ಬೆಳ್ತಂಗಡಿ: ಜೈನರ ಪವಿತ್ರ ತೀರ್ಥಕ್ಷೇತ್ರವಾದ ಜಾರ್ಖಂಡ್ ರಾಜ್ಯದಲ್ಲಿರುವ ಸಮ್ಮೇದಶಿಖರ್ಜಿಯನ್ನು ಅಲ್ಲಿನ ರಾಜ್ಯ ಸರ್ಕಾರವು ಪ್ರವಾಸಿತಾಣವಾಗಿ ರೂಪಿಸಲು ನಿರ್ಧರಿಸಿ ಅಧಿಸೂಚನೆ ನೀಡಿದ್ದು, ಇದನ್ನು ಜೈನ ಸಮಾಜದವರು ಖಂಡಿಸಿ, ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ. ತೀರ್ಥಂಕರರ ಮೋಕ್ಷ ಸ್ಥಾನವಾದ ಶಿಖರ್ಜಿಯ ಪಾವಿತ್ರ್ಯತೆ ಉಳಿಸಬೇಕು ಎಂದು ಈಗಾಗಲೇ ಕಳೆದ ಡಿಸೆಂಬರ್ ೨೮ ರಂದು ಮೂಡಬಿದ್ರೆಯಲ್ಲಿ ಸಮಸ್ತ ಶ್ರಾವಕರು-ಶ್ರಾವಿಕೆಯರು ಪೂಜ್ಯ ಚಾರುಕೀರ್ತಿ ಭಟ್ಟಾರಕರು ಮತ್ತು ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ನೇತೃತ್ವದಲ್ಲಿ ಮೌನ ಮೆರವಣಿಗೆ ನಡೆಸಿ ರಾಷ್ಟಪತಿ ಹಾಗೂ ಪ್ರಧಾನಿಗೆ ಮನವಿ ಸಲ್ಲಿಸಿದ್ದಾರೆ.
ಮನವಿಯ ಪ್ರತಿಯನ್ನು ಸೋಮವಾರ ಧರ್ಮಸ್ಥಳದಲ್ಲಿ ರಾಜ್ಯಸಭಾ ಸದಸ್ಯರಾದ ಡಿ. ವೀರೇಂದ್ರ ಹೆಗ್ಗಡೆಯವರಿಗೆ ನೀಡಿ ತಕ್ಷಣ ಸ್ಪಂದಿಸಿ ತೀರ್ಥಕ್ಷೇತ್ರದ ಪಾವಿತ್ರö್ಯ ರಕ್ಷಣೆಗೆ ಸೂಕ್ತ ಮಾರ್ಗದರ್ಶನ ಮತ್ತು ಸಹಕಾರ ನೀಡುವಂತೆ ಸಮಾಜ ಬಾಂಧವರು ವಿನಂತಿಸಿದ್ದಾರೆ.
ಮೂಡಬಿದ್ರೆಯ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮತ್ತು ಕೃಷ್ಣರಾಜ ಹೆಗ್ಡೆ, ದ.ಕ. ಕೃಷಿಕ ಸಮಾಜದ ಅಧ್ಯಕ್ಷ ಎಸ್.ಡಿ. ಸಂಪತ್ ಸಾಮ್ರಾಜ್ಯ ಶಿರ್ತಾಡಿ, ಬಂಟ್ವಾಳದ ಸುದರ್ಶನ್ ಜೈನ್, ಮತ್ತು ಅರ್ಕಕೀರ್ತಿ ಇಂದ್ರ, ಕಾರ್ಕಳದ ಪಾರ್ಶ್ವನಾಥ ಜೈನ್, ಎಕ್ಸಲೆಂಟ್ ಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್, ಪಟ್ಣಶೆಟ್ಟಿ ಸುಧೇಶ್ ಕುಮಾರ್, ಬಸದಿಗಳ ಮೊಕ್ತೇಸರರಾದ ಆದರ್ಶ ಎಂ. ಮತ್ತು ದಿನೇಶ್ ಆನಡ್ಕ ಉಪಸ್ಥಿತರಿದ್ದರು.
ಮನವಿ ಸ್ವೀಕರಿಸಿದ ಹೆಗ್ಗಡೆಯವರು ಈ ಬಗ್ಯೆ ಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.