ಕಾರವಾರ: ಜ.28 ರಂದು ನವದೆಹಲಿಯಲ್ಲಿ ನಡೆಯಲಿರುವ ಆಲ್ ಇಂಡಿಯಾ ಪಿಎಂ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಕಾರವಾರ ಮೂಲದ ಎನ್.ಸಿ.ಸಿ. ಕೆಡೆಟ್ ಸುನಿಧಿ ಗಿರೀಶ ಸೈಲ್ ಆಯ್ಕೆಯಾಗಿದ್ದಾಳೆ.
ಸುನೀಧಿಯು ಎನ್.ಸಿ.ಸಿ. (ಏರ್ಫೋರ್ಸ್) ಕೆಡೆಟ್ ಆಗಿದ್ದು ಗಣರಾಜ್ಯೋತ್ಸವದ ನಿಮಿತ್ತ ನವದೆಹಲಿಯಲ್ಲಿ ಜ.28 ರಂದು ನಡೆಯಲಿರುವ ಪ್ರಧಾನ ಮಂತ್ರಿ ರ್ಯಾಲಿಯಲ್ಲಿ ವಿವಿಧ ರಾಜ್ಯಗಳಿಂದ ಪಾಲ್ಗೊಳ್ಳುವ 60 ಕೆಡೆಟ್ಗಳಲ್ಲಿ ಒಬ್ಬಳಾಗಿದ್ದಾಳೆ. ಇದು ಉತ್ತರ ಕನ್ನಡ ಜಿಲ್ಲೆಗೆ ಹೆಮ್ಮೆ ತರುವ ವಿಷಯವಾಗಿದೆ. ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ಬಿಎಸ್ಸಿ ಮೊದಲ ವರ್ಷದಲ್ಲಿ ಅಧ್ಯಯನ ಮಾಡುತ್ತಿರುವ ಈಕೆಯು ಕಾರವಾರ ತಾಲೂಕಿನ ಮಾಜಾಳಿ ಸೈಲ್ವಾಡಾದವರಾಗಿದ್ದು ಸದ್ಯ ನಗರದ ಸಾಯಿಮಂದಿರದ ಬಳಿಯ ನಿವಾಸಿಗಳಾದ ಗಿರೀಶ ಸೈಲ್ ಹಾಗೂ ಸೀಮಾ ಸೈಲ್ ದಂಪತಿಯ ಪುತ್ರಿಯಾಗಿದ್ದಾಳೆ. ತನ್ನ ಅಧ್ಯಯನ ಪೂರ್ಣಗೊಂಡ ಬಳಿಕ ದೇಶದ ರಕ್ಷಣಾ ಇಲಾಖೆಯಲ್ಲಿ ಸೇವೆಯನ್ನು ನಿರ್ವಹಿಸುವ ಮಹದುದ್ದೇಶವನ್ನು ಹೊಂದಿರುವುದಾಗಿ 18 ವರ್ಷದ ಸುನೀಧಿ ತನ್ನ ಬಯಕೆ ವ್ಯಕ್ತ ಪಡಿಸಿದ್ದಾಳೆ. ಈಕೆಯ ಸಾಧನೆಗೆ ಪಾಲಕರು, ಹಿರಿಯರು, ಸ್ನೇಹಿತರು ಅಭಿನಂದನೆ ಸಲ್ಲಿಸಿದ್ದಾರೆ.