ಕಾರವಾರ: ಹಾಲಕ್ಕಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಆಗ್ರಹಿಸಿ ಪದ್ಮಶ್ರೀ ಪುರಸ್ಕೃತರಾದ ಸುಕ್ರಿ ಗೌಡ ಹಾಗೂ ತುಳಸಿ ಗೌಡ ಅವರ ನೇತೃತ್ವದಲ್ಲಿ ನಗರದಲ್ಲಿ ಜಿಲ್ಲಾಧಿಕಾರಿ ಕಚೇರಿ ಬಳಿ ಬುಧವಾರ ಪ್ರತಿಭಟನೆ ನಡೆಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಬೆಳಿಗ್ಗೆ ನೂರಾರು ಸಂಖ್ಯೆಯಲ್ಲಿ ಸೇರಿದ ಜಿಲ್ಲೆಯ ವಿವಿಧ ಭಾಗಗಳ ಹಾಲಕ್ಕಿ ಸಮುದಾಯದವರು ಹಾಗೂ ಇತರ ಸಮುದಾಯದವರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಅವುಗಳನ್ನು ಬಗೆಹರಿಸುವಂತೆ ಘೋಷಣೆ ಹಾಕಿದರು.
ಪದ್ಮಶ್ರೀ ಪುರಷ್ಕೃತ ಅಂಕೋಲಾ ತಾಲೂಕಿನ ಸುಕ್ರಿ ಗೌಡ ಹಾಗೂ ತುಳಸಿ ಗೌಡ ಅವರ ಮುಂದಾಳತ್ವದಲ್ಲಿ ಈ ಧರಣಿಯನ್ನು ಹಮ್ಮಿಕೊಳ್ಳಲಾಗಿತ್ತು. ಕಾರವಾರ, ಅಂಕೋಲಾ, ಕುಮಟಾ ಭಾಗದ ಹಾಲಕ್ಕಿ ಒಕ್ಕಲ ಸಮುದಾಯದ ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಬೇಡಿಕೆ ಈಡೇರಿಕೆಗಾಗಿ ಘೋಷಣೆ ಕೂಗಿದರು. ಬಳಿಕ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ರವಾನಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ಮನವಿ ಪತ್ರ ಸ್ವೀಕರಿಸಿದರು. ಸುಕ್ರಿ ಗೌಡ (ಸುಕ್ರಜ್ಜಿ) ಅವರು ಮಾತನಾಡಿ, ಹಾಲಕ್ಕಿ ಸಮುದಾಯ ತೀರ ಹಿಂದುಳಿದಿದೆ. ಅನೇಕ ವರ್ಷಗಳಿಂದ ತುಳಿತಕ್ಕೆ ಒಳಗಾಗಿದೆ. ಹಾಗಾಗಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಒತ್ತಾಯಿಸಿದರು. ಅಂಕೋಲಾದ ಹೊನ್ನಳ್ಳಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕಿಂಡಿ ಆಣೆಕಟ್ಟಿಗೂ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂ ಕಿಂಡಿ ಆಣೆಕಟ್ಟು ನಿರ್ಮಿಸಬಾರದು ಎಂದು ತುಳಸಿ ಗೌಡ ಅವರು ಕೂಡ ಒತ್ತಾಯ ಮಾಡಿದರು.
ಸೀಬರ್ಡ್, ಕೊಂಕಣ ರೈಲ್ವೆ ಯೋಜನೆ ನಿರಾಶ್ರಿತರಿಗೆ ಉದ್ಯೋಗ ನೀಡಬೇಕು. ಹಾಲಕ್ಕಿ ಒಕ್ಕಲು ಸಮುದಾಯಕ್ಕೆ ಪ್ರತ್ಯೇಕ ನಿಗಮ ಮಂಡಳಿ ಅಥವಾ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಬೇಕು. ಕೆಪಿಸಿಐಎಲ್ ಕದ್ರಾ, ಎನ್ಪಿಸಿಐಎಲ್ ಕೈಗಾ ನಿರಾಶ್ರಿತರ ಪರಿಹಾರ, ಪುನರ್ವಸತಿ, ಉದ್ಯೋಗ ಸೌಲಭ್ಯ ನೀಡಬೇಕು. ಅಂಕೋಲಾ ವಿಮಾನ ನಿಲ್ದಾಣ ಯೋಜನೆಯಲ್ಲಿ ಭೂಮಿ ಕಳೆದುಕೊಳ್ಳುವವರಿಗೆ ಪರಿಹಾರ ಕೊಡಬೇಕು. ಕುಮಟಾ ಬೈಪಾಸ್ ಯೋಜನೆ ಕೈಬಿಡಬೇಕು, ಅರಣ್ಯ ಭೂಮಿ ಅತಿಕ್ರಮವನ್ನು ಸಕ್ರಮ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಹಾಲಕ್ಕಿ ಸಮುದಾಯದ ಸೀಮೆ ಗೌಡರು, ಅರಸು ಗೌಡರು, ಸೀಮೆ ಗೌಡರು, ಹಾಲಕ್ಕಿ ಸುಗ್ಗಿ ಕುಣಿತ ಕಲಾವಿದರಿಗೆ ಮಾಸಾಸನ ನೀಡಬೇಕು. ಪಹಣಿ ಪತ್ರಿಕೆಯಲ್ಲಿರುವ ಕರ್ನಾಟಕ ಸರಕಾರ ನಮೂದನ್ನು ರದ್ದು ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.