ಕಾರವಾರ: ಉತ್ತರ ಕನ್ನಡದಲ್ಲಿ ಸೂಪರ್ ಸ್ಪೇಶಾಲಿಟಿ ಆಸ್ಪತ್ರೆ ಆಗಲೇಬೇಕು. ನಮ್ಮ ಜನರಿಗೆ ತುಂಬಾ ತೊಂದರೆ ಆಗುತ್ತಿದೆ ಎಂದು ವಿಧಾನಸಭೆಯಲ್ಲಿ ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ಎಸ್.ನಾಯ್ಕ ಧ್ವನಿ ಎತ್ತಿದರು.
ಜಿಲ್ಲಾ ಕೇಂದ್ರದಲ್ಲಿ ಸೂಪರ್ ಸ್ಪೇಶಾಲಿಟಿ ಆಸ್ಪತ್ರೆ ಇಲ್ಲದೆ ಬಡ ರೋಗಿಗಳು ದೂರದ ಆಸ್ಪತ್ರೆಗಳಿಗೆ ಹೋಗಬೇಕಾದ ಅನಿವಾರ್ಯತೆ ಇದೆ. ಸೂಪರ್ ಸ್ಪೇಶಾಲಿಟಿ ಆಸ್ಪತ್ರೆ ಯಾವಾಗ ಮಂಜೂರಾಗಲಿದೆ ಎಂಬ ತಮ್ಮ ಪ್ರಶ್ನೆಗೆ ಆಸ್ಪತ್ರೆಗೆ ಮಂಜೂರಿಗೆ ಆರ್ಥಿಕ ಇಲಾಖೆ ಸಹಮತ ನೀಡಿಲ್ಲ ಎಂದು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಉತ್ತರ ಲಭ್ಯವಾಗುತ್ತಿದ್ದಂತೆ ಎದ್ದು ನಿಂತ ರೂಪಾಲಿ ನಾಯ್ಕ ಸೂಪರ್ ಸ್ಪೇಶಾಲಿಟಿ ಆಸ್ಪತ್ರೆ ಪರವಾಗಿ ಗಟ್ಟಿಯಾದ ಧ್ವನಿ ಎತ್ತಿದರು.
ನಾನು ಹಿಂದಿನಿಂದಲೂ ಸೂಪರ್ ಸ್ಪೇಶಾಲಿಟಿ ಆಸ್ಪತ್ರೆ ಬಗ್ಗೆ ಪ್ರಸ್ತಾಪ ಮಾಡುತ್ತಿದ್ದೇನೆ. ಇದುವರೆಗೆ 24 ಮನವಿಗಳನ್ನು ನೀಡಿದ್ದೇನೆ. ಜಿಲ್ಲೆಯಲ್ಲಿ ಆಸ್ಪತ್ರೆ ಆಗಲೇಬೇಕು ಎನ್ನುತ್ತಿರುವಂತೆ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಧ್ಯಪ್ರವೇಶಿಸಿ, ಇದು ಗಂಭೀರ ವಿಷಯ. ಈಗ ಸಚಿವರು ಸದನದಲ್ಲಿ ಇಲ್ಲ. ನಾನೂ ದನಿಗೂಡಿಸುತ್ತೇನೆ ಮುಂದಿನ ವಾರ ಚರ್ಚೆಗೆ ಅವಕಾಶ ಮಾಡಿಕೊಡುವುದಾಗಿ ತಿಳಿಸಿದರು.
ಆದರೂ ಪಟ್ಟು ಬಿಡದ ರೂಪಾಲಿ ಎಸ್.ನಾಯ್ಕ, ಈ ಬಾರಿ ಅವರಿಗೆ ಅನಾರೋಗ್ಯ, ಮುಂದಿನ ಬಾರಿ ತಮಗೆ ಅನಾರೋಗ್ಯ ಕಾಡಬಹುದು. ಸಚಿವರು ಇರದಿದ್ದರೆ ಬೇರೆಯವರಿಗೆ ಉತ್ತರಿಸಲು ಅವಕಾಶ ಮಾಡಿಕೊಡಿ ಎಂದರು.
ಇಷ್ಟಕ್ಕೆ ವಿರಮಿಸದ ರೂಪಾಲಿ ಎಸ್.ನಾಯ್ಕ ನೀವೂ ನಮ್ಮ ಜಿಲ್ಲೆಯವರು. ಹಿರಿಯರಾದ ಶಿವರಾಮ ಹೆಬ್ಬಾರ್ ಇದ್ದಾರೆ. ಎಲ್ಲ ಶಾಸಕರೂ ಇದ್ದೇವೆ. ನಮ್ಮ ಜಿಲ್ಲೆಗೆ ಸೂಪರ್ ಸ್ಪೇಶಾಲಿಟಿ ಆಸ್ಪತ್ರೆ ನೀಡದಿದ್ದರೆ ಇನ್ನು ಜನರಿಗೆ ಏನು ಹೇಳಬೇಕು ಎಂದು ಪ್ರಶ್ನಿಸಿ, ಇದು ಹುಡುಗಾಟ ಅಲ್ಲ. ಕೈಮುಗಿದು ಕೇಳಿಕೊಳ್ಳುತ್ತೇನೆ ಎಂದು ಜಿಲ್ಲೆಯ ಜನತೆಯ ಪರವಾಗಿ ವಿನಂತಿಸಿದರು.
ಮತ್ತೆ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಈಗ ಪ್ರಶ್ನೋತ್ತರ ಅವಧಿ. ಚರ್ಚೆಗೆ ಅವಕಾಶ ಇಲ್ಲ. ಮುಂದಿನ ವಾರ ಅವಕಾಶ ಮಾಡಿಕೊಡುವುದಾಗಿ ಭರವಸೆ ನೀಡಿದರು.