ಕಾರವಾರ: ಸರಸ್ವತಿ ದೇವಿಯ ನೆಲೆಯಾಗಿರುವ ಶಾಲೆಗಳು ರಾಜಕೀಯ ರಹಿತವಾಗಿ ಮಕ್ಕಳ ಬೌದ್ಧಿಕ, ಶಾರೀರಿಕ ವಿಕಸನದ ತಾಣಗಳಾಗಿರಬೇಕು ಎಂದು ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರ ಶಾಸಕಿ ರೂಪಾಲಿ ಎಸ್. ನಾಯ್ಕ ಹೇಳಿದರು.
ಕಾರವಾರ ತಾಲ್ಲೂಕಿನ ಅಮದಳ್ಳಿ ಕರ್ನಾಟಕ ಪಬ್ಲಿಕ್ ಸ್ಕೂಲ್ನಲ್ಲಿ ನೂತನ ಕಟ್ಟಡದ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು. ಶಾಲೆ ದೇಗುಲದಂತೆ ಅಲ್ಲಿ ಸರಸ್ವತಿಯ ನೆಲೆಸಿರುತ್ತಾಳೆ. ಶಾಲೆಯಲ್ಲಿ ಹೇಳಿದ ಪಾಠಗಳನ್ನು ಅದೇ ದಿನ ಅಭ್ಯಾಸ ಮಾಡಬೇಕು. ಪರೀಕ್ಷೆ ಬಂದಾಗಲೇ ಅಭ್ಯಾಸ ಮಾಡಬಾರದು. ನಿರಂತರ ಅಭ್ಯಾಸ ಮಾಡಬೇಕು. ಉನ್ನತ ಶಿಕ್ಷಣದ ಜೊತೆಗೆ ಕೌಶಲವನ್ನು ಅಳವಡಿಸಿಕೊಳ್ಳಬೇಕು. ಕಾರವಾರ ಮತ್ತು ಅಂಕೋಲಾ ವ್ಯಾಪ್ತಿಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿ ಉದ್ಯೋಗ ಸೃಷ್ಟಿಗೂ ಶ್ರಮಿಸುತ್ತಿದ್ದೇನೆ. ಪ್ರಾಥಮಿಕ ಹಂತದಿಂದ ಪಿಯುಸಿ ಶಿಕ್ಷಣದವರೆಗೂ ವಿದ್ಯಾರ್ಥಿಗಳಿಗೆ ಸಿಗುವಂತಹ ವ್ಯವಸ್ಥೆಯಾಗಿದೆ. ಕನ್ನಡ ಅಷ್ಟೇ ಅಲ್ಲದೇ ಆಂಗ್ಲ ಮಾಧ್ಯಮದ ಶಿಕ್ಷಣವನ್ನು ಸರ್ಕಾರಿ ಶಾಲೆಯಲ್ಲಿ ನೀಡಲಾಗುತ್ತದೆ ಎಂದರು.
ತಂದೆ-ತಾಯಿ ಹಾಗೂ ಗುರುಗಳು ಹೇಳುವ ಮಾತುಗಳನ್ನು ಮಕ್ಕಳು ಕೇಳಬೇಕು. ಅವರನ್ನು ಗೌರವಿಸಬೇಕು. ಉನ್ನತ ಗುರಿಗಳನ್ನು ಹೊಂದಬೇಕು. ತಂತ್ರಜ್ಞಾನ ಬಳಕೆಯನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳಬೇಕು. ಶಿಕ್ಷಣದ ಜತೆ ಜತೆಗೆ ಪಠ್ಯೇತರ ಚಟುವಟಿಕೆಯಲ್ಲಿಯೂ ಪಾಲ್ಗೊಂಡು ಸಾಧನೆಯನ್ನು ಮಾಡಬೇಕು. ದೇಶಕ್ಕೆ ಕೀರ್ತಿ ತರುವ ಕೆಲಸವನ್ನು ಮಾಡಬೇಕು. ಸಾಮಾನ್ಯ ಜ್ಞಾನವನ್ನು ತಿಳುವಳಿಕೆ ಇರಬೇಕು. ಇವೆಲ್ಲವೂ ಇಂದಿನ ಅವಶ್ಯಕವಾಗಿದೆ. ಮಕ್ಕಳು ಯಾವುದೇ ರೀತಿಯ ಶೈಕ್ಷಣಿಕವಾಗಿ ಹಿಂದುಳಿಯಬಾರದು ಎಂದರು.
ಸರ್ಕಾರ ಶಿಕ್ಷಣಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅವೆಲ್ಲವೂ ಮಕ್ಕಳಿಗೆ ತಲುಪಿಸಲಾಗುತ್ತಿದೆ. ಶಿಕ್ಷಣದಲ್ಲಿ ಯಾವುದೇ ಕೊರತೆಯಾಗದಂತೆ ಸರ್ಕಾರ ನೋಡಿಕೊಳ್ಳುತ್ತಿದೆ. ಮಳೆಗಾಲದಲ್ಲಿ ಯಾವುದೇ ರೀತಿಯ ಸಮಸ್ಯೆಯಾಗದಂತೆ ಸ್ಥಳೀಯವಾಗಿ ಅವಶ್ಯಕವಾಗುವಂತಹ ಕಟ್ಟಡದ ವಿನ್ಯಾಸವನ್ನು ರೂಪಿಸಬೇಕು. ಅಚ್ಚುಕಟ್ಟಾಗಿ ಸುಂದರವಾದಂತಹ ಕಟ್ಟಡವನ್ನು ನಿರ್ಮಿಸಬೇಕೆಂದು ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಅವರಿಗೆ ಸೂಚಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಮೂಲೆ ಮೂಲೆಗಳಲ್ಲೂ ಅಭಿವೃದ್ಧಿ ಮಾಡುತ್ತಿದ್ದಾರೆ. ಶೈಕ್ಷಣಿಕ ಸುಧಾರಣೆ ಮಾಡುತ್ತಿದ್ದಾರೆ. ಯೋಜನೆಗಳನ್ನು ಮನೆ ಮನೆಗೆ ತಲುಪಿಸಲಾಗುತ್ತಿದೆ. ಫಲಾನುಭವಿಗಳಿಗೆ ನೇರವಾಗಿ ಅವರ ಖಾತೆಗಳಿಗೆ ನೇರವಾಗಿ ಹಣವನ್ನು ನೀಡುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರು ಆಶಾ ನಾಯ್ಕ, ಉಪಾಧ್ಯಕ್ಷರಾದ ರವಿ ದುರ್ಗೇಕರ, ಉಪನಿರ್ದೇಶಕರು, ತಹಶೀಲ್ದಾರರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸದಸ್ಯರು, ಪಾಲಕರು, ಶಿಕ್ಷಕರು ವಿದ್ಯಾರ್ಥಿಗಳು ಇದ್ದರು.