ಕಾರವಾರ: ಹಳಿಯಾಳದ ಇಐಡಿ ಸಕ್ಕರೆ ಕಾರ್ಖಾನೆಯವರು ಸಕ್ಕರೆ ಆಯುಕ್ತರ ಸಭೆಯಲ್ಲಿ ರೈತರಿಗೆ ನೀಡಿದ ಭರವಸೆಗಳನ್ನು ಈಡೇರಿಸದೆ ಕಬ್ಬು ಖರೀದಿಸುವ ವೇಳೆ ತೂಕ ಮತ್ತು ಅಳತೆಯಲ್ಲಿ ಮೋಸ ಮಾಡುತ್ತಿದ್ದು, ಸುಮಾರು 60 ಸಾವಿರ ಟನ್ ತೂಕವನ್ನು ರೈತರಿಗೆ ಮೋಸ ಮಾಡಲಾಗಿದೆ ಎಂದು ಕಬ್ಬು ಬೆಳೆಗಾರರ ಸಂಘಟನೆ ಪ್ರಮುಖರಾದ ನಾಗೇಂದ್ರ ಜಿವೊಜಿ ಆರೋಪಿಸಿದರು.
ನಗರದ ಜಿಲ್ಲಾ ಪತ್ರಿಕಾಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಬ್ಬು ಬೆಳೆಗಾರರು 50 ದಿನಗಳ ಕಾಲ ನಿರಂತರ ಹೋರಾಟ ನಡೆಸಿದ ಬಳಿಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಕ್ಕರೆ ಆಯುಕ್ತರು ಕಾರ್ಖಾನೆ ಅಧಿಕಾರಿಗಳು ಹಾಗೂ ರೈತರ ಸಭೆ ನಡೆಸಿತ್ತು. ಅದರಂತೆ ಸಭೆಯಲ್ಲಿ ತೂಕ ಮತ್ತು ಅಳತೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವಂತೆ, ಕಬ್ಬಿನ ರಿಕವರಿ ಬಗ್ಗೆ ಪ್ಯಾಕ್ಟರಿ ಅವರು ಸರಿಯಾಗಿ ಮಾಹಿತಿ ನೀಡುವಂತೆ ಹಾಗೂ ಹೊರಗಡೆ ಕಬ್ಬಿನ ಬದಲು ಸ್ಥಳೀಯ ಕಬ್ಬು ಮೊದಲು ಖರೀದಿಸುವ ಬಗ್ಗೆ ವಾಗ್ದಾನ ನೀಡಿದ್ದರು.
ಆದರೆ ಯಾವುದೇ ಭರವಸೆಯನ್ನು ಈಡೇರಿಸಿಲ್ಲ. ಈ ಬಗ್ಗೆ ಜಿಲ್ಲಾಡಳಿತಕ್ಕೆ ಸರ್ಕಾರಕ್ಕೆ ದೂರು ನೀಡಿದರು ಅಧಿಕಾರಿಗಳು ಕಣ್ಣೆತ್ತಿಯೂ ನೋಡುತ್ತಿಲ್ಲ ಎಂದು ದೂರಿದರು.ಇನ್ನು ಇಐಡಿ ಸಕ್ಕರೆ ಕಾರ್ಖಾನೆಯಲ್ಲಿ ತೂಕದಲ್ಲಿ ರೈತರಿಗೆ ಮೋಸ ಮಾಡುತ್ತಿರುವುದವನ್ನು ಸಂದೀಪಕುಮಾರ್ ಬೊಬಾಟಿ ಲೈವ್ ವಿಡಿಯೋ ಮೂಲಕ ಪತ್ತೆ ಮಾಡಿದ್ದಾರೆ.
ಕಾರ್ಖಾನೆಯಲ್ಲಿ 100 ಕೆ.ಜಿ ತೂಗುವ ತೂಕ ಕೇವಲ 90 ಕೆ.ಜಿ ಮಾತ್ರ ತೂಗಿ ರೈತರಿಗೆ ಮೋಸ ಮಾಡಿದ್ದಾರೆ. ಈವರೆಗೆ 6 ಲಕ್ಷ ಟನ್ ನುರಿಸಲಾಗಿದ್ದು ಸುಮಾರು 60 ಸಾವಿರ ಟನ್ ತೂಕದ ಕಬ್ಬು ರೈತರಿಗೆ ಮೋಸವಾಗಿದೆ. ಅಂದಾಜು ಸುಮಾರು 16 ಕೋಟಿ ಹಣವನ್ನು ಕಂಪೆನಿಯವರು ರೈತರಿಗೆ ಮೋಸ ಮಾಡಿದ್ದಾರೆ ಎಂದು ದೂರಿದರು. ಇನ್ನು ಈ ಸಂಬಂಧ ಜಿಲ್ಲಾಧಿಕಾರಿ, ಮುಖ್ಯಮಂತ್ರಿ, ಸಕ್ಕರೆ ಆಯುಕ್ತರಿಗೆ ದೂರು ನೀಡಲಾಗಿದೆ. ಇಷ್ಟೊಂದು ಮೋಸ ಮಾಡುತ್ತಿದ್ದರು ಜಿಲ್ಲಾಡಳಿತ ಇಲ್ಲವೇ ಸಂಬಂಧಪಟ್ಟ ಇಲಾಖೆ ಪರಿಶೀಲನೆ ನಡೆಸಿಲ್ಲ. ಈ ಬಗ್ಗೆ ಸೂಕ್ತ ಕ್ರಮಕೈಗೊಂಡು ರೈತರಿಗೆ ನ್ಯಾಯ ಒದಗಿಸದೆ ಇದ್ದಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಈ ವೇಳೆ ಅಶೋಕಿ ಮೇಟಿ, ಎನ್.ವಿ ಘಾಡಿ, ಮಂಜುಳಾ ಪಾಟೀಲ್ ರೇಷ್ಮಾ ಪಾಟೀಲ್ ಇದ್ದರು.