ಕಾರವಾರ: ಜಿಲ್ಲೆಯ ಕಾರವಾರ ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳಿಗೆ ಜಿಲ್ಲಾ ಪಂಚಾಯತ್ನ ಅಭಿವೃದ್ಧಿ ಶಾಖೆಯ ಉಪ ಕಾರ್ಯದರ್ಶಿಗಳಾದ ಡಿ.ಎಂ. ಜಕ್ಕಪ್ಪಗೋಳ್ ಅವರು ಶುಕ್ರವಾರ ಭೇಟಿ ನೀಡಿ, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಅಭಿವೃದ್ಧಿಪಡಿಸಲಾದ ಕಾಮಗಾರಿಗಳ ಗುಣಮಟ್ಟ ಪರಿಶೀಲಿಸಿದರು.
ತಾಲೂಕಿನ ಮಜಾಳಿ ಗ್ರಾಪಂ ವ್ಯಾಪ್ತಿಯಲ್ಲಿ ಬಚ್ಚಲು ಗುಂಡಿ, ಕೃಷಿ ಭಾವಿ, ವಸತಿ ಮನೆ ಫೌಂಡೇಷನ್, ಮುಡಗೇರಿಯಲ್ಲಿ ಸ್ಮಶಾನ ಅಭಿವೃದ್ಧಿ, ಕಸ ವಿಲೇವಾರಿ ಘಟಕ, ರಸ್ತೆ ನಿರ್ಮಾಣ, ಶಾಲಾ ಆಟದ ಮೈದಾನ, ಅಸ್ನೋಟಿಯಲ್ಲಿ ಹಳ್ಳ ಹೂಳೆತ್ತುವುದು, ಹಣಕೋಣದಲ್ಲಿ ಭೀಮ್ಕೋಲ್ ಕೆರೆ ಅಭಿವೃದ್ಧಿ, ವಸತಿ ಮನೆ, ಶಿರವಾಡದಲ್ಲಿ ಶಾಲಾ ಶೌಚಾಲಯ, ಬಚ್ಚಲು ಗುಂಡಿ, ವಸತಿ ಮನೆ, ಕಡವಾಡದಲ್ಲಿ ಶಾಲಾ ಕಾಂಪೌಂಡ್, ಕಸ ವಿಲೇಬಾರಿ ಘಟಕ, ಹಳ್ಳ ಹೂಳೆತ್ತುವ ಹಾಗೂ ಹಳ್ಳಕ್ಕೆ ತಡೆಗೋಡೆ ನಿರ್ಮಾಣದಂತಹ ಅಭಿವೃದ್ಧಿ ಕಾಮಗರಿಗಳ ಸ್ಥಳಕ್ಕೆ ತೆರಳಿ ಕಾಮಗಾರಿಯ ಗುಣಮಟ್ಟ, ಕಡತಗಳು ಹಾಗೂ ನಾಮ ಪಲಕಗಳನ್ನು ಪರಿಶೀಲಿಸಿದರು.
ಇದೇ ವೇಳೆ ಮಾತನಾಡಿದ ಅವರು, ಹಳ್ಳಿಗಳ ಜನರು ಗುಳೆ ಹೋಗುವುದನ್ನು ತಡೆಗಟ್ಟಲು ನರೇಗಾ ತುಂಬಾ ಸಹಕಾರಿಯಾಗಿದೆ. ಪುರುಷ-ಮಹಿಳೆಗೆ ಸಮಾನ ಕೂಲಿ ನೀಡಲಾಗುತ್ತಿದ್ದು, ವಿಕಲ ಚೇತನರು, ವಯೋವೃದ್ಧರಿಗೆ ಕೆಲಸದಲ್ಲಿ ವಿನಾಯಿತಿ ನೀಡಿ ಪೂರ್ತಿ ಕೂಲಿ ಪಾವತಿಗೆ ಅವಕಾಶ ಕಲ್ಪಿಸಲಾಗಿದೆ.
ಮಹಿಳಾ ಪಾಲ್ಗೊಳ್ಳುವಿಕೆ ಹೆಚ್ಚೊಸಲು ಮಹಿಳಾ ಕಾಯಕೋತ್ಸವ, ಮಹಿಳಾ ಉದ್ಯೋಗ ಸಬಲೀಕರಣ ಅಭಿಯಾನ ನಡೆಸಲಾಗುತ್ತಿದೆ. ಲಿಂಗತ್ವ ಅಲ್ಪಸಂಖ್ಯಾತರಿಗೆ ನರೇಗಾದಡಿ ಕೆಲಸ ನೀಡಿ ಮುಖ್ಯವಾಹಿನಿಗೆ ತರಲಾಗುತ್ತಿದೆ. ಹೀಗಾಗಿ ಗ್ರಾಮೀಣ ಪ್ರದೇಶಗಳಲ್ಲಿನ ಪ್ರತಿಯೊಬ್ಬರಿಗೂ ಗ್ರಾಮ ಪಂಚಾಯತಿಗಳಿಂದ ಉದ್ಯೋಗ ಚೀಟಿ ವಿತರಿಸುವ ಕಾರ್ಯವಾಗಬೇಕು. ಜೊತೆಗೆ ವೈಯಕ್ತಿಕ ಕಾಮಗಾರಿಗಳಾದ ಪೌಷ್ಟಿಕ ಕೈತೋಟ, ಕೃಷಿ ಬಾವಿ, ದನದ ಕೊಟ್ಟಿಗೆ, ಕೋಳಿ, ಕುರಿ, ಮೇಕೆ ಹಾಗೂ ಹಂದಿ ಶೆಡ್ ನಿರ್ಮಾಣದಂತ ಕಾಮಗಾರಿಗಳು ಜನರಿಗೆ ತಲುಪುವಂತೆ ಜಾಗೃತಿ ಮೂಡಿಸಬೇಕು. ಶಾಲೆ ಶೌಚಾಲಯ, ಆಟದ ಮೈದಾನ, ಕಾಂಪೌಂಡ್, ಅಂಗನವಾಡಿ ಕಟ್ಟಡ ಹಾಗೂ ಪೌಷ್ಟಿಕ ಕೈತೋಟ ನಿರ್ಮಾಣದಂತಹ ಸಮುದಾಯ ಕಾಮಗಾರಿಗೂ ಆಧ್ಯತೆ ನೀಡಬೇಕು. ಸ್ವ-ಸಹಾಯ ಸಂಘದ ಮಹಿಳೆಯರು ಎನ್ಆರ್ಎಲ್ಎಂ ಹಾಗೂ ನರೇಗಾ ಒಗ್ಗೂಡಿಸುವಿಕೆಯಡಿ ಲಭ್ಯವಿರುವ ಎನ್ಆರ್ಎಲ್ಎಂ ವರ್ಕ್ ಶೆಡ್, ನರ್ಸರಿ ಕಾಮಗಾರಿ ಪಡೆದುಕೊಂಡು ಜೀವನೋಪಾಯ ಕಂಡುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಹಣಕೋಣ ಗ್ರಾಪಂ ಪಿಡಿಒ ಮಹೇಶ ಗಾವಡೆ, ಶಿರವಾಡ ಗ್ರಾಪಂ ಪಿಡಿಒ ಅರುಣಾ ಎನ್., ಕಡವಾಡ ಗ್ರಾಪಂ ಪಿಡಿಒ ಪ್ರಭಾವತಿ ಬಂಟ್, ಮುಡಗೇರಿ ಗ್ರಾಪಂ ಕಾರ್ಯದರ್ಶಿ ರಾಜೇಂದ್ರ, ಐಇಸಿ ಸಂಯೋಜಕರಾದ ಫಕ್ಕೀರಪ್ಪ ತುಮ್ಮಣ್ಣನವರ, ಸೌಂದರ್ಯ, ಗ್ರಾಪಂ ಸಿಬ್ಬಂದಿ ದೀಪಾ ನಾಯ್ಕ, ಸುಮೀರ್ ನಾಗೇಕರ, ಮಂಗೇಶ ಗೋವೆಕರ, ಸುವರ್ಣಾ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.