ಕಾರವಾರ: ದಿನವಿಡೀ ಸಾರ್ವಜನಿಕರನ್ನು ಸುರಕ್ಷಿತವಾಗಿ ತಲುಪಿಸುವ ಆಟೋ ಚಾಲಕರಿಗೆ ಕಣ್ಣಿನ ದೃಷ್ಠಿಯ ಬಗ್ಗೆ ಕಾಳಜಿ ಇರಬೇಕು ಎಂದು ಕಾರವಾರ ನಗರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಸಿದ್ದಪ್ಪ ಬೀಳಗಿ ಹೇಳಿದರು.
ನಗರದ ರೋಟರಿ ಶತಾಬ್ದಿ ಭವನದಲ್ಲಿ ಶುಕ್ರವಾರ ಅಪರಾಧ ತಡೆ ಮಾಸಾಚರಣೆಯ ಅಂಗವಾಗಿ ಕಾರವಾರ ನಗರ ಸಂಚಾರ ಪೊಲೀಸ್ ಠಾಣೆ ಹಾಗೂ ಕಾರವಾರದ ರೋಟರಿ ಕ್ಲಬ್ ವತಿಯಿಂದ ನಡೆದ ಆಟೋ ಚಾಲಕರ ಉಚಿತ ಕಣ್ಣಿನ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ವಾಹನ ಚಲಾಯಿಸಲು ಮಾನಸಿಕ ಮತ್ತು ದೈಹಿಕ ಆರೋಗ್ಯದ ಸದೃಢತೆ ಅಗತ್ಯ. ಹಗಲಿರುಳು ಸಾರ್ವಜನಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಆಟೋ ಚಾಲಕರಿಗೆ ಉಚಿತ ಕಣ್ಣು ತಪಾಸಣಾ ಶಿಬಿರ ಅಗತ್ಯವಾಗಿದೆ ಎಂದರು.
ಕಿಮ್ಸ್ ನೇತ್ರ ತಜ್ಞರಾದ ರಮೇಶ ವೆಂಕಿಮನೆ, ಆಧಾರ ನಾಯ್ಕ ಹಾಗೂ ಯೋಗಿಶ್ ಭಂಡಾರ್ಕರ ಅವರು ೧೫೦ ಕ್ಕೂ ಹೆಚ್ಚು ಆಟೊ ಚಾಲಕರ ಕಣ್ಣಿನ ತಪಾಸಣೆ ನಡೆಸಿ ಸೂಕ್ತ ಸಲಹೆ ಮತ್ತು ಚಿಕಿತ್ಸೆ ನೀಡಿದರು. ಕಾರವಾರ ನಗರ ಸಂಚಾರ ಠಾಣೆಯ ಪಿಎಸ್ಐ ನಾಗಪ್ಪ ಬಿ, ಕಾರವಾರ ರೋಟರಿ ಕ್ಲಬ್ನ ಅದ್ಯಕ್ಷ ರಾಘವೇಂದ್ರ ಜಿ. ಪ್ರಭು, ಕಾರವಾರ ಆಟೋ ಯುನಿಯನ್ ಮುಖಂಡ ಸುಭಾಷ ಗುನಗಿ ಹಾಗೂ ರೋಟರಿ ಕ್ಲಬ್ನ ಸದಸ್ಯರು, ಸಂಚಾರ ಠಾಣೆಯ ಸಿಬ್ಬಂದಿ ಇದ್ದರು.