ಕಾರವಾರ: ಗಿಡಗಂಟಿಗಳು ಬೆಳೆದು ಪಾಳು ಬಿದ್ದಿದ್ದ ತಾಲೂಕಿನ ಹಣಕೋಣ ವ್ಯಾಪ್ತಿಯ ಭೀಮಕೋಲ್ ಕೆರೆ ಇದೀಗ ಪ್ರವಾಸಿಗರ ಪಾಲಿಗೆ ನೆಚ್ಚಿನ ತಾಣವಾಗಿದೆ. ರಜಾ ದಿನಗಳಲ್ಲಿ ಪ್ರವಾಸಿಗರಿಂದಲೇ ತುಂಬಿರುವ ಈ ಪ್ರದೇಶದದಲ್ಲಿ ಇನ್ನಷ್ಟು ಅಂದ ಹೆಚ್ಚಿಸುವ ನಿಟ್ಟಿನಲ್ಲಿ ಸಾಮಾಜಿಕ ಅರಣ್ಯ ವಿಭಾಗದಿಂದ ಪಂಚವಟಿ ವನ ಸೇರಿದಂತೆ ಇತರೆ ಮೂಲಭೂತ ಸೌಕರ್ಯ ಕಲ್ಪಿಸಲು ಮುಂದಾಗಿದ್ದು ಮತ್ತಷ್ಟು ಆಕರ್ಷಣೆಗೊಳಗಾಗುವ ಲಕ್ಷಣ ಗೋಚರವಾಗಿದೆ.
ಪ್ರಕೃತಿಯ ಮಡಲಂಚಿನಲ್ಲಿರುವ ಭೀಮಕೋಲ್ ಕೆರೆ ಕಳೆದೆರಡು ವರ್ಷದ ಹಿಂದೆ ಪಾಳು ಬಿದ್ದಿದ್ದ ಪ್ರದೇಶ. ಸ್ಥಳೀಯರು ಕೂಡ ಇಲ್ಲಿಗೆ ತೆರಳಲು ಹಿಂದೇಟು ಹಾಕುತ್ತಿದ್ದ ಕೆರೆಯನ್ನು ಜಿಲ್ಲಾ ಪಂಚಾಯಿತಿಯ ಈ ಹಿಂದಿನ ಸಿಇಓ ಪ್ರಿಯಾಂಗ ಎಂ ಅಭಿವೃದ್ಧಿ ಪಡಿಸುವಲ್ಲಿ ಹೆಚ್ಚು ಮುತುವರ್ಜಿ ವಹಿಸಿದ್ದರು.
ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಅನುದಾನ ನೀಡಿ ಅಭಿವೃದ್ಧಿ ಪಡಿಸಿದ್ದರು.ಅದರಂತೆ ಇದೀಗ ಭೀಮಕೋಲ್ ಕೆರೆ ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿ ರೂಪುಗೊಂಡಿದೆ. ಕೆರೆಯಂಚಿನ ದಡದಲ್ಲಿ ಚೀರೆಕಲ್ಲಿನ ಹಾಸು ನಿರ್ಮಿಸಿ ಮದ್ಯದಲ್ಲಿ ಹುಲ್ಲಿನ ಹಾಸು ಬೆಳೆಸಲಾಗಿದೆ. ಅಲ್ಲದೆ ವಾಕಿಂಗ್ ಪಾತ್, ದಡದುದ್ದಕ್ಕೂ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಲಾಗಿದೆ. ಇದೀಗ ಸ್ಥಳೀಯರು ಮಾತ್ರವಲ್ಲದೆ ಜಿಲ್ಲೆ ಹೊರ ಜಿಲ್ಲೆಯಿಂದಲೂ ಸಾಕಷ್ಟು ಪ್ರವಾಸಿಗರು ಬಂದು ತೆರಳುತ್ತಿದ್ದಾರೆ.
ಸದ್ಯ ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ಕೆರೆಯಲ್ಲಿ ಕೊಂಚ ನೀರು ಕೂಡ ಕಡಿಮೆಯಾಗಿದೆ. ಆದರೂ ರಜಾ ದಿನಗಳಲ್ಲಿ ಬೆಳಿಗ್ಗೆ ಮತ್ತು ಸಂಜೆ ಪ್ರವಾಸಿಗರ ದಂಡೆ ಹರಿದುಬರುತ್ತಿದೆ. ಇನ್ನು ಪ್ರವಾಸಿಗರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಇದರ ಪಕ್ಕದ ಅರಣ್ಯ ಇಲಾಖೆ ಜಾಗದಲ್ಲಿಯೂ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿಯ ೧೪.೫ ಲಕ್ಷ ಅನುದಾನದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ರಾಮಾಯಣದಲ್ಲಿ ಬರುವ ಪಂಚವಟಿ ವನದಂತೆ ಇಲ್ಲಿಯೂ ಅದೇ ಹೆಸರಿನಲ್ಲಿ ಪಂಚ ಗಿಡಗಳನ್ನು ನೆಟ್ಟು ವನ ನಿರ್ಮಿಸಲಾಗುತ್ತಿದೆ. ಇದರೊಂದಿಗೆ ರಾಶಿ ವನ, ನವಗ್ರಹ ವನ, ಚಿಟ್ಟೆ ಉದ್ಯಾನವನ್ನು ಕೂಡ ನಿರ್ಮಾಣ ಮಾಡಲಾಗುತ್ತಿದೆ ಎಂದು ಸಾಮಾಜಿಕ ಅರಣ್ಯ ವಿಭಾಗದ ಡಿಎಫ್ಒ ಮಂಜುನಾಥ ನಾವಿ ಮಾಹಿತಿ ನೀಡಿದರು.
ಈಗಾಗಲೇ ಸಾಮಾಜಿಕ ಅರಣ್ಯ ಸಮಿತಿಯಿಂದ ಕೆರೆ ಪಕ್ಕದಲ್ಲಿಯೆ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಒಂದು ಕುಟೀರದ ರಿತಿ ಇನ್ನೊಂದನ್ನು ಅಣಬೆ ಆಕಾರದಲ್ಲಿ ಕಲಾವಿದರೇ ನಿರ್ಮಾಣ ಮಾಡುತ್ತಿದ್ದಾರೆ. ಇನ್ನೊಂದು ತಿಂಗಳಲ್ಲಿ ಸಂಪೂರ್ಣ ಕಾಮಗಾರಿ ಮುಗಿದು ಉದ್ಘಾಟನೆಗೊಳ್ಳಲಿದೆ ಎಂದು ಅವರು ಮಾಹಿತಿ ನೀಡಿದರು.
ಇನ್ನು ಹಚ್ಚ ಹಸಿರಿನ ನಡುವೆ ಭೀಮಕೋಲ್ ಕೆರೆ ನಿಸರ್ಗ ಪ್ರೀಯರ ಆಕರ್ಷಿಸುವ ತಾಣವಾಗಿ ಮಾರ್ಪಟ್ಟಿದೆ. ಕೆರೆ, ಸುತ್ತಲೂ ಹಸಿರು ತಪ್ಪಲು, ಪ್ರಶಾಂತ ವಾತಾವರಣ ಇಲ್ಲಿಗೆ ಭೇಟಿ ನೀಡುವವರಿಗೆ ಸಂಜೆ ಮತ್ತು ಬೆಳಿಗ್ಗಿನ ವೇಳೆ ಪ್ರಸಕ್ತ ಸಮಯವಾಗಿದೆ.
ಬೋಟಿಂಗ್ ವ್ಯವಸ್ಥೆಗೆ ಚಿಂತನೆ:
ಇನ್ನು ಹಂತ ಹಂತವಾಗಿ ಅಭಿವೃದ್ಧಿ ಪಡಿಸಿರುವ ಭೀಮಕೋಲ್ ಕೆರೆಗೆ ಇದೀಗ ಎಲ್ಲೇಡೆಯಿಂದಲೂ ಪ್ರವಾಸಿಗರು ಹರಿದುಬರುತ್ತಿದ್ದಾರೆ. ದೇಶ ವಿದೇಶದಲ್ಲಿ ಕಾಣಸಿಗುವ ಪ್ರವಾಸಿ ತಾಣಗಳಂತೆ ಕಂಡುಬರುವ ಈ ತಾಣದಲ್ಲಿ ಮುಂದಿನ ದಿನಗಳಲ್ಲಿ ಬೋಟಿಂಗ್ ವ್ಯವಸ್ಥೆ ಕೂಡ ಮಾಡಲು ಕೂಡ ಪ್ರಯತ್ನಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಹಿಂದಿನ ಸಿಇಓ ಅವರು ಮುತುವರ್ಜಿ ವಹಿಸಿದ ಕೆರೆ ಇದೀಗ ಪ್ರವಾಸಿ ತಾಣವಾಗಿದೆ. ನಮ್ಮ ಸಾಮಾಜಿಕ ಅರಣ್ಯ ಸಮಿತಿಯಿಂದಲು ಪರಿಸರದ ಬಗೆಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಪಂಚವಟಿ ವನ ಸೇರಿದಂತೆ ಇತರೆ ಅಭಿವೃದ್ಧಿ ಕೈಗೊಂಡಿದ್ದು ಇನ್ನೊಂದು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಬಳಿಕ ಇದರ ನಿರ್ವಹಣೆಯನ್ನು ಸ್ಥಳೀಯ ಅರಣ್ಯ ಸಮಿತಿಗೆ ನೀಡಲಾಗುವುದು ಎಂದು ಸಾಮಾಜಿಕ ಅರಣ್ಯ ವಿಭಾಗ ಡಿಎಫ್ಓ ಮಂಜುನಾಥ ನಾವಿ ತಿಳಿಸಿದ್ದಾರೆ.