ಕಾರವಾರ: ಸ್ನೇಹಿತ ಹಾಗೂ ಮಾಜಿ ಸಂಸದ ಧ್ರುವನಾರಾಯಣ ನಿಧನ ಅತೀವ ನೋವು ತಂದಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಸಂತಾಪ ಸೂಚಿಸಿದರು.
ಕಾರವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಧ್ರುವನಾರಾಯಣ ನನ್ನೊಂದಿಗೆ ಉತ್ತಮ ಒಡನಾಟ ಹೊಂದಿದ್ದವರು. ಉತ್ತಮ ವಿಚಾರವಾಗಿ ನೆನಪಿಸಿಕೊಳ್ಳುವ ರಾಜಕಾರಣಿಗಳಲ್ಲಿ ಧ್ರುವನಾರಾಯಣ ಕೂಡ ಒಬ್ಬರು. ಅವರ ಹಾಗೆ ಬೇರೆ ಯಾರನ್ನು ನಾನು ನೋಡಿಲ್ಲ. ಯಾವುದೇ ಪಕ್ಷಕ್ಕೆ ಸೀಮಿತವಾಗದೇ ಎಲ್ಲರೊಂದಿಗೂ ಆತ್ಮೀಯನಾಗಿದ್ದ. ಪ್ರತಿಬಾರಿ ಬೆಂಗಳೂರಿಗೆ ಬಂದಾಗ ನನ್ನನ್ನು ಭೇಟಿಯಾಗದೇ ಹೋಗುತ್ತಿರಲಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪ ಸೂಚಿಸಿದರು.
ಚುನಾವಣೆ ಘೋಷಣೆ ಪೂರ್ವದಲ್ಲೇ ರಾಜಕೀಯ ಪಕ್ಷಗಳಿಂದ ಸೀರೆ, ಕುಕ್ಕರ್ ಹಂಚಿಕೆ ವಿಚಾರದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪ್ರಜಾಪ್ರಭುತ್ವದಲ್ಲಿ ಹಣ, ಸೀರೆ ಕುಕ್ಕರ್ ಹಂಚಿಕೆ ಪದ್ದತಿ ಮುಂದುವರಿದಲ್ಲಿ ರಾಜಕಾರಣದಲ್ಲಿ ಒಳ್ಳೆಯವರು ಬರಲು ಸಾಧ್ಯವಿಲ್ಲ. ಈ ರೀತಿ ದುಡ್ಡಿನಿಂದ ಆಟವಾಡಿದರೆ ನ್ಯಾಯ, ನೀತಿ ಎಲ್ಲಿ ಹೋಗಬೇಕು. ಮತದಾರರಾದವರು ಕ್ಷೇತ್ರದಲ್ಲಿ ಯಾರು ಯೋಗ್ಯರಿದ್ದಾರೆ, ಮತದಾರರ ಕಾಳಜಿ ಯಾರು ಮಾಡುತ್ತಾರೆ ಅಂತಹವರಿಗೆ ಮತ ಹಾಕಬೇಕು ಎಂದರು.
ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ ಆತಂಕಕಾರಿಯಾಗಿದೆ. ಬೇರೆಡೆಗಳಲ್ಲಿ ಈ ರೀತಿಯಾದರೆ ಏನಾದರೂ ಹೇಳಬಹುದು. ಆದರೆ ಶಿಕ್ಷಣ ಸಂಸ್ಥೆಗಳಲ್ಲೇ ಈ ರೀತಿಯ ಘಟನೆಗಳು ಭಯ ತಂದಿದೆ. ಶಿಕ್ಷಕರನ್ನು ನಂಬಿ ಪಾಲಕರು ಮಕ್ಕಳನ್ನು ಕಳುಹಿಸಿದಾಗ ಈ ರೀತಿ ಮಾಡಿದರೆ ಮಹಾ ಅಪರಾಧವಾಗಲಿದೆ. ಇಂತಹ ಕೃತ್ಯ ಎಸಗುವವರ ವಿರುದ್ಧ ಕಠಿಣ ಕ್ರಮಕೈಗೊಂಡು ಸೇವೆಯಿಂದ ವಜಾಗೊಳಿಸಬೇಕು. ಈಗಾಗಲೇ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಹಾಸನ ಪ್ರಕರಣ ಸಂಬಂಧಿಸಿದಂತೆ ಕಠಿಣ ಕ್ರಮದ ಭರವಸೆ ನೀಡಿದ್ದಾರೆ. ಅಂತಹ ತಪ್ಪಿತಸ್ಥರಿಗೆ ಕಠಿಣ ಕ್ರಮದ ಮೂಲಕ ಎಚ್ಚರಿಕೆ ನೀಡುವುದು ಸರಕಾರದ ಕರ್ತವ್ಯ ಎಂದರು.