News Karnataka Kannada
Tuesday, April 30 2024
ಬೆಂಗಳೂರು ನಗರ

ರಾಮನಗರ: ಬಿಡದಿ ಆರೋಗ್ಯ ಕೇಂದ್ರಕ್ಕೆ ಲೋಕಾಯುಕ್ತ ಎಸ್‌ಪಿ ಭೇಟಿ

Ramanagara: Lokayukta SP visits Bidadi health centre
Photo Credit : By Author

ರಾಮನಗರ: ಲೋಕಾಯುಕ್ತ ಎಸ್‌ಪಿ ಪುಟ್ಟಮಾದಯ್ಯ ಹಾಗೂ ಅಧಿಕಾರಿಗಳ ತಂಡ ಬಿಡದಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಲ್ಲೂಕಿನ ಬಿಡದಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇತ್ತೀಚೆಗೆ ವೈದ್ಯೆಯರಿಬ್ಬರು ಬಾಣಂತಿ ಡಿಸ್ಚಾರ್ಜ್‌ಗಾಗಿ ಲಂಚದ ಹಣಕ್ಕೆ ಬೇಡಿಕೆಯಿಟ್ಟ ಆರೋಪದ ಮೇಲೆ ಸೇವೆಯಿಂದ ಅಮಾನತುಗೊಂಡಿರುವ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲಾ ಲೋಕಾಯಕ್ತ ಎಸ್‌ಪಿ ಪುಟ್ಟಮಾದಯ್ಯ, ಡಿವೈಎಸ್‌ಪಿ ಎಂ.ಆರ್.ಗೌತಮ್ ಹಾಗೂ ನಿರೀಕ್ಷಕರಾದ ಶಶಿಕಲಾ ನೇತೃತ್ವದ ಅಧಿಕಾರಿಗಳ ತಂಡ ಬಿಡದಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ಕೊಟ್ಟು ಆಸ್ಪತ್ರೆಯ ಅಧಿಕಾರಿಗಳಿಂದ ಕೆಲವು ಅಗತ್ಯ ಮಾಹಿತಿಯನ್ನು ಕಲೆ ಹಾಕಿದರು.

ಸಂಜೆ 4 ಗಂಟೆಯ ವೇಳೆಗೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಲೋಕಾಯುಕ್ತ ಅಧಿಕಾರಿಗಳು ಆಸ್ಪತ್ರೆಯಲ್ಲಿನ ದಾಖಲಾತಿ ಮತ್ತು ಡಿಸ್ಚಾರ್ಜ್ ಸಮರಿ, ಕಾರ್ಯನಿರತ ವೈದ್ಯರು, ನರ್ಸ್ ಹಾಗೂ ಸಿಬ್ಬಂದಿ ಹಾಜರಾತಿ ಪುಸ್ತಕ ಸೇರಿದಂತೆ ಕೆಲವು ಕಡತಗಳನ್ನು ಪರಿಶೀಲಿಸಿದರು. ನಂತರ ಆಸ್ಪತ್ರೆಯಲ್ಲಿ ವಾರ್ಡ್‌ಗಳಲ್ಲಿ ಒಂದು ಸುತ್ತು ಹಾಕಿದ ಅಧಿಕಾರಿಗಳು ಹೊರ ಮತ್ತು ಒಳ ರೋಗಿಗಳಿಂದ ವೈದ್ಯಕೀಯ ಸೇವೆ ಹಾಗೂ ಕುಂದು ಕೊರತೆಗಳ ಬಗ್ಗೆ ವಿಚಾರಿಸಿ ಸ್ವತಹ ಮಾಹಿತಿ ಪಡೆದುಕೊಂಡರು.

ಇದೇ ವೇಳೆ ಔಷಧಿ ವಿತರಣೆ ಕೌಂಟರ್‌ಗೆ ಭೇಟಿ ಕೊಟ್ಟು ಲಭ್ಯವಿರುವ ಹಾಗೂ ಅಗತ್ಯವಿರುವ ಔಷಧಗಳು, ಆಸ್ಪತ್ರೆಯಲ್ಲಿನ ಸ್ವಚ್ಛತೆ ಮತ್ತು ಸೇವೆಗಳ ಕುರಿತು ಪರಿಶೀಲನೆ ನಡೆಸಿದರು. ರೋಗಿಗಳಿಗೆ ಸಮಸ್ಯೆ ಆದಾಗ ದೂರು ಸಲ್ಲಿಸಲು ಸಂಪರ್ಕಿಸಬೇಕಾದ ಹೆಲ್ಪ್ ಲೈನ್ ಅಥವಾ ಲೋಕಾಯುಕ್ತ ಅಧಿಕಾರಿಗಳ ದೂರವಾಣಿ ಸಂಖ್ಯೆಯುಳ್ಳ ಪ್ರಚಾರ ಫಲಕ (ಡಿಸ್‌ಪ್ಲೆ ಬೋರ್ಡ್) ವನ್ನು ಆಸ್ಪತ್ರೆಯಲ್ಲಿಶೀಘ್ರವೇ ಅಳವಡಿಸುವಂತೆ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

ಆರೋಗ್ಯ ಇಲಾಖೆಯಲ್ಲಿ ದೊರೆಯುವ ಸರ್ಕಾರದ ಯೋಜನೆಗಳ ಸೌಲತ್ತುಗಳು ಎಎನ್‌ಎಂ ಸಿಬ್ಬಂದಿಯಿಂದ ತಲುಪುತ್ತಿದೆಯೇ ಎಂದು ಲೋಕಾಯುಕ್ತ ಎಸ್ಪಿ ಪುಟ್ಟಮಾದಯ್ಯ ಅವರು ಪ್ರಶ್ನಿಸಿದರು. ಇದಕ್ಕೆ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ರಾಘವೇಂದ್ರ ಅವರು ಬಿಡದಿಯ 35ಸಾವಿರ ಜನಸಂಖ್ಯೆಗೆ ಕೇವಲ ಇಬ್ಬರು ಎಎನ್‌ಎಂ ಸಿಬ್ಬಂದಿ ಮಾತ್ರ ಫೀಲ್ಡ್ ವರ್ಕ್ ಮಾಡುತ್ತಿದ್ದಾರೆ. ಸಿಬ್ಬಂದಿ ಹೆಚ್ಚಳಕ್ಕೆ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ಉತ್ತರಿಸಿದರು.

ಬಿಡದಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇತ್ತೀಚೆಗೆ ನಡೆದಿದ್ದ ಲಂಚದ ಹಣ ಬೇಡಿಕೆ ಪ್ರಕರಣ ಹಾಗೂ ಸೇವೆನಿರತ ವೈದ್ಯೆಯರಾದ ಡಾ.ಶಶಿಕಲಾ ಮತ್ತು ಡಾ.ಐಶ್ವರ್ಯ ಅವರ ವಿರುದ್ಧ ಕೈಗೊಂಡಿರುವ ಶಿಸ್ತು ಕ್ರಮಗಳ ಕುರಿತು ಲೋಕಾಯುಕ್ತ ಎಸ್‌ಪಿ ಪುಟ್ಟಮಾದಯ್ಯ ಅವರು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಕಾಂತರಾಜು ಅವರಿಂದ ಮಾಹಿತಿ ಪಡೆದುಕೊಂಡರು. ಆಸ್ಪತ್ರೆಯಲ್ಲಿ ಅಳವಡಿಸಿರುವ ಸಿಸಿ ಟಿವಿ ಕ್ಯಾಮರಾ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬ ಬಗ್ಗೆ ಖಾತರಿ ಪಡಿಸಿಕೊಂಡರು.

ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಲೋಕಾಯುಕ್ತ ಕಚೇರಿ ಕಂಪ್ಲೆಂಟ್ ದೂರವಾಣಿ ಸಂಖ್ಯೆಯುಳ್ಳ 4×3 ಅಡಿ ವಿಸ್ತೀರ್ಣದ ಡಿಸ್‌ಪ್ಲೇ ಬೋರ್ಡ್ ಅಳವಡಿಸಲು ಶೀಘ್ರ ಕ್ರಮ ವಹಿಸಬೇಕು. ಇನ್ನೊಂದು ವಾರದಲ್ಲಿ ಎಲ್ಲಾ ಕಡೆ ಡಿಸ್‌ಪ್ಲೇ ಬೋರ್ಡ್‌ಗಳು ಕಾಣುವಂತಿರಬೇಕು ಎಂದು ಡಿಹೆಚ್‌ಒ ಡಾ.ಕಾಂತರಾಜು ಅವರಿಗೆ ಲೋಕಾಯುಕ್ತ ಎಸ್‌ಪಿ ತಾಕೀತು ಮಾಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು