ಕಾರವಾರ: ಕರ್ನಾಟಕ ಗಡಿ ಪ್ರದೇಶದಲ್ಲಿ ಮಹಾರಾಷ್ಟ್ರ ಏಕಿಕರಣ ಸಮಿತಿ (ಎಂಇಎಸ್)ಯನ್ನು ನಿಯಂತ್ರಿಸಲು ಕೇಂದ್ರ ಸರಕಾರ ಕ್ರಮಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಜಿಲ್ಲಾಡಳಿತದ ಮೂಲಕ ಮನವಿ ಸಲ್ಲಿಸಿದ್ದಾರೆ.
ಎಂಇಎಸ್ ರಾಜ್ಯದ ಗಡಿಯಲ್ಲಿ ತನ್ನ ಪುಂಡಾಡಿಕೆ ಮುಂದುರಿಸಿದ್ದು ಕನ್ನಡಿಗರ ತಾಳ್ಮೆ ಪರೀಕ್ಷೆ ಮಾಡುತ್ತಿದ್ದಾರೆ. ಕೇಂದ್ರ-ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರಕಾರ ಇದ್ದರೂ ಸಹ ಎಂಇಎಸ್ ಪುಂಡಾಟಿಕೆ ನಿಯಂತ್ರಿಸಲು ಸಾಧ್ಯವಾಗಿಲ್ಲ. ಅದ್ದರಿಂದ ಕೇಂದ್ರ, ರಾಜ್ಯ ಸರಕಾರವು ರಾಜ್ಯದಲ್ಲಿ ಎಂಇಎಸ್ ಸಂಘಟನೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ದೀಪಕ ನಾಯ್ಕ ಹಾಗೂ ಸಂಘಟನೆ ಪದಾಧಿಕಾರಿಗಳ ನೇತೃತ್ವದಲ್ಲಿ ಸರಕಾರಕ್ಕೆ ಉತ್ತರ ಕನ್ನಡ ಜಿಲ್ಲಾಡಳಿತದ ಮೂಲಕ ಮನವಿ ಸಲ್ಲಿಸಿದರು.
ಮಹಾರಾಷ್ಟ್ರ ದೌಂಡ ಪ್ರದೇಶದಲ್ಲಿ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ಸುಗಳ ಮೇಲೆ ತಮ್ಮ ದೌರ್ಜನ್ಯವನ್ನು ಪ್ರದರ್ಶಿಸಿದ್ದಾರೆ. ಕನ್ನಡ ನಾಡಿನಲ್ಲಿ ಹುಟ್ಟಿ ಇಲ್ಲಿಯೇ ವಾಸವಾಗಿ, ಕನ್ನಡ ಭಾಷೆಗೆ ಗಡಿ ಪ್ರದೇಶಕ್ಕೆ ಧಕ್ಕೆ ಉಂಟು ಮಾಡಿದ ಎಂಇಎಸ್ ಸಂಘಟನೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಎಚ್ಚರಿಸಿದ್ದಾರೆ. ಮಹಾರಾಷ್ಟ್ರ ಸರಕಾರ ಮಾಡಿದ ಕೃತ್ಯಕ್ಕೆ ಮುಂದಾಗುವ ಅನಾಹುತಗಳಿಗೆ ಸರಕಾರವೇ ನೇರ ಹೊಣೆಯಾಗಿದೆ. ಬೆಳಗಾವಿ ಎಂದೆಂದು ಕನ್ನಡಿಗರ ನೆಲೆ. ವಿನಾಕಾರಣ ಗಡಿ, ಭಾಷೆ ಸಮಸ್ಯೆ, ಕರಾಳ ದಿನಾಚರಣೆ ಕಪ್ಪು ಬಾವುಟ ಪ್ರದರ್ಶನಗಳಿಗೆ ಎಂದಿಗೂ ಕನ್ನಡಿಗರು ಎದೆ ಗುಂದುವುದಿಲ್ಲ ಎಂದು ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ.
ಎಂಇಎಸ್ ಕಾರ್ಯಕರ್ತರ ಪುಂಡಾಟಿಕೆಗಳಿಗೆ ಸರಕಾರ ಬ್ರೇಕ್ ಹಾಕಬೇಕು ಎಂದು ಒತ್ತಾಯ ಮಾಡಲಾಗಿದೆ. ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಅಕ್ಷಯ ಎಸ್.ಬಿ., ಪ್ರಸಾದ ಮಡಿವಾಳ, ಮನೋಜ್ ಶೇಟ್, ಅವಿನಾಶ ನಾಯ್ಕ, ಮದನ್ ಸಿ., ಗೌರಿಶ ನಾಯ್ಕ, ನಾಗರಾಜ್ ಹಾಗೂ ಇನ್ನಿತರು ಇದ್ದರು.