ಕಾರವಾರ: ರಾಷ್ಟೀಯ ಹೆದ್ದಾರಿ -೬೬ರಿಂದ ದೇವತಿ ದೇವಸ್ಥಾನ, ಸೈಲವಾಡಾ, ಗಾಂವಗೇರಿಗೆ ಹೋಗಲು ಅನುಕೂಲವಾಗುವಂತೆ ಹೆದ್ದಾರಿಯಲ್ಲಿದ್ದ ಡಿವೈಡರ್ ತೆರವು ಮಾಡಿ ಸ್ಥಳೀಯರಿಗೆ ದಾರಿ ಮಾಡಿಕೊಡುವಂತೆ ಶಾಸಕಿ ರೂಪಾಲಿ ನಾಯ್ಕ ಅವರು ಐಆರ್ಬಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಾಸಕಿ ರೂಪಾಲಿ ನಾಯ್ಕ ಅವರಿಗೆ ಮಾಜಾಳಿಯ ಸಾರ್ವಜನಿಕರು ಮನವಿ ಸಲ್ಲಿಸಿದರು. ರಾಷ್ಟೀಯ ಹೆದ್ದಾರಿಯ ಮೂಲಕ ಕಾರವಾರದಿಂದ ದೇವತಿ ದೇವಸ್ಥಾನ, ಸೈಲ್ ವಾಡಾ ಮತ್ತು ಗಾಂವಗೇರಿಗೆ ಹೋಗುವವರು ಮಾಜಾಳಿ ಚೆಕ್ ಪೋಸ್ಟ್ಹೋಗಿ ಸುತ್ತು ಹಾಕಿ ಬರಬೇಕಾಗುತ್ತದೆ. ಇದೂ ಅಲ್ಲದೇ ಕೆಲ ವಾಹನಗಳು ಮಾಜಾಳಿಯ ಮೀನು ಮಾರುಕಟ್ಟೆಯ ವೃತ್ತದಿಂದ ವಿರುದ್ಧ ದಿಕ್ಕಿನಲ್ಲಿ ಸಂಚರಿಸುವುದರಿಂದ ಅಪಘಾತ ಸಂಭವಿಸುವ ಸಾಧ್ಯತೆಗಳು ಇರುತ್ತವೆ.
ಹಾಗಾಗಿ ಹೆದ್ದಾರಿಯಲ್ಲಿ ಹಾಕಲಾಗಿರುವ ಡಿವೈಡರ್ ತೆರವು ಮಾಡಿ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಸ್ಥಳೀಯರು ಶಾಸಕರ ಬಳಿ ಮನವಿ ಮಾಡಿದರು. ಮನವಿ ಸ್ಪಂದಿಸಿದ ಶಾಸಕಿ ರೂಪಾಲಿ ಅವರು ಸ್ಥಳದಲ್ಲಿಯೇ ಐಆರ್ಬಿ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಮಾತನಾಡಿದರು, ಹೆದ್ದಾರಿಯಿಂದ ಗಾಂವಗೇರಿಗೆ ಹೋಗುವ ಮಾರ್ಗವು ತುಂಬ ಹಳೆಯ ರಸ್ತೆಯಾಗಿದೆ. ಅಲ್ಲದೇ ಜನವಸತಿ ಪ್ರದೇಶ ಇದಾಗಿರುವುದರಿಂದ ಡಿವೈಡರ್ ತೆರವು ಮಾಡಿ ಸ್ಥಳೀಯರ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು ಎಂದು ತಿಳಿಸಿದರು. ಶಾಸಕರ ಮನವಿ ಸ್ಪಂದಿಸಿದ ಐಆರ್ಬಿ ಅಧಿಕಾರಿಗಳು ಡಿವೈಡರ್ ತೆರವು ಮಾಡುವ ಭರವಸೆ ನೀಡಿದ್ದಾರೆ.