ಕಾರವಾರ: ಹಳಿಯಾಳ ತಾಲೂಕಿನ ಕಬ್ಬು ಬೆಳೆಗಾರರ ಬಾಕಿ ಹಣ ಪಾವತಿಸುವ ಮತ್ತು ಈ ವರ್ಷ ಕಬ್ಬಿಗೆ ಬೆಲೆ ನಿಗದಿ ಮಾಡುವ ಸಂಬಂಧ ಸ್ಥಳೀಯ ರೈತರು ಹಾಗೂ ಕಾರ್ಖಾನೆ ಮಾಲಿಕರ ಜೊತೆಗೆ ಜಿಲ್ಲಾಧಿಕಾರಿ ಸಭೆ ನಡೆಸಿ ರೈತರಿಗೆ ನ್ಯಾಯಯುತ ಬೆಲೆ ನಿಗದಿ ಮಾಡಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಸಂದೀಪ್ಕುಮಾರ್ ಬೋಬಾಟಿ ಆಗ್ರಹಿಸಿದ್ದಾರೆ.
ನಗರದ ಜಿಲ್ಲಾ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಬ್ಬು ಬೆಳೆಗಾರರಿಗೆ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ರಾಜ್ಯದಲ್ಲಿಯೇ ಅತಿ ಕಡಿಮೆ ಬೆಲೆಯನ್ನು ರೈತರಿಗೆ ನೀಡುತ್ತಿದೆ. ಹಳಿಯಾಳದಲ್ಲಿ ನೀರಾವರಿ ವ್ಯವಸ್ಥೆ ಸರಿಯಾಗಿ ಇಲ್ಲದ ಕಾರಣ ಕಬ್ಬು ಒಣಗಿದ ಬಳಿಕ ಕಾರ್ಖಾನೆ ತಲುಪುವಂತಾಗಿದೆ. ಈ ಕಾರಣದಿಂದ ಈ ಭಾರಿ ಕೂಡಲೇ ರೈತರ ಕಬ್ಬಿಗೆ ಬೆಲೆ ನಿಗದಿ ಮಾಡಿ ಮೊದಲು ಸ್ಥಳೀಯರ ಕಬ್ಬನ್ನು ಪಡೆಯಬೇಕು ಎಂದು ಆಗ್ರಹಿಸಿದರು.
ಕಬ್ಬು ನುರಿಯುವ ಮುನ್ನ ರೈತರು ಹಾಗೂ ಕಾರ್ಖಾನೆಯವರು ದ್ವೀಪಕ್ಷಿಯ ಒಪ್ಪಂದ ಮಾಡಿಕೊಳ್ಳಬೇಕು ಎಂಬ ನಿಯಮವಿದೆ. ಆದರೆ ಅದೆಲ್ಲವನ್ನು ಬಿಟ್ಟು ಕಾರ್ಖಾನೆ ಪ್ರಾರಂಭಿಸಲು ಮುಂದಾದಾಗ ರೈತರು ಬೀದಿಗಿಳಿದು ಹೋರಾಟ ಮಾಡಿದ್ದರು. ಆದರೆ ತಹಸೀಲ್ದಾರರು ಹಾಗೂ ಪೊಲೀಸರು ನಮ್ಮನ್ನು ತಡೆದಿದ್ದಾರೆ. ಸಭೆಗೆ ಎಸಿಯವರು ಬರುವುದಾಗಿ ತಿಳಸಿದ್ದಾರೆ. ಆದರೆ ಸಮಸ್ಯೆ ಗಂಭೀರವಾಗಿದ್ದು ೨೦೧೬-೧೭ರ ಪ್ರತಿ ಟನ್ ಕಬ್ಬಿನ ೩೦೫ ರೂ ಇಟ್ಟುಕೊಂಡಿದ್ದು, ಸುಮಾರು ೨೧ ಕೋಟಿ ರೈತರಿಗೆ ಜಮಾ ಆಗಿಲ್ಲ. ಇದೀಗ ಕಬ್ಬಿನ ಬೆಲೆ ಕಡಿಮೆ ಮಾಡುವ ಹುನ್ನಾರ ನಡೆದಿದೆ.
ಕಾರ್ಖಾನೆ ಹೊರ ಬಿಡುವ ನೀರಿನಿಂದ ನೀರು ಕಪ್ಪಾಗಿ ಸುತ್ತಮುತ್ತಲಿನ ಭಾಗದಲ್ಲಿ ಬಳಕೆಗೆ ಬಾರದಾಗಿದೆ. ತೂಕದಲ್ಲಿ ವ್ಯತ್ಯಾಸ ಮಾಡಲಾಗುತ್ತಿದೆ. ಆದ್ದರಿಂದ ಜಿಲ್ಲಾಧಿಕಾರಿಯೇ ಬಂದು ಸಭೆ ನಡೆಸಬೇಕು ಎಂದು ಆಗ್ರಹಿಸಿದರು. ಗೊಬ್ಬರ, ಕೂಲಿ ಸೇರಿದಂತೆ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಸಕ್ಕರೆ ಬೆಲೆ ಕೂಡ ಏರಿಕೆಯಾಗಿದೆ. ಆದರೆ ಕಳೆದ ಬಾರಿ ಪ್ರತಿ ಟನ್ಗೆ ೨೫೯೨ ರೂ ಮಾತ್ರ ನೀಡಲಾಗಿದೆ. ಇದರಿಂದ ರೈತರಿಗೆ ಭಾರಿ ನಷ್ಟವಾಗಿದೆ. ಪ್ಯಾರಿ ಕಾರ್ಖಾನೆ ಅಧಿಕಾರಿಗಳು ರೈತರಿಗೆ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ತಾಲ್ಲೂಕಾ ಅಧ್ಯಕ್ಷ ಶಂಕರ ಕಾಜಗಾರ ಮಾತನಾಡಿ, ಈ ಭಾರಿ ವಾಡಿಕೆಗಿಂದ ಭಾರಿ ಮಳೆಯಾದ ಕಾರಣ ಭತ್ತ ಗೋವಿನ ಜೋಳ ಸೇರಿದಂತೆ ಇತರೆ ಬೆಳೆಗಳಿಗೆ ಭಾರಿ ಹಾನಿಯಾಗಿದೆ. ಹಳ್ಳಕ್ಕೆ ಅಳವಡಿಸಿದ ಪಂಪ್ಗಳು ಕೊಚ್ಚಿ ಹೋಗಿವೆ. ಆದರೂ ಪರಿಹಾರ ಸಿಕ್ಕಿಲ್ಲ. ಕೂಡಲೇ ಜಿಲ್ಲಾಧಿಕಾರಿ ಬಂದು ರೈತರು ಹಾಗೂ ಕಾರ್ಖಾನೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು. ಈ ವೇಳೆ ನಾಗೇಂದ್ರ, ಮೋಹನ್ ಗುರವ್, ಬಳಿರಾಮ್ ಮೋರೆ, ಪಿಶ್ಯಪ್ಪ ಸಿಂಹಳಿಕರ್, ಪರಶುರಾಮ ಇನ್ನಿತರರು ಇದ್ದರು.