ಕಾರವಾರ: ನಗರಸಭೆ ಕಚೇರಿ ಸಭಾಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ನಗರಸಭೆಯ ಅಭಿವೃದ್ಧಿ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಅಧಿಕಾರಿಗಳಿಂದ ವಿವಿಧ ಅಭಿವೃದ್ಧಿ ಹಾಗೂ ಯೋಜನೆಯ ಅನುಷ್ಠಾನದ ಕುರಿತು ಮಾಹಿತಿಯನ್ನು ಪಡೆದುಕೊಂಡರು . ಸಭೆಯಲ್ಲಿದ್ದ ಸದಸ್ಯರು ಆಶ್ರಯ ಯೋಜನೆ ಅಡಿಯಲ್ಲಿ ಕೆಲವು ಮನೆಗಳಿಗೆ ಈವರೆಗೆ ಅನುದಾನ ಬಂದಿಲ್ಲ. ಈ ಬಗ್ಗೆ ಕ್ರಮಕೈಗೊಂಡು ಆಶ್ರಯ ಯೋಜನೆಯ ಲಾಭ ಬಡ ಜನರಿಗೆ ತಲುಪುವ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಭೆಯಲ್ಲಿದ್ದ ನಗರಸಭೆ ಪೌರಾಯುಕ್ತ ಆರ್.ಪಿ.ನಾಯ್ಕ ಮಾತನಾಡಿ, ನಗರಸಭೆಯ ಅಭಿವೃದ್ಧಿ ಕಾರ್ಯಗಳ ಬಗ್ಗೆ ಹಾಗೂ ನಗರಸಭೆಯ ಉಳಿತಾಯದ ಸಚಿವರ ಗಮನಕ್ಕೆ ತಂದರು. ಅದರಂತೆ ಕಾರವಾರ ನಗರಸಭೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರಕಾರದ ಮಟ್ಟದಲ್ಲಿ ಕ್ರಮಕೈಗೊಳ್ಳುವಂತೆ ಹಾಗೂ ವಿವಿಧ ಸಮಸ್ಯೆಗಳು ಸಚಿವರ ಗಮನಕ್ಕೆ ತಂದರು.
ಸಚಿವರು ಮೊದಲು ನಗರಸಭೆ ಹೊಸ ಕಟ್ಟಡದ ಎಲ್ಲಾ ಕೊಠಡಿಗಳಿಗೆ ತೆರಳಿ ಕಟ್ಟಡ ಪರಿಶೀಲಿಸಿ ಅಧಿಕಾರಿಗಳ ಜೊತೆಗೆ ಕೆಲವು ಕಾಲ ಚರ್ಚೆ ನಡೆಸಿದರು. ಸಭೆಯಲ್ಲಿ ಎಂಎಲ್ಸಿ ಗಣಪತಿ ಉಳ್ವೇಕರ್, ನಗರಸಭೆ ಅಧ್ಯಕ್ಷ ಡಾ. ನಿತಿನ್ ಪಿಕಳೆ, ಉಪಾಧ್ಯಕ್ಷ ಪಿ. ಪಿ. ನಾಯ್ಕ ಹಾಗೂ ಇನ್ನಿತರರು ಇದ್ದರು.