ಕಾರವಾರ: ಜಿಲ್ಲೆಯಲ್ಲಿ ನದಿಗಳಿಂದ ಮರಳು ತೆಗೆಯಲು ಜಿಲ್ಲಾಡಳಿತ ಶೀಘ್ರ ಅವಕಾಶ ನೀಡಬೇಕು. ಇಲ್ಲದಿದ್ದಲ್ಲಿ ಗುತ್ತಿಗೆದಾರರೆಲ್ಲ ಒಗ್ಗಟ್ಟಾಗಿ ಎಲ್ಲಾ ಕಾಮಗಾರಿಗಳನ್ನ ಸ್ಥಗಿತಗೊಳಿಸಿ ಪ್ರತಿಭಟನೆಗಿಳಿಯಬೇಕಾದೀತು ಎಂದು ಕಾರವಾರ ತಾಲೂಕಾ ನೋಂದಾಯಿತ ಸಿವಿಲ್ ಗುತ್ತಿಗೆದಾರರ ಸಂಘ ಅಧ್ಯಕ್ಷ ಮಾಧವ ನಾಯಕ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲೆಯಲ್ಲಿ, ಅದರಲ್ಲೂ ಜಿಲ್ಲಾ ಕೇಂದ್ರ ಕಾರವಾರದಲ್ಲಿ ನಿರ್ಮಾಣ ಕಾಮಗಾರಿಗಳಿಗೆ ಕಚ್ಛಾ ಸಾಮಗ್ರಿಗಳ ಅಭಾವ ಕಾಡುತ್ತಿದೆ. ಇದರಿಂದ ನಿರ್ಮಾಣ ಕಾಮಗಾರಿ ದುಸ್ತರವಾಗಿದೆ. ನಿರ್ಮಾಣ ಕಾಮಗಾರಿಗಳಿಗೆ ಅಗತ್ಯವಾಗಿರುವ ಕಚ್ಛಾ ಸಾಮಗ್ರಿಗಳಾದ ಜೆಲ್ಲಿ, ಕಲ್ಲುಗಳು, ಎಂ.ಸ್ಯಾಂಡ್ ಸರಿಯಾಗಿ ಸಿಗುತ್ತಿಲ್ಲ. ಮಣ್ಣಿನ ಕೊರತೆ ಕೂಡ ಎದುರಾಗಿದೆ.
ಪ್ರಮುಖವಾಗಿ ಮರಳು ಸಿಗದಿರುವುದು ಭಾರೀ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದು, ನಿರ್ಮಾಣ ಕ್ಷೇತ್ರ ನಂಬಿಕೊಂಡವರ ಬದುಕು ಬೀದಿಗೆ ಬರುವಂತಾಗಿದೆ ಎಂದಿದ್ದಾರೆ. ಯಾವುದೇ ಮುನ್ಸೂಚನೆ ಇಲ್ಲದೆ ಕಳೆದ ವರ್ಷ ಅವಧಿಗೆ ಮುನ್ನ ಜಿಲ್ಲೆಯಲ್ಲಿ ಮರಳು ತೆಗೆಯುವುದನ್ನ ರದ್ದುಗೊಳಿಸಲಾಯಿತು. ಇದುವರೆಗೂ ಪ್ರಾರಂಭಿಸಲೂ ಇಲ್ಲ. ಮರಳಿಗೆ ನಮ್ಮ ಜಿಲ್ಲೆ ಅಕ್ಷಯ ಪಾತ್ರೆಯಂತೆ. ಇಲ್ಲಿಂದಲೇ ಬೇರೆ ಜಿಲ್ಲೆಗಳಿಗೆ, ಗೋವಾ ರಾಜ್ಯಕ್ಕೆ ಹಿಂದೆ ಮರಳು ಸಾಗಾಟವಾಗುತ್ತಿತ್ತು. ಆದರೆ ಈಗ ಜಿಲ್ಲೆಯ ಜನತೆಗೇ ಮರಳು ಸಿಗುತ್ತಿಲ್ಲ. ನದಿಗಳಲ್ಲಿ ಮರಳು ದಿಬ್ಬಗಳು ಸೃಷ್ಟಿಯಾಗಿ ಪ್ರವಾಹಕ್ಕೂ ಕಾರಣವಾಗುತ್ತಿದೆ ಎಂದಿದ್ದಾರೆ.
ಮರಳಿಗೆ ಪರ್ಯಾಯವಾಗಿ ಎಂ.ಸ್ಯಾಂಡ್ ಪರಿಚಯಿಸಿದ್ದರೂ ಅದರ ಬಳಕೆಯಿಂದ ಕಾಮಗಾರಿ ಗುಣಮಟ್ಟದಲ್ಲಾಗುವುದಿಲ್ಲ. ಇದರ ಮಧ್ಯೆ ಎಲ್ಲಾ ನಿರ್ಮಾಣ ಸಾಮಗ್ರಿಗಳನ್ನು ಹೊರ ಜಿಲ್ಲೆಯಿಂದ ತರಬೇಕಾದ ಅನಿವಾರ್ಯತೆ ಎದುರಾಗಿದೆ. ಜೊತೆಗೆ ಕ್ರಷರ್ ಯೂನಿಯನ್ ನವರೆಲ್ಲ ಪ್ರತಿಭಟನೆಗೆ ಇಳಿದಿರುವುದರಿಂದ ಹಾಗೂ ಮಳೆಗಾಲ ಕೂಡ ಸಮೀಪಿಸುತ್ತಿರುವುದರಿಂದ ಮರಳು ತೆಗೆಯಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.