ಕಾರವಾರ: ಬಿಜೆಪಿಯು, ಡಬಲ್ ಇಂಜಿನ್ ಸರ್ಕಾರ ಎಂದು ಹೇಳಿಕೊಳ್ಳುತ್ತಿದ್ದು, ಅವರು ಹೇಳಿದಂತೆ ನಡೆದುಕೊಳ್ಳುತ್ತಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ೧೫೦ ಕ್ಕೂ ಅಧಿಕ ಅಭ್ಯರ್ಥಿಗಳು ಗೆಲವು ಸಾಧಿಸಿ, ಮತ್ತೊಮ್ಮೆ ಕಾಂಗ್ರೆಸ್ ಸರ್ಕಾರ ರಚಿಸುತ್ತೇವೆ ಎಂದು ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದರು.
ಅವರು ಕುಮಟಾ ತಾಲೂಕಿನ ಮಣಕಿ ಮೈದಾನದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡ ಬೃಹತ್ ಸಮಾವೇಶ ಉದ್ಘಾಟಿಸಿ, ಮಾತನಾಡಿದರು. ಉತ್ತರಕನ್ನಡ ಜಿಲ್ಲೆಯ ಜನರಿಗೆ ಮನೆ, ಜಮೀನಿದ್ದು, ಉದ್ಯೋಗವಿಲ್ಲದೇ ಜೀವನ ನಿರ್ವಹಣೆಯು ಕಷ್ಟವಾಗಿದ್ದು, ರೈತರ ಆದಾಯ ದ್ವಿಗುಣ, ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ ೧೫ ಲಕ್ಷ, ೭ ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ದೊಡ್ಡದಾಗಿ ಹೇಳಿಕೊಂಡ ಅಧಿಕಾರಕ್ಕೆ ಬಂದ ಬಿಜೆಪಿಯವರು ಜನರಿಗೆ ಮೋಸ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಪಕ್ಷ ಸಂವಿಧಾನ, ರಾಷ್ಟ್ರಧ್ವಜ, ಪ್ರಜಾಪ್ರಭುತ್ವವನ್ನು ದೇಶಕ್ಕೆ ನೀಡಿದೆ. ಬಿಜೆಪಿಯ ಸುಳ್ಳು ರಾಜಕಾರಣದಿಂದ ಕರಾವಳಿ ಭಾಗದಲ್ಲಿ ಕಾಂಗ್ರೆಸ್ ಶಾಸಕರು ಸೋತಿರುವುದು ಬಹಳ ನೋವಿನ ಸಂಗತಿಯಾಗಿದ್ದು, ಮುಂದಿನ ದಿನಗಳಲ್ಲಿ ೬ ಸ್ಥಾನಗಳನ್ನು ಗೆಲ್ಲಿಸುತ್ತಾರೆ ಎಂಬ ವಿಶ್ವಾಸ ಮೂಡಿದೆ. ಬಸವಣ್ಣ, ಕುವೆಂಪು, ಕನಕದಾಸ, ಸಂತ ಶಿಶುನಾಳ ಶರೀಫ್ ಸೇರಿದಂತೆ ಮಹಾನ್ ನಾಯಕರ ಕರ್ನಾಟಕವಾಗಿದ್ದು, ಆದರೆ ಬಿಜೆಪಿಯು ದ್ವೇಷ, ಭ್ರಷ್ಟಾಚಾರ,ಅಸೂಯೆ, ಶಾಂತಿಭಂಗ, ಕೋಮು ವಿಷಬೀಜ ಬಿತ್ತಿ ಜನರು ವಲಸೆ ಹೋಗುವಂತೆ ಮಾಡಿದೆ.
ಆದಾಯ ಕುಂಠಿತ, ನಿರುದ್ಯೋಗ, ರೈತರ ಹಿತದೃಷ್ಟಿಯಿಂದ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಸಾವಿರಾರು ಕಿ.ಮೀ ಪಾದಯಾತ್ರೆ ಹಮ್ಮಿಕೊಂಡಿದ್ದರು. ಅದಕ್ಕೆ ಸಾವಿರಾರು ಕಾರ್ಯಕರ್ತರು ಹೆಜ್ಜೆ ಹಾಕಿ ದೇಶದಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಸೋನಿಯಾ ಗಾಂಧಿ ಕುಟುಂಬ ದೇಶಕ್ಕೆ ತ್ಯಾಗ ಮಾಡಿದ ಕುಟುಂಬವಾಗಿದ್ದು, ದೇಶದ ಜನರ ಋಣ ತೀರಿಸಲು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ ಹೇಳುತ್ತಾರೆ. ಅವರಿಗೆ ಶಕ್ತಿ ತುಂಬಲು ಕಾಂಗ್ರೆಸ್ ಬಲಪಡಿಸಬೇಕು ಎಂದರು.ಹೊನ್ನಾವರದ ಪರೇಶ ಮೇಸ್ತ ಸಾವಿನಲ್ಲಿ ರಾಜಕೀಯ ಮಾಡಿದ ಬಜೆಪಿ ಮುಖವಾಡ ಬಯಲು ಮಾಡಲು ಮತ್ತು ಬೆಲೆ ಏರಿಕೆ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಲು ಸಮಾವೇಶ ಹಮ್ಮಿಕೊಂಡಿದ್ದೇವೆ.
ಐತಿಹಾಸಿಕ ಸಭೆಯ ಮೂಲಕ ರಾಜ್ಯಕ್ಕೆ ಸ್ಪಷ್ಟ ಸಂದೇಶ ನೀಡಿದ್ದೇವೆ. ಕುಮಟಾದಲ್ಲಿ ಕಾಂಗ್ರೆಸ್ನ ಜ್ಯೋತಿ ಹಚ್ಚಿದ್ದೇವೆ. ಇದು ರಾಜ್ಯದಾದ್ಯಂತ ಬೆಳಗಲಿದ್ದು, ಸಮಾವೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿ, ಸಂಘಟನೆಗೆ ಶಕ್ತಿ ನೀಡಿದ್ದಾರೆ. ಅಲ್ಲದೇ ಉತ್ತರಕನ್ನಡ ಜಿಲ್ಲೆಯ ಜನರು ೬ ಶಾಸಕರನ್ನು ಗೆಲ್ಲಿಸಿ, ಕಾಂಗ್ರೆಸ್ಗೆ ಮಹಾಶಕ್ತಿ ನೀಡುತ್ತಾರೆ ಎಂಬ ನಂಬಿಕೆಯಿದ್ದು, ಜಿಲ್ಲೆಯು ನೋವಿನಿಂದ ನರಳಾಡುತ್ತಿದೆ. ಜಿಲ್ಲೆಯ ಜನರ ಶ್ರೇಯೋಭಿವೃದ್ಧಿಗೆ ಕಾಂಗ್ರೆಸ್ ಶ್ರಮಿಸಲಿದೆ ಎಂದರು. ಗುತ್ತಿಗೆಯಲ್ಲಿ ೪೦ ಫರ್ಸಂಟೆಜ್ ಕೇಳುವ ಸರ್ಕಾರದಿಂದ ಗುತ್ತಿಗೆದಾರರು ಸಚಿವರ ಹೆಸರು ಬರೆದಿಟ್ಟು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಗ ಮತ್ತೊಬ್ಬರು ದಯಾಮರಣಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಬಜೆಪಿ ಸರ್ಕಾರದ ವೈಫಲ್ಯವನ್ನು ಜನರಿಗೆ ತಿಳಿಸುವ ಉದ್ದೇಶದಿಂದ ತಾಲೂಕು ಮತ್ತು ಕ್ಷೇತ್ರ ಮಟ್ಟದಲ್ಲಿ ಪ್ರವಾಸ ಕೈಗೊಳ್ಳಲಿದ್ದೇವೆ. ಮುಂಬರ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ಗೆ ಆಶೀರ್ವಾದ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಸಚಿವ ಮತ್ತು ಹಾಲಿ ಶಾಸಕ ಆರ್.ವಿ.ದೇಶಪಾಂಡೆ ಮಾಜಿ ಸಚಿವ ಯು.ಟಿ.ಖಾದರ್, ಕೆ.ಪಿ.ಸಿ.ಸಿ ಉಪಾಧ್ಯಕ್ಷ ಐವನ್ ಡಿಸೋಜಾ , ಮಾಜಿ ಶಾಸಕ ಮಧು ಬಂಗಾರಪ್ಪ, ಕಾಂಗ್ರೆಸ್ ರಾಷ್ಟ್ರೀಯ ಮುಖಂಡ ಮಯೂರ ಜಯಕುಮಾರ ಮಾತನಾಡಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಮಾಜಿ ಸಚಿವ ವಿನಯಕುಮಾರ ಸೋರಕೆ, ಮಾಜಿ ಶಾಸಕರಾದ ಸತೀಶ್ ಸೈಲ್, ಶಾರದಾ ಶೆಟ್ಟಿ, ಮಾಜಿ ಶಾಸಕಿ ಪಕ್ಷದ ಮುಖಂಡರಾದ ಸಚಿನ ಮೇಗಾರ, ರಮಾನಂದ ನಾಯಕ, ಜೆ.ಡಿ.ನಾಯ್ಕ, ಆರ್.ಎನ್.ನಾಯ್ಕ, ಕೆ.ಎಚ್.ಗೌಡ, ಪ್ರಮುಖರಾದ ರವಿಕುಮಾರ ಶೆಟ್ಟಿ, ಶಿವಾನಂದ ಹೆಗಡೆ ಕಡತೋಕಾ, ರತ್ನಾಕರ ನಾಯ್ಕ, ಭಾಸ್ಕರ ಪಟಗಾರ, ಗಾಯತ್ರಿ ಗೌಡ ಸೇರಿದಂತೆ ಮತ್ತಿತರರು ಇದ್ದರು.