ಕಾರವಾರ: ಸೀಬರ್ಡ್ ನೌಕಾನೆಲೆಯಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡದೆ ವಂಚಿಸಲಾಗಿದೆ ಎಂದು ಆರೋಪಿಸಿ ಸಂಕ್ರುಭಾಗದ ಸೀಬರ್ಡ್ ಗೇಟ್ ಎದುರು ಬುಧವಾರ ಸೀಬರ್ಡ್ ಟೈಗರ್ಸ್ ಸಂಘಟನೆಯಿಂದ ಪ್ರತಿಭಟನೆ ನಡೆಯಿತು.
ಸಂಕ್ರುಭಾಗದ ಸೀಬರ್ಡ್ ಗೇಟ್ ಬಂದ್ ಮಾಡಿದ ಸುಮಾರು 200ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡ ಜನರು ಸೀಬರ್ಡ್ ನಿರಾಶ್ರಿತರಿಗೆ ಹಾಗೂ ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಅವಕಾಶ ನೀಡಬೇಕು ಎಂದು ಆಗ್ರಹಿಸಿ ಸೀಬರ್ಡ್ ನೌಕಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಬಗ್ಗೆ ಉನ್ನತಾಧಿಕಾರಿಗಳ ಗಮನಕ್ಕೆ ತರುವುದಾಗಿ ನೌಕಾಧಿಕಾರಿಗಳು ಭರವಸೆ ನೀಡಿದರು. ಸೀಬರ್ಡ್ ನಿರಾಶ್ರಿತರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಸೀಬರ್ಡ್ ಟೈಗರ್ಸ್ ಎನ್ನುವ ಸಂಘಟನೆಯನ್ನು ಕಟ್ಟಿಕೊಳ್ಳಲಾಗಿದ್ದು ಸೀಬರ್ಡ್ ಯೋಜನೆಯಲ್ಲಿ ಜಮೀನು ಕಳೆದುಕೊಂಡು ನಿರಾಶ್ರಿತರಾದ ಕಾರವಾರದ ಸ್ಥಳೀಯರು ಉದ್ಯೋಗದಿಂದ ವಂಚಿರಾಗಿದ್ದಾರೆ. ಅಲ್ಲದೆ ಬದಲಾಗಿ ಬಿಹಾರ, ರಾಜಸ್ಥಾನ, ಉತ್ತರ ಪ್ರದೇಶ ಸೇರಿದಂತೆ ಹೊರ ರಾಜ್ಯದವರಿಗೆ ಉದ್ಯೋಗ ನೀಡಲಾಗಿದೆ.
ಸೀಬರ್ಡ್ ಯೋಜನೆಗೆ ಅಡಿಗಲ್ಲು ಹಾಕಿದಾಗ ರಾಜೀವ ಗಾಂಧಿಯವರೇ ಸ್ಥಳೀಯರಿಗೆ ಉದ್ಯೋಗ ನೀಡುವುದಾಗಿ ಹೇಳಿದ್ದರು. ಅದರಂತೆ ಐಟಿಐ ತರಬೇತಿಯನ್ನು ಕೂಡ ಪ್ರಾರಂಭಿಸಿದ್ದರು. ಆದರೆ ಈ ವರೆಗೆ ಉದ್ಯೋಗವೇ ದೊರೆತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರವಾರದಲ್ಲಿ ಸಾಕಷ್ಟು ವಿದ್ಯಾವಂತರಿದ್ದಾರೆ. ಆದರೆ ಕೆಲವೇ ಜನರು ಮಾತ್ರ ಸೀಬರ್ಡ್ ನಲ್ಲಿ ದಿನಗೂಲಿ ಕೆಲಸಕ್ಕಿದ್ದಾರೆ. ಇನ್ನು ಕೆಲವರನ್ನು ಕೇವಲ ವಾಹನ ಚಾಲಕರಾಗಿ ನೇಮಿಸಿಕೊಂಡು ಹೆಚ್ಚುವರಿ ಕೆಲಸಗಳನ್ನು ಮಾಡಿಸುತ್ತಿದ್ದಾರೆ. ಸರಿಯಾದ ಉದ್ಯೋಗ ಭತ್ಯ, ಪಿಎಫ್ ಸಹ ನೀಡುತ್ತಿಲ್ಲ ಎಂದು ರಾಘು ನಾಯ್ಕ ಅವರು ಆರೋಪಿಸಿದರು.