ ಮುನ್ನ ಕರೆ ಮಾಡಿದ್ದೆವು. ಆಗ ಬರುವುದಾಗಿ ತಿಳಿಸಿದ್ದರು. ಬಳಿಕ ಸಿಂಗಪುರಕ್ಕೆ ತೆರಳುವ ಕೆಲಸ ಇರುವ ಕಾರಣ ಗೈರಾಗಿದ್ದಾರೆ ಎಂದು ಸ್ಪಷ್ಟನೆ ನೀಡಿದರು.
ಮಾಜಿ ಸಚಿವ ಆನಂದ ಅಸ್ನೋಟಿಕರ ಅವರಿಗೆ ಈ ಬಾರಿ ಬಿಜೆಪಿ ಗೆಲ್ಲುವುದು ಖಚಿತವಾಗಿದೆ. ಹೀಗಾಗಿ ಅನಿವಾರ್ಯವಾಗಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಸೈಲ್ ಪರ ಪ್ರಚಾರಕ್ಕಿಳಿದಿದ್ದಾರೆ. ಅವರು ಯಾವ ಪಕ್ಷದಿಂದ ಬಂದಿದ್ದರು, ಬಳಿಕ ಎಲ್ಲಿಗೆ ತೆರಳಿದರು, ಈಗ ಎಲ್ಲಿದ್ದಾರೆ ಎನ್ನುವುದು ಜನರಿಗೆ ತಿಳಿದೆ. ಎಲ್ಲಿಯೂ ನೆಲೆ ಕಾಣದ ಅವರಿಗೆ ಕಾಂಗ್ರೆಸ್ ಪರ ಪ್ರಚಾರ ಅನಿವಾರ್ಯವಾಗಿದೆ. ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿ ಮುಂದಿನ ದಿನಗಳಲ್ಲಿ ಬಿಜೆಪಿ ಸೇರಲು ಬಯಸುವುದು ನನಸಾಗದ ಕನಸು ಎಂದು ಬಿಜೆಪಿಯ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ನಾಯ್ಕ ಹೇಳಿದರು. ಬಿಜೆಪಿಯ ಜಿಲ್ಲಾ ವಕ್ತಾರ ನಾಗರಾಜ ನಾಯಕ, ವಿಶೇಷ ಆಹ್ವಾನಿತ ಮನೋಜ ಭಟ್, ಕಾರವಾರ ನಗರ ಮಂಡಲದ ಅಧ್ಯಕ್ಷ ನಾಗೇಶ ಕುರುಡೇಕರ ಹಾಗೂ ರೋಷನಿ ಮಾಳಸೇಕರ ಇದ್ದರು.