ಕಾರವಾರ: ಕಬ್ಬು ಬೆಳೆಗಾರರು ಎಷ್ಟೇ ಪತ್ರ ಬರೆದರೂ, ಪ್ರತಿಭಟನೆ ನಡೆಸಿದರೂ ಜಿಲ್ಲಾಧಿಕಾರಿಗಳು ಒಮ್ಮೆನೂ ಬೆಳೆಗಾರರನ್ನು ಭೇಟಿಯಾಗಿ ಚರ್ಚೆ ನಡೆಸಿಲ್ಲ. ಹೀಗೆ ನಿರ್ಲಕ್ಷ್ಯ ಧೋರಣೆ ಮುಂದುವರಿಸಿದಲ್ಲಿ ಕಾರವಾರದ ಜಿಲ್ಲಾಧಿಕಾರಿ ಕಚೇರಿಯೆದುರು ಪ್ರತಿಭಟನೆ (Protest warning)ನಡೆಸಬೇಕಾದೀತು ಎಂದು ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಕುಮಾರ್ ಬೊಬಾಟೆ ಎಚ್ಚರಿಕೆ ನೀಡಿದ್ದಾರೆ.
ಕಾರವಾರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಷ್ಟು ಪತ್ರ ಬರೆದರೂ ಜಿಲ್ಲಾಧಿಕಾರಿಗಳಿಂದ ಒಂದಕ್ಕೂ ಉತ್ತರ ಇಲ್ಲ. ಸ್ಥಳೀಯವಾಗಿರುವ ಕಬ್ಬು ಕಟಾವು ತಾಂಡಾಕ್ಕೆ ಸಕ್ಕರೆ ಕಾರ್ಖಾನೆ ಅವಕಾಶ ನೀಡುತ್ತಿಲ್ಲ. ಜಿಲ್ಲಾಧಿಕಾರಿಗಳು ಒಂದು ದಿನ ಬಂದು ಬೆಳೆಗಾರರ ಸಮಸ್ಯೆಗಳನ್ನ ಕೇಳಿಲ್ಲ. ರಾಜಕಾರಣಿಗಳು ಕೂಡ ಆರಾಮಿದ್ದಾರೆ. ಹಳಿಯಾಳದಲ್ಲಿ ೫೩, ಧಾರವಾಡದಲ್ಲಿ ೯ ದಿನ, ೩೯ ದಿನ ಬೆಂಗಳೂರಿನಲ್ಲಿ ಹೋರಾಟ ಮಾಡಿದ್ದೇವೆ. ಬೆಂಗಳೂರು ಹೋರಾಟದಿಂದ ರಾಜ್ಯದ ರೈತರಿಗೆ ೯೫೦ ಕೋಟಿ ಲಾಭವಾಗಿದೆ ಎಂದರು.
ಹಳಿಯಾಳ ಇಐಡಿ ಫ್ಯಾಕ್ಟರಿ ರಾಜ್ಯದಲ್ಲೇ ಅತಿ ಕಡಿಮೆ ಬೆಲೆ ನೀಡಿ ಕಬ್ಬು ಖರೀದಿಸುತ್ತಿದ್ದಾರೆ. ಈ ಬಗ್ಗೆ ಪತ್ರ ಬರೆದರೂ ಜಿಲ್ಲಾಧಿಕಾರಿಗಳು ಒಂದು ದಿನವೂ ಸಭೆ ನಡೆಸುವ ಬಗ್ಗೆ ಮಾತನಾಡುತ್ತಿಲ್ಲ. ಹೀಗೆ ಕಬ್ಬು ಬೆಳೆಗಾರರಿಗೆ ಸ್ಪಂದಿಸದಿದ್ದರೆ ಕಾರವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಮಾಡಬೇಕಾದೀತು. ರೈತರು, ಕಾರ್ಖಾನೆ ಹಾಗೂ ನಮ್ಮ ಸಂಘದವರೊಂದಿಗೆ ಶೀಘ್ರವೇ ಜಿಲ್ಲಾಧಿಕಾರಿಗಳು ಸಭೆ ನಡೆಸಬೇಕು ಎಂದು ಆಗ್ರಹಿಸಿದರು.
ನಾವು ಧರಣಿ ಹೂಡಿದಾಗ ಸಕ್ಕರೆ ಆಯುಕ್ತರು ಕಾರವಾರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸಿದರು. ಸಕ್ಕರೆ ಕಾರ್ಖಾನೆಯಿಂದ ಸಾಗಾಣಿಕಾ ವೆಚ್ಚ ಹೆಚ್ಚು ಪಡೆಯಲಾಗುತ್ತಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಬಾಕಿ ಮೊತ್ತವನ್ನು ಬೆಳೆಗಾರರಿಗೆ ಹಿಂತಿರುಗಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು.
ಆದರೆ ಈವರೆಗೆ ಯಾವುದೇ ತನಿಖೆ ಆಗಿಲ್ಲ. ಮೋಸದಿಂದ ಪಡೆದ ಹಣವನ್ನ ಕೂಡಲೇ ರೈತರಿಗೆ ಹಿಂತಿರುಗಿಸಬೇಕು. ಈ ಸಮಸ್ಯೆ ಪರಿಹರಿಸದಿದ್ದರೆ ಮುಂದಿನ ದಿನಗಳಲ್ಲಿ ಬೆಳಗಾವಿಯ ಸಕ್ಕರೆ ಆಯುಕ್ತರ ಕಚೇರಿ ಮುಂದೆ ಅಹೋರಾತ್ರಿ ಧರಣಿ, ಅದಕ್ಕೂ ಎಚ್ಚೆತ್ತುಕೊಳ್ಳದಿದ್ದರೆ ರಸ್ತೆಗಳಲ್ಲೇ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಪರಶುರಾಮ ಪಂಚನೋಳಕರ್, ಮಂಜುನಾಥ ಗೌಡ, ಪರಶುರಾಮ ಎಳಗೂರಕರ್ ಹಾಜರಿದ್ದರು.