ಕಾರವಾರ: ಉತ್ತರ ಕನ್ನಡದ ಬಹುತೇಕ ಎಲ್ಲಾ ತಾಲೂಕುಗಳಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅನುಮತಿ ಪಡೆಯದೇ ಕೆಂಪು ಕಲ್ಲು ಗಣಿಗಾರಿಕೆ ಮಾಡಲಾಗುತ್ತಿದೆ. ಆದರೂ ಅಧಿಕಾರಿಗಳು ಮಾತ್ರ ತಮಗೆ ಬೇಕಾದವರನ್ನ, ರಾಜಕಾರಣಿಗಳ ಪ್ರಭಾವ ಹೊಂದಿರುವವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಬಿಡುತ್ತಿದ್ದಾರೆ ಎನ್ನುವ ಆರೋಪ ವ್ಯಕ್ತವಾಗಿದೆ.
ಜಿಲ್ಲೆಯಲ್ಲಿ ಕಳೆದ ಎರಡು ವರ್ಷದ ಹಿಂದೆ ಇಂಡಿಯನ್ ಬ್ಯುರೋ ಆಫ್ ಮೈನ್ಸ್, ಅಲ್ಯುಮಿನಿಯಂ ಕಂಟೆಂಟ್ ಶೇಕಡಾ 20ಕ್ಕಿಂತ ಹೆಚ್ಚಿದ್ದ ಪ್ರದೇಶದಲ್ಲಿ ಕೆಂಪು ಕಲ್ಲು ತೆಗೆಯದಂತೆ ಆದೇಶ ಮಾಡಿತ್ತು. ಮಾಲ್ಕಿ ಜಮೀನಿನಲ್ಲಿ ಕೃಷಿ ಚಟುವಟಿಕೆಗೆ ಭೂಮಿ ಸಮತಟ್ಟು ಮಾಡಿಕೊಳ್ಳಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಅನುಮತಿ ಪಡೆದೇ ಕೆಂಪು ಕಲ್ಲು ತೆಗೆಯಬೇಕು ಎನ್ನುವ ಆದೇಶ ಮಾಡಿತ್ತು. ಆದರೆ ಜಿಲ್ಲೆಯಲ್ಲಿ ಬಹುತೇಕ ಎಲ್ಲಾ ತಾಲೂಕಿನಲ್ಲೂ ಯಾರೊಬ್ಬರು ಪರವಾನಗಿ ಪಡೆಯದೆಯೇ ಕೆಂಪು ಕಲ್ಲನ್ನ ತೆಗೆಯುತ್ತಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆ ಎಂಬಂತೆ ಕೆಲವರನ್ನು ಮಾತ್ರ ಗುರುತು ಪಡಿಸಿ ತೊಂದರೆ ಕೊಡುತ್ತಿದ್ದಾರೆ ಎಂದು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಚಂದ್ರಪ್ಪ ಚನ್ನಯ್ಯ ಆರೋಪಿಸಿದರು.