ಕಾರವಾರ: ತಾಲೂಕಿನ ಮುದಗಾ ಘಟ್ಟದಲ್ಲಿ ಆಕಸ್ಮಿಕವಾಗಿ ಬೆಂಕಿ ತಗಲಿ ಸುಮಾರು ಒಂದು ಎಕರೆಗೂ ಅಧಿಕ ಪ್ರದೇಶಕ್ಕೆ ಬೆಂಕಿ ಆವರಿಸಿದ ಘಟನೆ ಗುರುವಾರ ನಡೆದಿದೆ.
ಸೀಬರ್ಡ್, ಕೊಂಕಣ ರೈಲ್ವೆ ಹಳಿ ಹಾದುಹೋಗಿರುವ ಹಾಗೂ ಹೆದ್ದಾರಿಯಂಚಿನ ಪ್ರದೇಶದಲ್ಲಿ ಕಾಣಿಸಿಕೊಂಡ ಬೆಂಕಿ ನೋಡ ನೋಡುತ್ತಿದ್ದಂತೆ ಸುತ್ತಮುತ್ತಲಿನ ಪ್ರದೇಶಕ್ಕೆ ಹಬ್ಬಿದೆ. ಹೆದ್ದಾರಿ ಹಾಗೂ ನೌಕಾನೆಲೆ ಪ್ರದೇಶದಲ್ಲಿ ಹೊಗೆ ಆವರಿಸಿ ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದೆ. ಸ್ಥಳೀಯ ನಿವಾಸಿಗಳು ಬೆಂಕಿ ನಂದಿಸಲು ಪ್ರಯತ್ನಪಟ್ಟರು ಸಾಧ್ಯವಾಗಿರಲಿಲ್ಲ. ತಕ್ಷಣವೇ ಕಾರವಾರ ಅಗ್ನಿಶಾಮಕ ದಳಕ್ಕೆ ಕರೆಮಾಡಿ ಸ್ಥಳಕ್ಕೆ ಕರೆಯಿಸಲಾಗಿದ್ದು, ಜೊತೆಗೆ ಸೀಬರ್ಡ್ ನೌಕಾನೆಲೆಯ ಅಗ್ನಿಶಾಮಕ ವಾಹನ ಹಾಗೂ ಅಂಕೋಲಾದಿಂದಲೂ ಅಗ್ನಿಶಾಮಕ ತಂಡ ಧಾವಿಸಿ ಬೆಂಕಿ ನಂದಿಸುವ ಪ್ರಯತ್ನ ಮಾಡಿದ್ದಾರೆ.
ಕಾರವಾರದ 4 ಸಾವಿರ ಲೀಟರ್ನ ಅಗ್ನಿಶಾಮಕ ವಾಹನದ ಎರಡು ಟ್ರಿಪ್, ಅಂಕೋಲಾ ವಾಹನದ ಒಂದು ಟ್ರಿಪ್ ಹಾಗೂ ಸೀಬರ್ಡ್ ಅಗ್ನಿಶಾಮಕ ವಾಹನದ ಸುಮಾರು ಮೂರು ಟ್ರಿಪ್ ನೀರನ್ನ ಈ ಬೆಂಕಿ ನಂದಿಸಲು ಬಳಸಲಾಗಿದೆ ಎನ್ನಲಾಗಿದೆ. ರೈಲಿನಲ್ಲಿ ಹೋಗುವ ಯಾರೋ ಪ್ರಯಾಣಿಕರು ಎಸೆದ ಸಿಗರೇಟಿನ ಕಿಡಿಯಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ.
ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಕಾರವಾರದ ಪ್ರಮುಖ ಅಗ್ನಿಶಾಮಕ ರಾಜೇಶ್ ರಾಣೆ, ಅಗ್ನಿಶಾಮಕ ಚಾಲಕ ಧನಂಜಯ್, ಅಗ್ನಿಶಾಮಕರಾದ ರಾಜೇಂದ್ರ ಪಾತರಕರ್, ನಿಹಾರ್ ಕೆ.ಕೆ., ಅಂಕೋಲಾ ಅಗ್ನಿಶಾಮಕ ಠಾಣಾ ಸಿಬ್ಬಂದಿ ಹಾಗೂ ಸೀಬರ್ಡ್ ನೌಕಾನೆಲೆಯ ಅಗ್ನಿಶಾಮಕ ವಾಹನದೊಂದಿಗೆ ಸೇನಾ ಸಿಬ್ಬಂದಿಗಳು ಇದ್ದರು.