ಉಡುಪಿ: ಕವಿ ಮುದ್ದಣ ಮಾರ್ಗದ ತ್ರಿವೇಣಿ ಸರ್ಕಲ್ ಬಳಿ, ಸಿಗ್ನಲ್ ಕಂಬ ನಿರ್ಮಾಣ ಮಾಡಲು, ಆಳದ ಗುಂಡಿ ಅಗೆದಿದ್ದು, ನಿಧಾನ ಗತಿಯ ಕಾಮಗಾರಿಯಿಂದಾಗಿ ಸಾರ್ವಜನಿಕ ಸಂಚಾರಕ್ಕೆ ಅಡಚಣೆಯಾಗಿದೆ.
ಸಿಗ್ನಲ್ ಪಿಲ್ಲರಿಗೆ ಗುಂಡಿ ಅಗೆಯುವಾಗ ಮುಖ್ಯ ಒಳಚರಂಡಿ ಕೊಳವೆಗೆ ಹಾನಿಯಾಗಿದ್ದು, ಅಗೆದಿರುವ ಗುಂಡಿಯಲ್ಲಿ ತ್ಯಾಜ್ಯ ನೀರು ಬೃಹತ್ ಪ್ರಮಾಣದಲ್ಲಿ
ಸಂಗ್ರಹಗೊಂಡಿದೆ. ಪರಿಸರದಲ್ಲಿ ದುರ್ನಾತ ಹಬ್ಬಿದೆ. ಪಾದಚಾರಿಗಳು ಮೂಗು ಮುಚ್ಚಿಕೊಂಡು ನಡೆದಾಡ ಬೇಕಾದ ಪರಿಸ್ಥಿತಿ ಎದುರಾಗಿದೆ. ಸೂಕ್ತವಾದ ದಾರಿದೀಪದ ವ್ಯವಸ್ಥೆ ಇಲ್ಲದೆ, ಕತ್ತಲಿನಲ್ಲಿ ವಾಹನ ಸವಾರರು, ಪಾದಚಾರಿಗಳು ತ್ಯಾಜ್ಯ ನೀರಿರುವ ಗುಂಡಿಗೆ ಬೀಳುವ ಸಾಧ್ಯತೆ ಇದೆ.
ಅಲ್ಲದೆ ಇಲ್ಲಿ ವಾಹನ ದಟ್ಟಣೆ ಇರುವುದರಿಂದ ಸುಗಮ ಸಂಚಾರಕ್ಕೂ ಸಮಸ್ಯೆ ಎದುರಾಗಿದೆ. ಆದ್ದರಿಂದ ಶೀಘ್ರವೇ ಕಾಮಗಾರಿ ಪೂರ್ಣಗೊಳಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಆಗ್ರಹಪಡಿಸಿದ್ದಾರೆ.