ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕ್ಷಾಂಕ್ಷಿ ಯೋಜನೆಗಳಲ್ಲೊಂದಾದ 104 ಸಹಾಯವಾಣಿ ಸ್ಥಗಿತಗೊಂಡಿದ್ದು, ಈ ಬಗ್ಗೆ ಪತ್ರಿಕೆಗಳಲ್ಲಿ ವರದಿ ಪ್ರಕಟಗೊಂಡು ವರ್ಷ ಕಳೆದರೂ ಮರು ಆರಂಭಿಸಿದಿರುವ ಬಗ್ಗೆ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಅಧಿವೇಶನದ ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದರು.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ 104 ಸಹಾಯವಾಣಿಯನ್ನು ಮರು ಆರಂಭಿಸಲು ಟೆಂಡರ್ ಪ್ರಕ್ರಿಯೆ ನಡೆಸಿ ಕೆಲ ತಿಂಗಳಿನಿಂದ ಸರ್ಕಾರದ ಅನುಮತಿಗಾಗಿ ಕಾದು ಕುಳಿತಿರುವುದು ತಿಳಿದು ಬಂದಿದೆ.
2022ನೇ ಸಾಲಿನಲ್ಲಿ ಆರೋಗ್ಯ ಇಲಾಖೆ ಆಹ್ವಾನಿಸಿದ್ದ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಕೆಲ ಕಂಪನಿಗಳ ಪೈಕಿ ಅಶೋಕ್ ಬಿಲ್ಡ್ಕಾನ್ ಸಂಸ್ಥೆಗೆ ಟೆಂಡರ್ ನೀಡಲು ಆರೋಗ್ಯ ಇಲಾಖೆ ಮುಂದಾಗಿದೆ. ಆದರೆ ಟೆಂಡರ್ ಪ್ರಕ್ರಿಯೆ ಅಂತಿಮಗೊಳಿಸಲು ಆಗುತ್ತಿಲ್ಲ. ಕೆಲ ತಾಂತ್ರಿಕ ಕಾರಣಗಳಿಂದ ಸೇವೆ ಆರಂಭಿಸಲು ಹಸಿರು ನಿಶಾನೆ ದೊರೆತಿಲ್ಲ. ಒಂದು ವೇಳೆ ಸರ್ಕಾರ ಈ ಯೋಜನೆಗೆ ಅನುಮತಿ ನೀಡದಿದ್ದಲ್ಲಿ ಸೇವೆ ಸಂಪೂರ್ಣ ಸ್ಥಗಿತಗೊಳ್ಳುವ ಸಾಧ್ಯತೆಯಿದೆ.
2021ರಲ್ಲಿ ಹೈದ್ರಾಬಾದ್ ಮೂಲದ ಪೆರುಮಾಳ್ ಸ್ವಾಸ್ಥ ನಿರ್ವಹಣೆ ಮತ್ತು ಸಂಶೋಧನಾ ಸಂಸ್ಥೆ 104 ಸಹಾಯವಾಣಿ ಸೇವೆ ಒದಗಿಸಲು ಗುತ್ತಿಗೆ ಪಡೆದಿತ್ತು. ಹಂತಹಂತವಾಗಿ ಸರ್ಕಾರವೂ ಹಣ ಬಿಡುಗಡೆಗೊಳಿಸಿದರೂ ಒಡಂಬಡಿಕೆಯಂತೆ ಸರ್ಕಾರ ಹಣ ನೀಡಿಲ್ಲ ಎಂದು ಆರೋಪಿಸಿ ಸಂಸ್ಥೆ ಫ್ರೆಬ್ರವರಿ ಮಧ್ಯಭಾಗದಲ್ಲಿ ಸೇವೆ ಸ್ಥಗಿತಗೊಳಿಸಿತ್ತು.
ಸಹಾಯವಾಣಿಗೆ ಪ್ರತಿನಿತ್ಯ 20 ಸಾವಿರಕ್ಕೂ ಅಧಿಕ ಕರೆ ಬರುತ್ತಿತ್ತು. ಅಲ್ಲದೆ ಸಹಾಯವಾಣಿ ಸ್ಥಗಿತಗೊಂಡ ಕಾರಣ 350 ಮಂದಿ ಕೆಲಸ ಕಳೆದುಕೊಂಡಿದ್ದರು. ಆರೋಗ್ಯವಾಣಿ 104 ಸೇವೆ ದಿನದ 24 ಗಂಟೆಯೂ ಸೇವೆ ನೀಡುವ ಬಡವರ ಸಂಜೀವಿನಿಯಾಗಿದ್ದು, ಆಸ್ಪತ್ರೆ ಸೌಲಭ್ಯಗಳಿಂದ ವಂಚಿತವಾಗಿರುವ ಗ್ರಾಮೀಣ ಜನರು ವೈದ್ಯರ ಸಲಹೆ ಪಡೆಯಲು ಅನುಕೂಲವಾಗುವಂತೆ ತಕ್ಷಣವೇ ಸಹಾಯವಾಣಿಗೆ ಮರುಜೀವ ನೀಡಲು ಕ್ರಮ ಕೈಗೊಳ್ಳುವಂತೆ ಪರಿಷತ್ ಸದಸ್ಯ ಹರೀಶ್ ಕುಮಾರ್ ಒತ್ತಾಯಿಸಿದರು.