ಕಾರವಾರ: ಕಾಮಗಾರಿಗಳು ನಡೆಯುವಾಗ ಸ್ಥಳೀಯರು ಗಮನಿಸಿ, ಅದರ ಗುಣಮಟ್ಟವನ್ನು ಪರಿಶೀಲಿಸಬೇಕು ಎಂದು ಶಾಸಕಿ ರೂಪಾಲಿ ಎಸ್ ನಾಯ್ಕ ಹೇಳಿದರು.
ಕಾರವಾರ ತಾಲ್ಲೂಕಿನ ಘಾಡಸಾಯಿ, ಗೋಟೆಗಾಳಿ, ಅಸ್ನೋಟಿ, ಮುಡಗೇರಿ ಹಾಗೂ ಹಣಕೋಣ ಗ್ರಾಮ ಪಂಚಾಯತಿ ವ್ಯಾಪ್ತಿಯ ವಿವಿಧ ಇಲಾಖೆಗಳ ಕಾಮಗಾರಿಗಳ ಶಂಕುಸ್ಥಾಪನೆಯನ್ನು ನೆರವೇರಿಸಿ ಅವರು ಮಾತನಾಡಿದರು.
ಜೆಜೆಎಂ ಯೋಜನೆಯಡಿ ಕುಡಿಯುವ ನೀರು ಇಲ್ಲದಿರುವವರಿಗೆ ಮೊದಲು ನೀರು ಒದಗಿಸಬೇಕು. ಇದನ್ನು ಗಮನದಲ್ಲಿಟ್ಟುಕೊಂಡು ಕಾಮಗಾರಿಗಳನ್ನು ಕೈಗೊಳ್ಳಬೇಕು. ಪ್ರತಿಯೊಬ್ಬರಿಗೂ ಮೂಲಭೂತ ಸೌಕರ್ಯಗಳು ತಲುಪಬೇಕು. ನೀರಿಗಾಗಿ ಸುಮಾರು 118 ಕೋಟಿ ರೂ.ವೆಚ್ಚದಲ್ಲಿ ಯೋಜನೆಯನ್ನು ರೂಪಿಸಲಾಗಿದೆ. ಕದ್ರಾ ಜಲಾಶಯದ ಮೇಲಿನಿಂದ ನೀರು ನೀಡುವ ಐತಿಹಾಸಿಕ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.
ಆರೋಗ್ಯ ಕೇಂದ್ರದಲ್ಲಿ ವೈದ್ಯರು ನಿರಂತರವಾಗಿ ಸಾರ್ವಜನಿಕರ ಸೇವೆಗೆ ಸಿಗುವಂತೆ ಆಗಬೇಕು ಮನವಿ ಸಲ್ಲಿಸಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ ಇದರ ಬಗ್ಗೆ ಕ್ರಮವಹಿಸುವುದಾಗಿ ಭರವಸೆ ನೀಡಿದರು.
ಕೋವಿಡ್ ಹಾಗೂ ಪ್ರವಾಹ ಬಂದರೂ ಕೂಡ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನವನ್ನು ಸರ್ಕಾರ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಹಲವು ಅಭಿವೃದ್ಧಿ ಯೋಜನೆಗಳು ಜನಪರ ಯೋಜನೆಗಳನ್ನು ಜಾರಿಗೆ ತಂದು ಜನರ ಹಿತಕ್ಕಾಗಿ ಶ್ರಮಿಸುತ್ತಿದೆ. ಇಲ್ಲಿಯ ಜನರ ಹಲವು ವರ್ಷಗಳ ಬೇಡಿಕೆಯಾಗಿರುವ ಬೋಳಶಿಟ್ಟಾ ಘಾಡಸಾಯಿ ಸೇತುವೆ ನಿರ್ಮಾಣಕ್ಕೆ 15 ಕೋಟಿ ರೂ. ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಇದು ನಿರ್ಮಾಣವಾದರೆ ಇಲ್ಲಿಯ ಜನರಿಗೆ ಅನುಕೂಲವಾಗಲಿದೆ ಎಂದರು.
ಗೋಟೆಗಾಳಿ:
ದಿ.ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದಾಗ ಖಾರ್ಲ್ಯಾಂಡ್ ಆಣೆಕಟ್ಟು ನಿರ್ಮಾಣ ಮಾಡಿದ್ದರು. ಇದುವರೆಗೂ ಯಾವ ಸರ್ಕಾರವೂ ಅದರ ಬಗ್ಗೆ ಕಾಳಜಿ ತೋರಿಸಿಲ್ಲ. ಆದರೆ ದಶಕಗಳ ನಂತರ ಬಿಜೆಪಿ ಸರ್ಕಾರ ಅದನ್ನು ಮುತುವರ್ಜಿವಹಿಸಿ ಮಾಡಿದೆ. ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅನುದಾನವನ್ನು ನೀಡಿದ್ದಾರೆ. ಮೊದಲ ಹಂತದಲ್ಲಿ 100 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಇನ್ನು ಹಲವು ಕಡೆ ಖಾರ್ಲ್ಯಾಂಡ್ ನಿರ್ಮಾಣಕ್ಕೆ ಹಂತ ಹಂತವಾಗಿ ಅನುದಾನ ಬಿಡುಗಡೆಯಾಗಲಿದೆ. ಗೋಯರ ರಸ್ತೆ ನಿರ್ಮಾಣ ಮಾಡಬೇಕೆಂದು ಅಲ್ಲಿ ಜನರು ಮನವಿಯನ್ನು ಸಲ್ಲಿಸಿದರು. ಅದಕ್ಕಾಗಿ ಅನುದಾನವನ್ನು ಮೀಸಲಿಡಲಾಗಿದೆ. ವನ್ಯಜೀವಿ ವಲಯಕ್ಕೆ ಬರುವುದರಿಂದ ಅದರ ಅನುಮತಿಗೆ ಕಡತವನ್ನು ಸಲ್ಲಿಸಲಾಗಿದೆ ಎಂದರು.
ಅಸ್ನೋಟಿ:
ಇಲ್ಲಿಯ ಜನರು ಬೇರೆ ಊರುಗಳಿಗೆ ಕಡಿಮೆ ಸಂಬಳಕ್ಕೆ ದುಡಿಯಲು ಹೋಗುತ್ತಾರೆ. ಉದ್ಯೋಗಕ್ಕಾಗಿ ಅನಿವಾರ್ಯವಗಿ ತಂದೆ ತಾಯಿಯವರನ್ನು ಬಿಟ್ಟು ಹೋಗುವ ಪರಿಸ್ಥಿತಿ ಇದೆ. ಅದನ್ನು ತಪ್ಪಿಸಲು ಮುಡಗೇರಿಯಲ್ಲಿ ಕೈಗಾರಿಕೆ ಸ್ಥಾಪನೆಯ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಕೈಗಾರಿಕೆ ಪ್ರಾರಂಭಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದೇನೆ. ಅದನ್ನು ಮಾಡಿಯೇ ಮಾಡುತ್ತೇನೆ. ಯಾರಿಗೂ ಬೇಧ ಮಾಡದೇ, ಎಲ್ಲರಿಗೂ ಅನುಕೂಲವಾಗುವಂತೆ ಕಾಮಗಾರಿಗಳನ್ನು ಹಾಕಲಾಗಿದೆ. ದೇವಸ್ಥಾನ, ಶಾಲೆ, ಆಸ್ಪತ್ರೆ, ಸ್ಮಶಾನ ಹೀಗೆ ಬೇರೆ ಬೇರೆ ಭಾಗದಲ್ಲಿ ರಸ್ತೆ ನಿರ್ಮಾಣಕ್ಕೆ ಅನುದಾನ ಒದಗಿಸಿದ್ದೇನೆ ಎಂದರು.
ಮುಡಗೇರಿಯಲ್ಲಿ 2 ಕೋಟಿ ರೂ.ಗೂ ಹೆಚ್ಚಿನ ಮೊತ್ತದ ಕಾಮಗಾರಿ ಶಂಕುಸ್ಥಾಪನೆ:
ಸುಮಾರು 2 ಕೋಟಿಗೂ ಹೆಚ್ಚಿನ ಮೊತ್ತದ ಕಾಮಗಾರಿಯ ಶಂಕುಸ್ಥಾಪನೆ ಮಾಡಲಾಗಿದೆ. ಇಲ್ಲಿಯ ಜನರು ಹಾಗೂ ಹಿರಿಯ ನಾಗರಿಕರು ಆಸ್ಪತ್ರೆಯ ಬಗ್ಗೆ ಮನವಿಯನ್ನು ಮಾಡಿದ್ದರು. ಅದರಂತೆ ನಾನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಆರೋಗ್ಯ ಸಚಿವರಾದ ಡಾ.ಕೆ ಸುಧಾಕರ ಅವರಲ್ಲಿ ಅಂಗಡಿಯ ಆರೋಗ್ಯ ಕೇಂದ್ರದ ಉನ್ನತಿಕರಣಕ್ಕೆ ಮನವಿ ಮಾಡಿದಾಗ ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಮುಂದಿನ ದಿನದಲ್ಲಿ ಆಂಬ್ಯುಲೆನ್ಸನ್ನು ಕೂಡ ಒದಗಿಸುವ ಭರವಸೆ ನೀಡಿದರು.
ಮುಡಗೇರಿ ಕೈಗಾರಿಕಾ ಪ್ರದೇಶಕ್ಕೆ ಜಮೀನು ನೀಡಿದವರಿಗೆ ಹೆಚ್ಚಿನ ಪರಿಹಾರಕ್ಕೆ ಶ್ರಮಿಸುತ್ತಿರುವುದು ಎಲ್ಲರಿಗೂ ತಿಳಿದಿದೆ. ಪರಿಹಾರದ ಹಣ ವಿತರಣೆಯಾಗುತ್ತಿದ್ದಂತೆ ಕೈಗಾರಿಕೆಗಳು ಬರುತ್ತವೆ. ಸ್ಥಳೀಯ ಜನರಿಗೆ ಉದ್ಯೋಗ ಸೃಷ್ಟಿಯಾಗುತ್ತದೆ. ಉದ್ಯೋಗವೂ ಲಭಿಸಲಿದೆ ಎಂದರು.
ಹಣಕೋಣ ಗ್ರಾಮ ಪಂಚಾಯತಿಗೆ 30 ಕೋಟಿ ರೂ:
ಹಣಕೋಣ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇಂದು ಸುಮಾರು 1 ಕೋಟಿ ವೆಚ್ಚದ ಕಾಮಗಾರಿಗಳಿಗೆ ಭೂಮಿ ಪೂಜೆಯನ್ನು ನೆರವೇರಿಸಲಾಗಿದೆ. ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆಯ ಕುರಿತು ನನ್ನ ಗಮನಕ್ಕೆ ಇದೆ. ಅದಕ್ಕಾಗಿ ಕದ್ರಾ ಜಲಾಶಯದಿಂದ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು. ಪ್ರವಾಹ ಹಾಗೂ ಕೊರೊನಾದ ನಡುವೆಯೂ ಹಣಕೋಣ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇದುವರೆಗೆ ಸುಮಾರು 30 ಕೋಟಿಗಿಂತಹೆಚ್ಚಿನ ಅನುದಾನವನ್ನು ಒದಗಿಸಲಾಗಿದೆ. ಉಪ್ಪು ನೀರು ತಡೆಯಲು ಖಾರ್ಲ್ಯಾಂಡ್ ನಿರ್ಮಾಣ ಅವಶ್ಯಕವಾಗಿದೆ. ಇದು ನಿರ್ಮಾಣವಾದರೆ ಬಾವಿಗಳಲ್ಲಿ ಉಪ್ಪು ನೀರು, ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಲಿದೆ ಎಂದರು. ಈ ಸಂದರ್ಭದಲ್ಲಿ ಕಾರವಾರ ಬಿಜೆಪಿ ಗ್ರಾಮೀಣ ಮಂಡಲದ ಅಧ್ಯಕ್ಷರು, ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಊರ ನಾಗರಿಕರು, ಪಕ್ಷದ ಪದಾಧಿಕಾರಿಗಳು, ಬೂತ್ ಪ್ರಮುಖರು, ಅಧಿಕಾರಿಗಳು ಉಪಸ್ಥಿತರಿದ್ದರು.