ಕಾರವಾರ: ಮನೆಯಲ್ಲಿ ಮಕ್ಕಳಿಗೆ ಇಂಗ್ಲಿಷ್ ಹೇಳಿಕೊಡಲು ಸಾಧ್ಯವಿಲ್ಲದೆ ಇದ್ದರೂ ಆಂಗ್ಲ ಮಾಧ್ಯಮ ಶಾಲೆಗೆ ಕಳುಹಿಸುತ್ತಾರೆ. ಇದರು ಮಕ್ಕಳ ಭವಿಷ್ಯಕ್ಕೆ ಸರಿಯಲ್ಲ. ಮಾತೃ ಭಾಷೆಯಲ್ಲಿ ಶಿಕ್ಷಣ ಪಡೆದವರೇ ಇಂದು ಉತ್ತಮ ಸ್ಥಾನಕ್ಕೆ ಏರಿದ್ದಾರೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದರು.
ನಗರದ ಜಿಲ್ಲಾ ರಂಗಮಂದಿರದಲ್ಲಿ ಶನಿವಾರ ಶೈಕ್ಷಣಿಕ ಸಮಾವೇಶ ಶೀರ್ಷಿಕೆಯಡಿ ನಡೆದ ಮಕ್ಕಳಲ್ಲಿ ಪರೀಕ್ಷಾ ಭೀತಿ ನಿವಾರಣೆಯಲ್ಲಿ ಶಿಕ್ಷಕರ ಪಾತ್ರ ಹಾಗೂ ಸಭಾಪತಿ ಮತ್ತು ನಿವೃತ್ತ ಶಿಕ್ಷಕರು ಹಾಗೂ ಎಸ್.ಎಸ್.ಎಲ್.ಸಿ ಫಲಿತಾಂಶ ವಿಶ್ಲೇಷಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಖಾಸಗಿ ಸಂಸ್ಥೆಗಳಿಂದಲೇ ಶಿಕ್ಷಣ ವ್ಯವಸ್ಥೆ ಬೆಳೆಯಲು ಸಾಧ್ಯವಿಲ್ಲ. ಈ ಹಿಂದೆ ನಾನು ಶಿಕ್ಷಣ ಮಂತ್ರಿಯಾಗಿದ್ದಾಗ ಖಾಸಗಿಯಾಗಿ ಶಿಕ್ಷಣ ಸಂಸ್ಥೆ ಪ್ರಾರಂಭಿಸುವವರಿಗೆ ಹಣಕಾಸಿನ ಸಹಾಯ ಮಾಡುವುದಾಗಿ ಜಾಹಿರಾತು ನೀಡಿದ್ದೇವು. ಅದರಿಂದಲೇ ಇಂದು ಸಾಕಷ್ಟು ಖಾಸಗಿ ಶಿಕ್ಷಣ ಸಂಸ್ಥೆಗಳು ತಲೆ ಎತ್ತಿವೆ. ಜೊತೆಗೆ ಸಾವಿರಾರು ಶಿಕ್ಷಕರಿಗೆ ಉದ್ಯೋಗವೂ ಸಿಕ್ಕಿದೆ ಎಂದರು.
ಮೊದಲು ಮಕ್ಕಳು ವರ್ಷವಿಡೀ ಅಭ್ಯಾಸ ಮಾಡಿರುವುದನ್ನು ಮೂರು ತಾಸಿನಲ್ಲಿ ಬರೆಯಲು ಅವಕಾಶ ಮಾಡಲಾಗುತ್ತಿತ್ತು. ಆದರೆ ಈಗ ವ್ಯವಸ್ಥೆ ಬದಲಾಗಿದೆ. ಮಕ್ಕಳ ಕಲಿಕೆಯ ಪ್ರತಿ ಹಂತದಲ್ಲಿಯೂ ಪರೀಕ್ಷೆಗಳನ್ನು ನಡೆಸಿ ಮೌಲ್ಯಾಧಾರಿತ ಹಾಗೂ ಜೀವನಾಧಾರಿತ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದೆ ಎಂದರು. ಇಂದಿನ ಸರಕಾರಿ ನೌಕರರ ಹೋರಾಟಗಳನ್ನು ನೋಡಿದರೆ ಈ ಮೊದಲು ನಿವೃತ್ತಿ ಹೊಂದಿದ ಶಿಕ್ಷಕರೇ ಪುಣ್ಯವಂತರು ಎನಿಸುತ್ತದೆ.
ಉತ್ತಮ ಪಿಂಚಣಿ ಪಡೆದು ಕುಟುಂಬದ ಹಾಗೂ ಮಕ್ಕಳ ಹಂಗಿಲ್ಲದೇ ಸಮಾಜದಲ್ಲಿ ತಲೆ ಎತ್ತಿ ಬದುಕುವಂತಹ ಸ್ಥಾನದಲ್ಲಿದ್ದಾರೆ ಎಂದರು. ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ ಮಾತನಾಡಿ, ಶಿಕ್ಷಣ ಕೇತ್ರಕ್ಕೆ ಹೊರಟ್ಟಿ ಅವರ ಕೊಡುಗೆ ಅಪಾರ. ವಿಧಾನ ಪರಿಷತ್ ಸಭೆಯಲ್ಲಿ ಸಣ್ಣ ತಪ್ಪುಗಳು ಸಹ ನಡೆಯದಂತೆ ಉತ್ತಮ ನಿರ್ಣಯಗಳನ್ನು ತೆಗೆದುಕೊಂಡು ಕ್ಷೇತ್ರಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ಕಾರವಾರದ ಶಿಕ್ಷಣ ತಜ್ಷ ಜಿ.ಕೆ. ವೆಂಕಟೇಶ ಮೂರ್ತಿ ಉಪನ್ಯಾಸ ನೀಡಿ, ಮಕ್ಕಳಲ್ಲಿ ಪರೀಕ್ಷೆಯ ಭಯ ಇರಲು ಶಿಕ್ಷಕರೂ ಕೂಡ ಕಾರಣವಾಗವುತ್ತಾರೆ. ಬಳಿಕ ಅವರೇ ನಿವಾರಣೆ ಮಾಡಲು ಮುಂದಾಗುತ್ತಾರೆ ಎಂದರು. ಕೇವಲ ಪರೀಕ್ಷೆಗಳು ಮಕ್ಕಳ ಬುದ್ದಿಮಟ್ಟವನ್ನು ಪ್ರತಿನಿಧಿಸುವುದಿಲ್ಲ. ಹಾಗೆಯೇ ವರ್ಷಡೀ ಓದಿರುವುದನ್ನು ಮೂರು ತಾಸಿನಲ್ಲಿ ಬರೆಯುವ ಪರೀಕ್ಷೆಗಳು ಕೂಡಾ ಅವೈಜ್ಞಾನಿಕ ಎಂದು ಜಗತ್ತಿನ ಶಿಕ್ಷಣ ತಜ್ಞರು ಭಾವಿಸುತ್ತಾರೆ. ಇದಕ್ಕಾಗಿಯೇ ಮಕ್ಕಳಿಗೆ ಪುಸ್ತಕದಲ್ಲಿರುವುದನ್ನು ಕಲಿಸುವುದಕ್ಕಿಂತ ಅವರ ಅನುಭವಕ್ಕೆ ಬರುವಂತೆ ಕಲಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಕಾರವಾರ ತಾಲೂಕಿನ ಫ್ರೌಡಶಾಲೆಗಳ ನಿವೃತ್ತ ಶಿಕ್ಷಕರಿಗೆ ಹಾಗು ಎಸ್.ಎಸ್.ಎಲ್.ಸಿ ಪರೀಕ್ಷೆಗಳನ್ನು ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು. ಫ್ರೌಡಶಾಲೆಯ ಶಿಕ್ಷಕರ ಸಂಘದಿಂದ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಸನ್ಮಾನ ಮಾಡಲಾಯಿತು. ಕರ್ನಾಟಕ ರಾಜ್ಯ ಮಾದ್ಯಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ ಪ್ರಭಾಕರ ಬಂಟ್, ನಗರಸಭಾ ಅಧ್ಯಕ್ಷ ನಿತಿನ್ ಪಿಕಳೆ, ಶಿಕ್ಷಣ ಇಲಾಖೆಯ ಉಪನಿರ್ದೇಶಕ ಈಶ್ವರ ನಾಯಕ, ಜಿ.ಆರ್. ಭಟ್, ಕ್ಷೇತ್ರ ಶಿಕ್ಷಣಾಧಿಕಾರಿ ಶಾಂತೇಶ ನಾಯಕ, ಮಂಗಲಾ, ಎಲ್. ಎಂ ಹೆಗಡೆ, ಎಂ.ಪಿ ಗೌಡ, ಜೈರಂಗನಾಥ, ರವೀಂದ್ರನಾಥ, ರವೀಂದ್ರ ಕೇಣಿ ಹಾಗೂ ಶಿಕ್ಷಕರು ಇದ್ದರು.