ಕಾರವಾರ: ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗಿರುವ ಕಾರಣ ನಗರದಿಂದ ಬಿಣಗಾ ಸಂಪರ್ಕಿಸುವ ಒಂದು ಬದಿಯ ಸುರಂಗ ಮಾರ್ಗ ಹಾಗೂ ಈಗಿನ ಹೆದ್ದಾರಿಯಲ್ಲಿ ಏಕಮುಖ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮಾಜಿ ಶಾಸಕ ಸತೀಶ ಸೈಲ್ ಹಾಗೂ ಅವರ ಬೆಂಬಲಿಗರು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರಿಗೆ ಸೋಮವಾರ ಮನವಿ ಸಲ್ಲಿಸಿ ಆಗ್ರಹಿಸಿದರು.
ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಗಳಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ ಒಂದು ವರ್ಷದಿಂದ ನೂರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಕಳೆದ ಎರಡು ದಿನದ ಹಿಂದೆ ವಿದ್ಯಾರ್ಥಿನಿಯೋರ್ವಳು ಸಾವನ್ನಪ್ಪಿದ್ದು, ಆಕೆಯ ತಂದೆ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಕೆಲ ದಿನಗಳ ಹಿಂದೆ ಸುರಂಗ ಮಾರ್ಗವನ್ನು ಎಲ್ಲ ವಾಹನಗಳಿಗೂ ಮುಕ್ತಗೊಳಿಸಿ ಅಪಘಾತ ತಪ್ಪಿಸುವಂತೆ ಧರಣಿ ಸಹ ನಡೆಸಿದ್ದೆ. ಆದರೂ ಈವರೆಗೂ ಈಡೇರಿಲ್ಲ ಎಂದು ದೂರಿದರು.
ಸದ್ಯ ಫ್ಲೈ ಓವರ್ ಕಾಮಗಾರಿ ಮುಕ್ತಾಯವಾಗಿಲ್ಲ. ಆದರೆ ಒಂದು ಬದಿಯ ಸುರಂಗ ಕಾಮಗಾರಿ ಮುಕ್ತಾಯವಾಗಿರುವ ಬಗ್ಗೆ ಇಲಾಖೆ ವರದಿಗಳಲ್ಲಿ ತಿಳಿಸಲಾಗಿದೆ. ಆದ್ದರಿಂದ ಕಾರವಾರದಿಂದ ಬಿಣಗಾ ಕಡೆ ತೆರಳುವ ವಾಹನಗಳಿಗೆ ಸುರಂಗ ಮಾರ್ಗವಾಗಿ ಹಾಗೂ ಬಿಣಗಾ ಭಾಗದಿಂದ ಕಾರವಾರ ಸಂಪರ್ಕಿಸುವ ವಾಹನಗಳಿಗೆ ಹಳೆ ಹೆದ್ದಾರಿಯಲ್ಲಿಯೇ ಏಕ ಮುಖ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು. ಇದರಿಂದ ಅಪಘಾತಗಳನ್ನು ತಡೆಯಲು ಸಾಧ್ಯವಿದೆ ಎಂದು ಹೇಳಿದರು. ಮನವಿ ಆಲಿಸಿದ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.