ಧಾರವಾಡ: ಭಾರತ ಸರ್ಕಾರದ ಕೇಂದ್ರ ಲಲಿತ ಕಲಾ ಅಕಾಡೆಮಿಯು ದಕ್ಷಿಣ ಭಾಗದಲ್ಲಿನ ತನ್ನ ಪ್ರಾದೇಶಿಕ ಕಚೇರಿಯನ್ನು ವಿದ್ಯಾಕಾಶಿ ಧಾರವಾಡದಲ್ಲಿ ಆರಂಬಿಸುತ್ತಿದ್ದು, ರಾಷ್ಟ್ರ ಮತ್ತು ರಾಜ್ಯಮಟ್ಟದ ಕಲಾವಿದರ ವಿವಿಧ ಕಲಾಕೃತಿಗಳ ಪ್ರದರ್ಶನಕ್ಕೆ ಪ್ರತ್ಯೇಕವಾದ ಪ್ರದರ್ಶನ ಹಾಲ್ ಮಾಡಲು ಮತ್ತು ಹಿರಿಯ ಸ್ಥಳೀಯ ಕಲಾವಿದರ ಸಲಹಾ ಸಮಿತಿಯನ್ನು ರಚಿಸಲಾಗುವುದು ಎಂದು ಶಾಸಕ ಅರವಿಂದ ಚಂದ್ರಕಾಂತ ಬೆಲ್ಲದ ಅವರು ಹೇಳಿದರು.
ಕೇಂದ್ರ ಲಲಿತಕಲಾ ಅಕಾಡೆಮಿ ಪ್ರಾದೇಶಿಕ ಕಚೇರಿಯ ನಿಯೋಜಿತ ಕಟ್ಟಡದಲ್ಲಿ ಹಿರಿಯ ಕಲಾವಿದರ, ವಿವಿಧ ಸಾಹಿತ್ಯ, ಸಂಗೀತ, ಸಾಂಸ್ಕೃತಿಕ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಪೂರ್ವಭಾವಿ ಸಭೆ ಜರುಗಿಸಿ, ಮಾತನಾಡಿದರು.
ಲಲಿತಕಲಾ ಅಕಾಡೆಮಿ ಸಂಪೂರ್ಣ ಬಳಕೆಗೆ ಸ್ಥಳೀಯ ಕಲಾವಿದರ, ಕಲಾಸಕ್ತರ ಸಹಕಾರ, ಸಲಹೆ ಬೇಕು. ಈ ನಿಟ್ಟಿನಲ್ಲಿ ವಿವಿಧ ಕಲೆಗಳನ್ನು ಪ್ರತಿನಿಧಿಸುವ ಹಿರಿಯರ ಮಾರ್ಗದರ್ಶನ, ಸಲಹೆ ಪಡೆಯಲು ಒಂದು ಸಲಹಾ ಸಮಿತಿ ರಚಿಸಲಾಗುತ್ತದೆ ಎಂದು ಅವರು ಹೇಳಿದರು.
ಕೇಂದ್ರ ಲಲಿತಕಲಾ ಅಕಾಡೆಮಿ ಪ್ರಾದೇಶಿಕ ಕಚೇರಿ ನಿರ್ಮಾಣಕ್ಕೆ ಸೂಕ್ತ ಸ್ಥಳ ಆಯ್ಕೆ ಮಾಡಿದ್ದು, ಸಾರ್ವಜನಿಕರು, ಆಸಕ್ತರು ನಿರಂತರವಾಗಿ ಭೇಟಿ ನೀಡುವ ಪ್ರವಾಸಿ ತಾಣವನ್ನಾಗಿ ರೂಪಿಸಲು ಯೋಜಿಸಲಾಗಿದೆ. ಈ ಮೂಲಕ ಧಾರವಾಡ ಕಲೆಗಳ ವಿಶೇಷತೆ ಮತ್ತು ಸಾಧನೆಗಳನ್ನು ರಾಷ್ಟ್ರಮಟ್ಟಕ್ಕೆ ವಿಸ್ತರಿಸಲಾಗುತ್ತದೆ ಎಂದು ಅವರು ಹೇಳಿದರು.
ಬರುವ ಫೆಬ್ರವರಿ 20 ರಂದು ಪ್ರಾದೇಶಿಕ ಕಚೇರಿ ಕಟ್ಟಡಕ್ಕೆ ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವರಾದ ಪ್ರಲ್ಹಾದ ಜೋಶಿ ಹಾಗೂ ಕೇಂದ್ರ ಸಂಸ್ಕøತಿ ಮಂತ್ರಾಲಯದ ರಾಜ್ಯಸಚಿವರಾದ ಅರ್ಜುನರಾಮ ಮೇಘವಾಲ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ತಾವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ವಿಧಾನಪರಿಷತ್ ಸಭಾಪತಿಗಳು, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ವಿಧಾನಸಭೆ, ವಿಧಾನಪರಿಷತ್ ಸದಸ್ಯರು, ವಿವಿಧ ಜನಪ್ರತಿನಿಧಿಗಳು, ಅಧಿಕಾರಿಗಳು ಕಲಾವಿದರು ಭಾಗವಹಿಸಲಿದ್ದಾರೆ ಎಂದು ಶಾಸಕರು ತಿಳಿಸಿದರು.
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಮಾತನಾಡಿ, ಚಿತ್ರಕಲೆ, ರಂಗಭೂಮಿ, ಸಂಗೀತ, ನಾಟಕ, ಗಾಯನ ಸೇರಿದಂತೆ ವಿವಿಧ ಲಲಿತ ಕಲೆಗಳ ಸಂಗಮವಾಗಿರುವ ಧಾರವಾಡದಲ್ಲಿ ಅಕಾಡೆಮಿ ಪ್ರಾದೇಶಿಕ ಕಚೇರಿ ಆರಂಭವಾಗಿರುವುದು ಸಂತಸ ತಂದಿದೆ.ಪ್ರತಿಭಾವಂತರ ಕಲಾವಿದರ ಭವಿಷ್ಯತ್ತಿನ ದೃಷ್ಟಿಯಿಂದ ಅಕಾಡೆಮಿ ಬಂದಿರುವುದು ಉತ್ತಮ ಬೆಳವಣಿಗೆ. ಕೇಂದ್ರ ಲಲಿತಕಲಾ ಅಕಾಡೆಮಿ ಪ್ರಾದೇಶಿಕ ಕಚೇರಿ ಪೂರ್ಣಪ್ರಮಾಣದಲ್ಲಿ ಕಾರ್ಯಮಾಡಲು ಜಿಲ್ಲಾಡಳಿತ ಎಲ್ಲ ರೀತಿಯ ನೆರವು, ಸಹಕಾರ ನೀಡುತ್ತದೆ ಎಂದು ಅವರು ತಿಳಿಸಿದರು.
ಕೇಂದ್ರ ಲಲಿತಕಲಾ ಅಕಾಡೆಮಿ ಚೆನ್ನೈ ಪ್ರಾದೇಶಿಕ ಕಚೇರಿ ಕಾರ್ಯದರ್ಶಿ ಸೋವನ ಕುಮಾರ ಪ್ರಾದೇಶಿಕ ಕಚೇರಿಯ ಕಾರ್ಯಚಟುವಟಿಕೆಗಳ ಕುರಿತು ಸಭೆಯಲ್ಲಿ ವಿವರಿಸಿದರು.
ಧಾರವಾಡ ಪ್ರಾದೇಶಿಕ ಕಚೇರಿ ಸಂಯೋಜಕ ಶ್ರೀನಿವಾಸ ಶಾಸ್ತ್ರಿ ಅವರು ಸ್ವಾಗತಿಸಿ, ಸಭೆ ನಿರ್ವಹಿಸಿದರು.
ಸಭೆಯಲ್ಲಿ ತಹಶೀಲ್ದಾರ್ ಮೋಹನ ಭಸ್ಮೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಮಹಾನಗರ ಪಾಲಿಕೆ ಸದ್ಯಸರಾದ ಶಿವು ಹಿರೇಮಠ ಮತ್ತು ವಿಜಯಾನಂದ ಶೆಟ್ಟಿ, ಸುರೇಶ ಬೇದ್ರೆ, ಜ್ಯೋತಿ ಪಾಟೀಲ, ಬಿಇಓ ಉಮೇಶ ಬೊಮ್ಮಕ್ಕನವರ, ಗಿರೀಶ ಪದಕಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಕನ್ನಡ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಪ್ರೊ: ಕೌಜಲಗಿ, ಜೆಎಸ್ಎಸ್ ಹಾಲಭಾವಿ ಸ್ಕೂಲ್ ಆಫ್ ಆಟ್ರ್ಸ್ ಪ್ರಾಂಶುಪಾಲ ಡಾ: ಬಿ.ಎಮ್. ಪಾಟೀಲ, ಹಿರಿಯ ಕಲಾವಿದರಾದ ಗಾಯತ್ರಿ ಗೌಡರ, ಡಾ. ಮಧು ದೇಸಾಯಿ, ಬಿ. ಮಾರುತಿ, ಡಾ: ಬಸವರಾಜ ಕುರಿಯವರ, ಸುರೇಶ ಹಾಲಭಾವಿ, ಅರವಿಂದ ಯಾಳಗಿ, ಎಸ್.ಸಿ. ಪಾಟೀಲ, ಅಕ್ಕಮ್ಮ ಆಲೂರ ಆರ್.ಐ. ಗುರು ಸುಣಗಾರ ಸೇರಿದಂತೆ ವಿವಿಧ ಹಿರಿಯ ಕಲಾವಿದರು ಉಪಸ್ಥಿತರಿದ್ದರು.