ಕಾರವಾರ: ಗ್ರಾಮೀಣ ಪ್ರದೇಶದಲ್ಲಿ ನರೇಗಾದಡಿ ಕೆಲಸ ನಿರ್ವಹಿಸುವ ಕೂಲಿಕಾರರು ಹಾಗೂ ಅಸಂಘಟಿತ ಕೂಲಿ ಕಾರ್ಮಿಕರು ಕಡ್ಡಯವಾಗಿ ಇ-ಶ್ರಮ್ ಕಾರ್ಡ್ ಮತ್ತು ಕೇವಲ 12 ರೂ ಹಾಗೂ 330 ರೂ ಪಾವತಿಸುವ ಮೂಲಕ ತಲಾ 2 ಲಕ್ಷ ರೂ ಮೊತ್ತದ ಅಪಘಾತ ಮತ್ತು ಜೀವನ್ ವಿಮಾ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ತೋಡೂರು ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳಾದ ಎನ್.ಕೆ. ತೆಂಡೂಲಕರ ಹೇಳಿದರು.
ಜಿಲ್ಲೆಯ ಕಾರವಾರ ತಾಲೂಕಿನ ತೋಡೂರು ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ನಡೆದ ಮಹಿಳಾ ಉದ್ಯೋಗ ಸಬಲೀಕರಣ ಅಭಿಯಾನ ಹಾಗೂ ವಿಶೇಷ ಮಹಿಳಾ ಗ್ರಾಮ ಸಭೆಯಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗ್ರಾಮದ ಮಹಿಳೆಯರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸ್ವ-ಸಂಘದ ಸದಸ್ಯರಿಗೆ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಮಹಿಳಾ ಪಾಲ್ಗೊಳ್ಳುವಿಕೆ ಹೆಚ್ಚಿಸಿ ಯೋಜನೆಯಡಿ ಲಭ್ಯವಿರುವ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿ, ಬಾಲ್ಯ ವಿವಾಹ ನಿಷೇಧ, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆಧ್ಯತೆ, ಮಹಿಳಾ ಸ್ವಸಹಾಯ ಸಂಘಗಳಿಗೆ ಸಿಗುವ ಸೌಲಭ್ಯಗಳ ಕುರಿತು ಅವರು ಮಾಹಿತಿ ನೀಡಿದರು.
ಜೊತೆಗೆ ಕೇಂದ್ರ ಸರ್ಕಾರವು ಅಸಂಘಟಿತ ಕೂಲಿಕಾರರ ಒಳಿತಿಗಾಗಿ ಹಾಗೂ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಇ-ಶ್ರಮ್ ಕಾರ್ಡ್, ಕಾರ್ಮಿಕ ಕಾರ್ಡ್ ವ್ಯವಸ್ಥೆ, ಅಪಘಾತ ಹಾಗೂ ಜೀವನ್ ವಿಮಾ ಪಾಲಿಸಿ ಜಾರಿಗೆ ತಂದಿದೆ. ಹೀಗಾಗಿ ಪ್ರತಿಯೊಬ್ಬರೂ ಹೆಸರು ನೋಂದಣಿ ಮೂಲಕ ವರ್ಷಕ್ಕೆ 12 ರೂ. ಮತ್ತು 330 ರೂ. ಸೇರಿದಂತೆ ಒಟ್ಟು 342 ರೂ. ಪಾವತಿಸಿ ತಲಾ 2 ಲಕ್ಷ ರೂ. ನಂತೆ ಒಟ್ಟಾರೆ 4 ಲಕ್ಷ ರೂ. ಪಡೆಯಬಹುದಾಗಿದೆ ಎಂದರು. ಗ್ರಾಮ ಪಂಚಾಯತಿ ಸದಸ್ಯರಾದ ಚಂದ್ರಕಾಂತ ಚಿಂಚಣಕರ ಮಾತನಾಡಿ, ಸಮಾಜದ ಎಲ್ಲ ಕ್ಷೇತ್ರದಲ್ಲೂ ಮಹಿಳೆಯರು ಸಾಧನೆಗೈಯ್ಯುತ್ತಿದ್ದು, ಮನೆ ಹಾಗೂ ಪರಿಸರ ಸ್ವಚ್ಚತೆಯಲ್ಲೂ ಸೈ ಎನಿಸಿಕೊಂಡಿದ್ದಾರೆ.
ಹೀಗಾಗಿ ಗ್ರಾಮದ ಪ್ರತಿಯೊಬ್ಬ ಮಹಿಳೆಯರು ಕಸವನ್ನು ಬಯಲು ಪ್ರದೇಶ ಹಾಗೂ ಅಕ್ಕ-ಪಕ್ಕದವರ ಆಸ್ತಿಯಲ್ಲಿ ಎಸೆಯಬಾರದು. ಹಾಗೇನಾದರೂ ಬೇಕಾ ಬಿಟ್ಟಿಯಾಗಿ ಕಸ ಚೆಲ್ಲಿದರೆ ಅಂತವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗುತ್ತವೆ. ಆದ್ದರಿಂದ ಗ್ರಾಮಸ್ಥರು ಜಾಗೃತರಾಗಿ ತಮ್ಮ ಮನೆಯ ಕಸವನ್ನು ಹಸಿ ಹಾಗೂ ಒಣ ಕಸವನ್ನಾಗಿ ಬೇರ್ಪಡಿಸಿ ಗ್ರಾಮ ಪಂಚಾಯತಿಯಿಂದ ನೀಡುವ ಕಸದ ಡಬ್ಬಿಯಲ್ಲಿ ಸಂಗ್ರಹಿಸಿಡಬೇಕು. ನಂತರ ಗ್ರಾಮದಲ್ಲಿ ಸಂಚರಿಸುವ ಕಸ ಸಂಗ್ರಹ ವಾಹನಕ್ಕೆ ನೀಡಬೇಕು. ಈ ಸಂಗ್ರಹ ಕಸದಿಂದ ಗೊಬ್ಬರ ತಯಾರಿಸುವ ಯೋಜನೆ ರೂಪಿಸಲಾಗಿದೆ ಎಂದರು.
ತಾಲೂಕ ಐಇಸಿ ಸಂಯೋಜಕ ಫಕ್ಕೀರಪ್ಪ ತುಮ್ಮಣ್ಣನವರ ಮಾತನಾಡಿ, ನರೇಗಾದಡಿ ನಿರ್ಮಿಸಿಕೊಳ್ಳಬಹುದಾದ ಅಂಗನವಾಡಿ ಕೇಂದ್ರ, ಶಾಲಾ ಶೌಚಾಲಯ, ಕಾಂಪೌಂಡ್, ಆಟದ ಮೈದಾನ, ವೈಯಕ್ತಿಕ ಪೌಷ್ಟಿಕ ಕೈತೋಟ, ನರ್ಸರಿ, ಎನ್ಆರ್ಎಲ್ಎಂ ಶೆಡ್ನ ಕುರಿತು ಅಗತ್ಯ ಮಾಹಿತಿ ನೀಡಿದರು. ಜೊತೆಗೆ ಕೂಡಲೇ ಗ್ರಾಮ ಪಂಚಾಯತಿಗೆ ಕಾಮಗಾರಿ ಹಾಗೂ ಕೆಲಸದ ಬೇಡಿಕೆ ಸಲ್ಲಿಸುಂತೆ ತಿಳಿಸಿದರು.
ಇದೇ ವೇಳೆ ಸ್ವ-ಸಹಾಯ ಸಂಘಗಳ ಎಂಬಿಕೆ ಕಾರ್ಯಕರ್ತೆ ಹಾಗೂ ಅಂಗನವಾಡಿ ಕಾರ್ಯಕರ್ತೆ ಸರಕಾರದ ವಿವಿಧ ಯೋಜನೆಗಳಡಿ ಸಿಗುವಂತಹ ಸೌಕರ್ಯಗಳನ್ನು ಬಗ್ಗೆ ವಿವರಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಪೇರು ಗೌಡ, ಉಪಾಧ್ಯಕ್ಷರಾದ ಸೀಮಾ ಗುನಗಾ, ಸದಸ್ಯರಾದ ಚಂದ್ರಕಾಂತ ಚಿಂಚಣಕರ, ಸಂತೋಷ ನಾಯ್ಕ, ಕರುಣಾ ನಾಯ್ಕ, ಸುಶೀಲಾ ಅಗೇರ, ಪಂಚಾಯತ್ನ ಕಾರ್ಯದರ್ಶಿಗಳಾದ ಕಿರಣ್ ಹೆಗಡೆ, ಡಿಇಒಗಳಾದ ಅನಿಲ ನಾಯ್ಕ, ಪ್ರವೀತಾ ದೇವಾಸ್ಕರ್, ಮೇಟ್ ಶ್ರೆಯಾ ಬಾಂದೇಕರ್, ಎಂಬಿಕೆ ಆದ ದೇವಿಕಾ ನಾಯ್ಕ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಉಪಸ್ಥಿತರಿದ್ದರು.