ಕಾರವಾರ: ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರ ಗಮನಕ್ಕೆ ತಾರದೇ ಕಾನೂನು ಬಾಹಿರವಾಗಿ ತಯಾರಿಸಿದ ಹೆಚ್ಚುವರಿ ವಸತಿ ಯೋಜನೆಯ ಫಲಾನುಭವಿಗಳ ಯಾದಿಯನ್ನು ಅಂಗೀಕರಸದೆ ತಡೆ ಹಿಡಿಯುವಂತೆ ಜಿಪಂ ಸಿಇಓ ಅವರನ್ನು ಮನವಿ ಮಾಡಲಾಗಿದೆ ಎಂದು ಹೊನ್ನಾವರ ತಾಲ್ಲೂಕಿನ ಹಳದಿಪುರ ಗ್ರಾಪಂ ಅಧ್ಯಕ್ಷ ಅಜಿತ ನಾಯ್ಕ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಸೋಮವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಸರ್ಕಾರದ ವಿವಿಧ ವಸತಿ ಯೋಜನೆಯಡಿಯಲ್ಲಿ 2022- 23 ನೇ ಸಾಲಿಗೆ ಹೊನ್ನಾವರ , ಕುಮಟಾ ವಿಧಾನಸಭಾಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗ್ರಾಮಪಂಚಾಯತಗಳಿಂದ ಹೆಚ್ಚುವರಿ ಫಲಾನುಭವಿಗಳ ಯಾದಿಯನ್ನು ತಯಾರಿಸಿ ಸಲ್ಲಿಸುವಂತೆ ಸೂಚಿಸಲಾಗಿತ್ತು.
ಆದರೆ ಹೊನ್ನಾವರ ತಾಪಂ ನವರು ಹಳದೀಪುರ ಗ್ರಾಮಪಂಚಾಯತಿಗೆ ಯಾವುದೇ ಮಾಹಿತಿಯನ್ನು ನೀಡದೇ ನಮ್ಮ ಪಂಚಾಯತದಿಂದ ಯಾವುದೇ ಫಲಾನುಭವಿಗಳ ಯಾದಿಯನ್ನು ಪಡೆಯದೇ ಅವರೇ ವಸತಿ ಯೋಜನೆಯ ಹೆಚ್ಚುವರಿ ಫಲಾನುಭವಿಗಳ ಯಾದಿಯನ್ನು ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿದ್ದಾರೆ.
ಈ ಬಗ್ಗೆ ವಿಷಯ ತಿಳಿದು ತಾಪಂ ಕಾರ್ಯಾಲಯಕ್ಕೆ ವಿಚಾರಿಸಿದರೆ ಹಾರಿಕೆಯ ಉತ್ತರವನ್ನು ನೀಡಿ ನುಣುಚಿಕೊಂಡಿದ್ದಾರೆ. ಯಾವುದೇ ವಸತಿ ಯೋಜನೆಯಡಿಯಲ್ಲಿ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರ ಒಪ್ಪಿಗೆಯ ಮೇರೆಗೆ ಅರ್ಹ ಫಲಾನುಭವಿಗಳ ಯಾದಿಯನ್ನು ತಯಾರಿಸಿ ಅದಕ್ಕೆ ಪಿಡಿಓ ಹಾಗೂ ಅಧ್ಯಕ್ಷರ ಸೀಲ್ ಹಾಗೂ ಸಹಿಯೊಂದಿಗೆ ಸರ್ಕಾರಕ್ಕೆ ಸಲ್ಲಿಸುವುದು ನಿಯಮವಾಗಿದೆ.
ಆದರೆ ಹೊನ್ನಾವರ ತಾಪಂ ಸ್ಥಳೀಯ ಗ್ರಾಪಂಗೆ ಇರುವ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡುವುದರೊಂದಿಗೆ ಸರ್ವಾಧಿಕಾರಿ ಧೋರಣೆ ತೋರಿ , ಅಧ್ಯಕ್ಷರು ಹಾಗೂ ಸದಸ್ಯರ ಅಸ್ತಿತ್ವಕ್ಕೆ ಹಾಗೂ ಅಧಿಕಾರಕ್ಕೆ ಅವಮಾನವಾಗುವ ರೀತಿ ನಡೆದುಕೊಂಡಿದೆ ಎಂದು ಆರೋಪಿಸಿದರು.
ಯಾದಿಯನ್ನು ಗ್ರಾಮ ಪಂಚಾಯತದಿಂದ ಪಡೆಯದಿದ್ದರೂ ಯಾದಿಯಲ್ಲಿ ಗ್ರಾಮ ಪಂಚಾಯತದಿಂದ ಪಡೆದು ಸಲ್ಲಿಸಿದ್ದು ಇರುತ್ತದೆ ಎಂದು ಸುಳ್ಳು ಮಾಹಿತಿಯನ್ನು ನೀಡಲಾಗಿದೆ. ಇದರಿಂದ ತೀರಾ ಅವಶ್ಯವಾಗಿ ಅಗತ್ಯವಿರುವ ಬಡವರಿಗೆ ಮನೆ ದೊರೆಯದೆ ಅನ್ಯಾಯವಾದಂತಾಗಿದೆ. ಹೀಗಾಗಿ ಗ್ರಾಮಪಂಚಾಯತ ಗಮನಕ್ಕೆ ತರದೇ ಅಕ್ರಮವಾಗಿ ತಯಾರಿಸಿ ಸಲ್ಲಿಸಿದ ಹೆಚ್ಚುವರಿ ಫಲಾನುಭವಿಗಳ ಯಾದಿಯನ್ನು ತಡೆ ಹಿಡಿದು , ಹಳದೀಪುರ ಗ್ರಾಮಪಂಚಾಯತದಿಂದ ಯಾದಿಯನ್ನು ಪಡೆದು ಸಲ್ಲಿಸುವಂತೆ ಸಂಭಂದಪಟ್ಟ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಜಿಪಂ ಸಿಇಓ ಅವರಿಗೆ ಮನವಿ ಮಾಡಲಾಗಿದೆ ಎಂದ ಅವರು ಈ ಬಗ್ಗೆ ನ್ಯಾಯ ಸಿಗದಿದ್ದರೆ ಮುಂದೆ ಕಾನೂನು ಹೋರಾಟದ ಮೂಲಕ ನ್ಯಾಯ ಪಡೆಯಲಾಗುವುದು ಎಂದರು.
ಈಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷೆ ಪುಷ್ಪಾ ನಾಯ್ಕ,ಸದಸ್ಯರಾದ ಗೋವಿಂದ ಜೋಶಿ, ಗಂಗೆ ಗೌಡ, ಮಂಗಲಾ ಮುಕ್ರಿ, ವರ್ಧಮಾನ ಜೈನ್ ಸೇರಿದಂತೆ ಕೆಲವರಿದ್ದರು.