ಕಾರವಾರ: ಜಿಲ್ಲೆಯ ಜೊಯಿಡಾ ತಾಲೂಕಿನ ಶಿವಪುರ ಗ್ರಾಮಕ್ಕೆ ಅಡ್ಡಲಾಗಿ ಕೊಟ್ಟಿರುವ ತೂಗು ಸೇತುವೆ ಮೇಲೆ ಅಪರಿಚಿತರು ಕಾರನ್ನು ಚಲಾಯಿಸಿಕೊಂಡು ಬಂದಿದ್ದಲ್ಲದೆ ಇದಕ್ಕೆ ಆಕ್ಷೇಪಿಸದ ಸ್ಥಳೀಯರ ಜೊತೆ ದರ್ಪ ತೋರಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇದೇ ರೀತಿ ಬಂದವರನ್ನು ವಾಪಸ್ ಕಳುಹಿಸಿದ್ದಾರೆ. ಹಾಗೂ ಯಾವುದೇ ಕಾರಣಕ್ಕೂ ತೂಗು ಸೇತುವೆ ಮೇಲೆ ಕಾರು ಮೊದಲಾದ ನಾಲ್ಕು ಚಕ್ರ ವಾಹನಗಳನ್ನು ತರಬೇಡಿ ಎಂದು ಹೇಳಿದ್ದಾರೆ. ಗುಜರಾತಿ ಮೊರ್ಬಿ ತೂಗು ಸೇತುವೆ ದುರಂತದ ನಂತರ ಜಾಗೃತರಾಗಿರುವ ಸ್ಥಳೀಯರು ಇಂಥದ್ದಕ್ಕೆ ಆಡಳಿತ ಅವಕಾಶ ನೀಡದೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಉಳಿವಿಯಿಂದ ಬರುವ ಅನೇಕ ಜನರು ಶಿವಪುರದ ತೂಗು ಸೇತುವೆಯನ್ನು ನೋಡಿಕೊಂಡು ಹೋಗುತ್ತಾರೆ ಇಂಥವರಲ್ಲಿ ಕೆಲವರು ಅದರಲ್ಲಿಯೇ ಕಾರನ್ನು ತರುತ್ತಾರೆ. ಕಾರು ಓಡಾಡುವುದಕ್ಕೆ ಮಾಡಿಲ್ಲ ಎಂದು ಹೇಳಿದ್ದಾರೆ.
ಕಾರು ತರಬಾರದೆಂದು ಹಿರಿಯರು ಕಿವಿಮಾತು ಹೇಳಿದರೂ ಕೇಳದೆ ಸಹ ಧಿಕ್ಕರಿಸಿ ದರ್ಪವನ್ನು ತೋರುತ್ತಾರೆ. ತೂಗು ಸೇತುವೆ ನಿರ್ವಹಣೆ ಇಲ್ಲದೆ ಶಿಥಿಲವಾದ ಸಂದರ್ಭದಲ್ಲಿ ಸ್ಥಳೀಯರು ಜಿಲ್ಲಾಡಳಿತಧ ಮುಂದೆ ಮನವಿ ಮಾಡಿಕೊಂಡ ನಂತರ ಸೇತುವೆಯ ನಿರ್ವಹಣೆಯನ್ನು ಮಾಡಲಾಗಿದೆ. ಇದು ಅಷ್ಟೊಂದು ಇಕ್ಕಟ್ಟಾಗಿದೆ. ಇಂಥ ಸಂದರ್ಭದಲ್ಲಿ ಹೀಗೆಲ್ಲ ಬೇಕಾಬಿಟ್ಟಿ ವರ್ತನೆ ಮಾಡುವುದ ಸರಿಯಲ್ಲ ಎಂದು ಆಕ್ಷೇಪಿಸಿದ್ದಾರೆ.
ಹೀಗೆಲ್ಲ ಮಾಡಿದರೆ ಗುಜರಾತಿನ ಮೊರ್ಬಿ ಸೇತುವೆ ಕುಸಿದಂತೆ ಈ ತೂಗು ಸೇತುವೆಯೂ ಕುಸಿದರೆ ಅದಕ್ಕೆ ಹೊಣೆ ಯಾರು..? ಅದು ಹಾಳಾದರೆ ಇದರಲ್ಲೇ ಓಡಾಡಿಕೊಂಡು ಬದುಕು ಕಟ್ಟಿಕೊಂಡ ಸ್ಥಳೀಯರು ಏನು ಮಾಡಬೇಕು ಎಂದು ಪ್ರಶ್ನಿಸಿದ್ದಾರೆ. ತೂಗು ಸೇತುವೆ ಹಾಳಾಗುವ ಮೊದಲೇ ಈ ರೀತಿ ಸೇತುವೆ ಮೇಲೆ ಕಾರು ಚಲಾಯಿಸಿಕೊಂಡು ಬರುವವರ ವಿರುದ್ಧ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.