ಔರಾದ: ತಾಲ್ಲೂಕಿನ ಸಮಗ್ರ ಅಭಿವೃದ್ಧಿಗಾಗಿ ಕ್ಷೇತ್ರದ ಎಲ್ಲ ಕಡೆಗಳಲ್ಲಿ, ರಸ್ತೆ, ಕುಡಿಯುವ ನೀರು, ಶಾಲಾ-ಕಾಲೇಜುಗಳ ನಿರ್ಮಾಣ ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಎಲ್ಲ ಕೆಲಸಗಳು ಸರಿಯಾಗಿ ಆಗಬೇಕು. ಕಾಮಗಾರಿಯಲ್ಲಿ ಲೋಪವಾದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಜರುಗಿಸಲಾಗುವುದೆಂದು ಪಶು ಸಂಗೋಪನೆ ಸಚಿವರಾದ ಪ್ರಭು.ಬಿ ಚವ್ಹಾಣ ಎಚ್ಚರಿಸಿದರು.
ಫೆಬ್ರವರಿ 9ರಂದು ಔರಾದ (ಬಿ) ಹಾಗೂ ಕಮಲನಗರ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಸಂಚರಿಸಿ ಕುಡಿಯುವ ನೀರು ಪೂರೈಕೆ ಸೇರಿದಂತೆ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಲ ಜೀವನ ಮಿಷನ್ ಯೋಜನೆಯಡಿ ಜಂಬಗಿ ಗ್ರಾಮದಲ್ಲಿ 175.9 ಲಕ್ಷ ರೂ., ಪೂಮಾ ತಾಂಡಾದಲ್ಲಿ 37 ಲಕ್ಷ ರೂ., ಭಜರಾಮ ತಾಂಡಾದಲ್ಲಿ 50.19 ಲಕ್ಷರೂ., ಕಿಶನ ನಾಯಕ್ ತಾಂಡಾದಲ್ಲಿ 22 ಲಕ್ಷ ರೂ., ಕಾರವಾರ ತಾಂಡಾದಲ್ಲಿ 40.92 ಲಕ್ಷರೂ., ಬಾರ್ಡರ್ ತಾಂಡಾದಲ್ಲಿ 91.16 ಲಕ್ಷ ರೂ., ಮಹಾರಾಜ ವಾಡಿಯಲ್ಲಿ 87.24 ಲಕ್ಷ ರೂ., ನಾರಾಯಣಪುರದಲ್ಲಿ 72.25 ಲಕ್ಷ ರೂ. ವೆಚ್ಚದ ಕುಡಿಯುವ ನೀರು ಸರಬರಾಜು ಕಾಮಗಾರಿಗೆ ಭೂಮಿ ಪೂಜೆ ಹಾಗೂ ಔರಾದ(ಬಿ) ಪಟ್ಟಣದಲ್ಲಿ 32.07 ಲಕ್ಷ ವೆಚ್ಚದ ಸೋಲಾರ್ ಹೈಮಾಸ್ಟ್ ವಿದ್ಯುತ್ ದೀಪಗಳ ಕಾಮಗಾರಿ ಸೇರಿ ಸುಮಾರು 6 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವರು ಶಂಕುಸ್ಥಾಪನೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಸಚಿವರು, ಗ್ರಾಮೀಣ ಜನತೆಗೆ ಸಮರ್ಪಕ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಜಲ ಜೀವನ ಮಿಷನ್ ಯೋಜನೆಯಡಿ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಗ್ರಾಮಸ್ಥರು ತಮ್ಮ ಊರಿನಲ್ಲಿ ಕೆಲಸ ಸರಿಯಾಗಿ ಆಗುವಂತೆ ನೋಡಿಕೊಳ್ಳಬೇಕು. ಕೆಲಸ ಸರಿಯಾಗಿ ಆಗದಿದ್ದರೆ ಯಾವುದೇ ಕಾರಣಕ್ಕೂ ಇಲಾಖೆಯ ಅಧಿನಕ್ಕೆ ಪಡೆಯಬಾದು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಬಡ ಜನತೆಗೆ ನೆರವು:
ಬೇಡಕುಂದಾ ಹಾಗೂ ನಿಡೋದಾ ಗ್ರಾಮಗಳಲ್ಲಿ ವಿವಿಧ ಕಾರಣಗಳಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಕುಟುಂಬಸ್ಥರ ಮನೆಗೆ ಭೇಟಿ ನೀಡಿ ನೆರವು ನೀಡಿದರು. ಬೇಡಕುಂದಾ ಗ್ರಾಮದ ಸರುಬಾಯಿ ಮಾಣಿಕ್, ವಿಜಯಲಕ್ಷ್ಮಿ ಶರಣಪ್ಪ, ಗುಂಡಮ್ಮ ವಿಶ್ವನಾಥ ಪ್ರೇಮಾ ಕಮಲಾಕರ, ಕಲ್ಲುಬಾಯಿ ಕಳಸೆ, ಕಲಾವತಿ ಯಾದು, ನಿಡೋದಾ ಗ್ರಾಮದ ಪ್ರಭುರಾವ ಹಟಕರ್ ಹಾಗೂ ಪ್ರೇಮಾ ಚಂದ್ರಶೇಖರ ಅವರ ಮನೆಗಳಿಗೆ ಭೇಟಿ ನೀಡಿ ಕುಟುಂಬಸ್ಥರ ಸಮಸ್ಯೆಗಳನ್ನು ಆಲಿಸಿ, ಆರ್ಥಿಕ ನೆರವು ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಸುರೇಶ ಭೋಸ್ಲೆ, ದೊಂಡಿಬಾ ನರೋಟೆ, ರಾಮಶೆಟ್ಟಿ ಪನ್ನಾಳೆ, ಅಮರ ಎಡವೆ, ಶಿವಾಜಿ ಪಾಟೀಲ ಮುಂಗನಾಳ, ಸಚಿನ್ ರಾಠೋಡ್, ಉದಯ ಸೋಲಪೂರೆ, ಪ್ರದೀಪ ಪವಾರ, ಹಣಮಂತ ಸುರನಾರ, ಮಾರುತಿ ವಾಡೆಕರ್, ರಮೇಶ ಪಾಶಾಪೂರ ಸೇರಿದಂತೆ ಇತರರಿದ್ದರು.