ಕುಂದಾಪುರ: ಗುಡ್ಡಮ್ಮಾಡಿ ಮತ್ತು ಸೇನಾಪುರ ಭಾಗದ ಜನರ ಬಹು ಮುಖ್ಯ ಬೇಡಿಕೆಗಳೊಂದಾದ ಸೇನಾಪುರ ಬಂಟ್ವಾಡಿ ಮುಖ್ಯ ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜಯ ಅನುದಾನದಲ್ಲಿ ಶಿವಮೊಗ್ಗ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ಮತ್ತು ಬೈಂದೂರು ಕ್ಷೇತ್ರದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಅವರ ಮುತುವರ್ಜಿಯಲ್ಲಿ ಬರೋಬ್ಬರಿ ನಾಲ್ಕು ದಶಕಗಳ ನಂತರ ರಸ್ತೆ ಅಭಿವೃದ್ಧಿಗೊಂಡಿದೆ.
ತೆಂಗಿನ ಗುಂಡಿಯಲ್ಲಿ ಹೊಸ ಬ್ರಿಡ್ಜ್:
ಕಿರಿದಾದ ಮತ್ತು ಹದಗೆಟ್ಟ ಸೇನಾಪುರ ಮತ್ತು ಬಂಟ್ವಾಡಿ ಮಾರ್ಗದ ರಸ್ತೆ ಅಗಲೀಕರಣ ಗೊಂಡು ಸುಸಜ್ಜಿತವಾದ ಕಾಂಕ್ರಿಟ್ ರಸ್ತೆ ನಿರ್ಮಾಣ ವಾಗುವುದರ ಮುಖೇನ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಂತೆ ಆಗಿದೆ.ಗತ ಕಾಲದಲ್ಲಿ ನಿರ್ಮಾಣಗೊಂಡಿದ್ದ ಶಿಥಿಲ ಅವಸ್ಥೆಯಲ್ಲಿದ್ದ ಗುಡ್ಡಮ್ಮಾಡಿ ತೆಂಗಿನ ಗುಂಡಿಯಲ್ಲಿ ಹಳೆ ಸೇತುವೆ ಒಡೆದು ಹಾಕಿ ಹೊಸ ಬ್ರಿಡ್ಜ್ ನಿರ್ಮಾಣಗೊಂಡಿದ್ದು ಬಹು ವರ್ಷಗಳ ಜನರ ಬೇಡಿಕೆ ಈಡೇರಿಕೆ ಆಗಿದೆ.
ಸೇನಾಪುರ ನಾಡ ರಸ್ತೆ ಅಭಿವೃದ್ಧಿಗೆ ಆಗ್ರಹ:ಸೇನಾಪುರದಿಂದ ನಾಡಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಫಿನ್ನಿಪ್ಯಾಕ್ಟರಿ ಬಳಿಯಿಂದ ಸುಮಾರು ೫೦೦ ಮೀಟರ್ ವರೆಗೆ ಸಂಪೂರ್ಣ ಹದಗೆಟ್ಟು ಹೋಗಿದ್ದು ಮುಖ್ಯ ರಸ್ತೆ ಅಭಿವೃದ್ಧಿಗೊಳಿಸಬೇಕೆಂದು ಅಲ್ಲಿನ ನಿವಾಸಿಗಳು ಆಗ್ರಹಿಸಿದ್ದಾರೆ.
ಹೆಚ್ಚಿದ ಬಸುಗಳ ಓಡಾಟ:
ಆರ್ಥಿಕ ಚೇತರಿಕೆ ಕಂಡ ಹಿನ್ನೆಲೆಯಲ್ಲಿ ಕೋವಿಡ್ ಸಂದರ್ಭದಲ್ಲಿ ಆಲೂರು ಮತ್ತು ನೂಜಾಡಿ ಮಾರ್ಗದಲ್ಲಿ ಸ್ಥಗಿತಗೊಂಡಿದ್ದ ಕೆಲವು ಬಸುಗಳ ಓಡಾಟ ಮತ್ತೆ ಹೆಚ್ಚಿದ್ದು ಹೆಚ್ಚುವರಿ ಬಸುಗಳ ಓಡಾಟದಿಂದ ಸಾರ್ವಜನಿಕರು,ವಿದ್ಯಾರ್ಥಿಗಳು ನಿಟ್ಟುಸಿರು ಬಿಡುವಂತೆ ಆಗಿದೆ.ಆಲೂರು ಮತ್ತು ನೂಜಾಡಿ ಮಾರ್ಗದಲ್ಲಿ ಬಸುಗಳ ವಿರಳ ಓಡಾಟದಿಂದ ಜನರಿಗೆ ತೊಂದರೆ ಆಗುತ್ತಿರುವುದರ ಬಗ್ಗೆ ವಿಜಯ ಕರ್ನಾಟಕ ಈ ಹಿಂದೆ ವರದಿಯನ್ನು ಪ್ರಕಟಿಸಿತ್ತು.
ಕೋವಿಡ್ ಸಂದರ್ಭದಲ್ಲಿ ಸ್ಥಗಿತಗೊಂಡಿದ್ದ ಟ್ರಿಪ್ಗಳನ್ನು ಮತ್ತೆ ಹೆಚ್ಚಿಸಲಾಗಿದೆ.ರಸ್ತೆಗಳ ಗುಣಮಟ್ಟ ಕೂಡ ಸುಧಾರಣೆ ಆಗಿದ್ದು,ಜನರ ಬೇಡಿಕೆಗೆ ತಕ್ಕಂತೆ ಇನ್ನೂ ಹೆಚ್ಚಿನ ಟ್ರಿಪ್ಗಳನ್ನು ಓಡಿಸಲಾಗುವುದು ಎನ್ನುತ್ತಾರೆ ಜಯದುರ್ಗಾ ಬಸ್ ಮಾಲೀಕ ಸಚ್ಚಿದಾನಂದ ಶೆಟ್ಟಿ ಆಲೂರು.
ಸೇನಾಪುರ ಮತ್ತು ಗುಡ್ಡಮ್ಮಾಡಿ ಪರಿಸರದ ಜನರ ಬೇಡಿಕೆಗೆಯನ್ನು ಈಡೇರಿಸಿದ ಸಂತೃಪ್ತಿ ಇದೆ.ನಮ್ಮ ಸರಕಾರಕ್ಕೂ ಮತ್ತು ಕ್ಷೇತ್ರದ ಸಂಸದರಿಗೆ ಧನ್ಯವಾದವನ್ನು ಸಲ್ಲಿಸುತ್ತಿದ್ದೇನೆ.ನಾಡ ಮತ್ತು ಸೇನಾಪುರ ಮುಖ್ಯ ರಸ್ತೆಯನ್ನು ಅಭಿವೃದ್ಧಿಗೊಳಿಸಲಾಗುವುದು.ಬೈಂದೂರು ಕ್ಷೇತ್ರದ ಜನರ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎನ್ನುತ್ತಾರೆ ಬೈಂದೂರು ವಿಧಾನ ಸಭಾ ಕ್ಷೇತ್ರ ಶಾಸಕರು ಬಿ.ಎಂ.ಸುಕುಮಾರ ಶೆಟ್ಟಿ.