ಕಾರ್ಕಳ: ಗರಿಗೆದರಿದ ಕಾರ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ ಜೈ ಹನುಮಾನ್ ಸೇನೆಯು ಪಕ್ಷೇತರವಾಗಿ ಸ್ವರ್ಧಿಸಲು ಸಜ್ಜಾಗಿದೆ. ರಾಜ್ಯ ವ್ಯಾಪ್ತಿಯ ನಾಲ್ಕು ಕಡೆ ಅಭ್ಯರ್ಥಿಗಳನ್ನು ಸ್ವರ್ಧಾ ಕಣಕ್ಕೆ ಇಳಿಸಲಿದೆ ಎಂದು ಜೈ ಹನುಮಾನ್ ಸೇನೆಯ ರಾಜ್ಯ ಸಂಚಾಲಕ ಹನುಮಂತಪ್ಪ ತಿಳಿಸಿದ್ದಾರೆ.
ನಗರದ ಪ್ರಕಾಶ್ ಹೋಟೆಲ್ ನಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹಿಂದೂ ಧರ್ಮವು ವಸುದೈವ ಕುಟುಂಬಕಂ ಎಂಬ ತತ್ತ್ವವವನ್ನು ನಂಬಿಕೊಂಡು ಅದರ ಆಧಾರದ ಮೇಲೆ ಇಂದು ವಿಶ್ವಮಟ್ಟದಲ್ಲಿ ಪ್ರಜ್ವಲಿಸುತ್ತಿದೆ. ಮನುಷ್ಯ ಜಾತಿ ಒಂದೇ ಎನ್ನುವುದು ಪ್ರಕೃತಿ ತಾಯಿಯ ಸಂದೇಶವಾಗಿದೆ,
ನಮ್ಮ ದೈವ ಹನುಮನ ಶಕ್ತಿಯ ಕಾರಣದಿಂದಾಗಿ ಇಂದು ದುಡಿಯುವ ಜನರು ಹಾಗೂ ಹಿಂದುಳಿದ ಸರ್ವ ಸಮುದಾಯಗಳು ಕಷ್ಟ-ಕಾರ್ಪಣ್ಯವನ್ನು ಎದುರಿಸಿಯೂ ದಿಟ್ಟತನದಿಂದ ಜೀವನ ನಡೆಸುತ್ತಿವೆ. ಇಂತಹ ಸಂದರ್ಭದಲ್ಲಿ ನಮ್ಮೆಲ್ಲರ ಆರಾಧ್ಯ ದೈವವನ್ನು ಆರಾಧಿಸುವ ಜೊತೆ ಜೊತೆಗೆ ನಮ್ಮ ಹನುಮಾನ್ ಜೀ ವಿಚಾರಗಳನ್ನು ಬಲಗೊಳಿಸುವುದು, ಪರಸ್ಪರ ಸಹಕರಿಸುವುದು ಆ ಮೂಲಕ ಸಮುದಾಯಗಳ ಸರ್ವ ಏಳಿಗೆ ಬಯಸುವುದು ಸರ್ವ ಹನುಮಭಕ್ತರ ಜವಾಬ್ದಾರಿಯಾಗಿದೆ.
ಹನುಮನ ನಾಡಾಗಿರುವ ಕರ್ನಾಟಕದಲ್ಲಿ ಹನುಮನ ವಿಚಾರಗಳನ್ನು, ಹನುಮನ ಅಂತಃಕರಣದ ಹೃದಯವನ್ನು ಹನುಮನ ಶಕ್ತಿಯನ್ನು ಹನುಮ ಭಕ್ತರು ತೋರ್ಪಡಿಸುವ ಜೊತೆಗೆ ಸುಭಿಕ್ಷ ಸಮಾಜವನ್ನು ಕಟ್ಟಿಕೊಡುವುದು ನಮ್ಮೆಲ್ಲರ ಕಾಯಕವಾಗಿದೆ
ಈ ಕರ್ತವ್ಯದ ಮುಂದುವರಿದ ಭಾಗವಾಗಿ ಉದಾತ್ತ ಧೈಯಗಳನ್ನಿಟ್ಟುಕೊಂಡು “ಜೈ ಹನುಮಾನ್ ಸೇನ “ಯು ರಚನೆಯಾಗಿದ್ದು, ನಮ್ಮ ದೈವ ಹನುಮನನ್ನು ಪೂಜಿಸುವ, ಆರಾಧಿಸುವ ಜನರ ರಕ್ಷಣೆ, ಅವರ ಏಳಿಗೆ ಸೇನೆಯ ಮುಖ್ಯ ಕಾರ್ಯವಾಗಿದೆ. ಈ ನಿಟ್ಟಿನಲ್ಲಿ ಹನುಮನ ಜನ್ಮಭೂಮಿ ಅಂಜನಾದ್ರಿಯಿಂದ ಜೈ ಹನುಮಾನ್ ಸೇನೆಯ ಯಾನ ರಾಜ್ಯಾದ್ಯಂತ ಆರಂಭಗೊಂಡಿದೆ ಎಂದು ಹನುಮಂತಪ್ಪ ತಿಳಿಸಿದರು.
ಸೇನೆಯ ಆಶ್ವಾಸನೆಗಳು ನಿಮಗಾಗಿ, ಸದೃಢ ಕರ್ನಾಟಕ್ಕಾಗಿ
ದೆಹಲಿ ಮಾದರಿಯಲ್ಲಿ ಸರ್ಕಾರಿ ಶಾಲೆಗಳನ್ನು ಹೈಟೆಕ್ ಮಾಡುವುದು. ಪಿ.ಯು.ಸಿ ಯಿಂದ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸುವುದು, ವಸತಿ ನಿಲಯಗಳ ವ್ಯವಸ್ಥೆ. 1 ರಿಂದ 10 ನೇ ತರಗತಿವರೆಗೆ ವಿದ್ಯಾರ್ಥಿನಿಯರಿಗೆ ಪ್ರತಿ ವರ್ಷ ರೂ. 2,000 ರೂ. ವಿಶೇಷ ಶೈಕ್ಷಣಿಕ ಭತ್ಯೆ, ಸ್ನಾತಕೋತ್ತರ ಪದವಿ ವರೆಗೆ ಎಲ್ಲಾ ವಿದ್ಯಾರ್ಥಿನಿಯರಿಗೆ ಉಚಿತ ಶಿಕ್ಷಣ. ಐಟಿಐ, ಡಿಪ್ಲೋಮಾ, ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಶೈಕ್ಷಣಿಗೆ ಟೂಲ್ ಬಾಕ್ಸ್ ಮತ್ತು ಟ್ಯಾಬ್ ವಿತರಣೆ. ವಿದ್ಯಾರ್ಥಿಗಳಿಗೆ ಉಚಿತ ಮೆಡಿಕಲ್ ಶಿಕ್ಷಣ ನೀಡುವುದು. 10ನೇ ತರಗತಿ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ. ಅಲ್ಲದೇ ಶಾಲಾ ಬ್ಯಾಗ್ ಸೇರಿದಂತೆ ಶೈಕ್ಷಣಿಕ ವಸ್ತು ನೀಡಲಾಗುವುದು. ಕ್ರೀಡಾ ಸಾಂಸ್ಕೃತಿಕ ಚಟುಚಟಿಕೆಗಳಿಗೆ ಉತ್ತೇಜನ ನೀಡುವ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುವುದು.
60 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ 3,500 ರೂ. ಮಾಸಿಕ ಭತ್ಯೆ.ಬಿ.ಪಿ.ಎಲ್. ಪ್ರತಿ ಕುಟುಂಬಕ್ಕೆ ವಾರ್ಷಿಕ ರೂ 10,000- ಕೊಡುಗೆ, ದೇವದಾಸಿ ಕುಟುಂಬಕ್ಕೆ ರೂ. 5.00 ಲಕ್ಷದವರೆಗೆ ವಿಶೇಷ ಯೋಜನೆ ದೇವದಾಸಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ರೂ. 50,000- ವಾರ್ಷಿಕ ಕೊಡುಗೆ, ಶವ ಸಂಸ್ಕಾರಕ್ಕೆ ರೂ. 10,000- ಮಂಜೂರಾತಿ, ಪ್ರತಿ ಗ್ರಾಮಕ್ಕೆ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣ
ವಿಧವಾ ವೇತನ ಮಾಸಿಕ ರೂ. 1,000, ವಿಶೇಷ ಚೇತನರ ಭತ್ಯೆಯನ್ನು ಮಾಸಿಕ ರೂ.4,000, 17 ಪ್ರತಿ ಗ್ರಾಮ ಪಂಚಾಯತಿಗೆ ಒಂದರಂತೆ ಮಹಿಳಾ ಕೈಗಾರಿಕಾ ಘಟಕ ಸ್ಥಾಪನೆ. ಪ್ರತಿ ತಾಲೂಕಿಗೆ 2 ರಂತೆ 100 ಹಾಸಿಗೆಯ ತಾಯಿ ಮಕ್ಕಳ ವಿಶೇಷ ಆರೈಕೆ ಆಸ್ಪತ್ರೆ.
ಬಿ.ಪಿ.ಎಲ್, ಕಾರ್ಡ್ ಹೊಂದಿದ ಬಾಣಂತಿಗೆ ಹೆರಿಗೆಯಾದ 15 ದಿನಗಳೊಳಗೆ ರೂ. 15,000- ಸಹಾಯ ಧನ
ಪ್ರತಿ ತಾಲೂಕಿಗೆ ಒಂದರಂತೆ ಎಂ.ಆರ್.ಐ. ಸ್ಕ್ಯಾನಿಂಗ್ ಸೆಂಟರ್ ನಿರ್ಮಾಣ. ಪ್ರತಿ ಜಿಲ್ಲೆಗೊಂದರಂತೆ ಕ್ಯಾನ್ಸರ್ ಚಿಕಿತ್ಸಾ ಆಸ್ಪತ್ರೆ ನಿರ್ಮಾಣ ಮೊದಲಾದ ಉದ್ದೇಶಗಳನ್ನು ಸಂಘಟನೆ ಹೊಂದಿದೆ.