ಬೇಲೂರು: ರಾಜ್ಯದ ೨೨೪ ಕ್ಷೇತ್ರದಲ್ಲು ಚುನಾವಣೆ ಕಾವು ಜೋರಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಕೆಲವು ಅಭ್ಯರ್ಥಿಗಳನ್ನು ಘೊಷಣೆ ಮಾಡಿದ್ದಾರೆ. ಇನ್ನೂ ಕೆಲ ಅಭ್ಯರ್ಥಿಗಳ ಪಟ್ಟಿ ಒಂದೆರೆಡು ದಿನಗಳಲ್ಲಿ ಹೊರಬೀಳುವ ಸಾದ್ಯತೆ ಇದೆ. ಟಿಕೇಟ್ ಹಂಚಿಕೆಯಾದವರು ಆಯಾ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರದ ಜೊತೆಗೆ ಹಣ, ಹೆಂಡ, ಸೀರೆ, ಕುಕ್ಕರ್ ಹಂಚಿಕೆಯಲ್ಲಿ ಬ್ಯುಸಿಯಾಗಿದ್ದರೆ, ಮತ್ತೊಂದೆಡೆ ಕೆಲ ಆಕಾಂಕ್ಷಿಗಳು ಟಿಕೇಟ್ ಸಿಗದೆ, ಯಾವ ಪಕ್ಷಕ್ಕೆ ಹೋಗುವುದು ಎಂಬ ಲೆಕ್ಕಚಾರದಲ್ಲಿದ್ದಾರೆ.
ಬೇಲೂರಿನ ವಿಧಾನ ಸಭಾ ಕ್ಷೇತ್ರದ ಚಿತ್ರಣ
ಈಗಾಗಲೆ ಕಾಂಗ್ರೆಸ್ ಪಕ್ಷದಲ್ಲಿ ಬಿ.ಶಿವರಾಂ, ರಾಜ್ಯ ನಾಯಕರ ಜೊತೆ ಲಾಬಿ ನಡೆಸಿ, ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಟಿಕೆಟ್ ಸಿಕ್ಕಿದೆ. ಮತ್ತೊಂದೆಡೆ ಸಿಡಿದೆದ್ದ ಸಹೋದರರಂತೆ ಗ್ರಾನೈಟ್ ರಾಜಶೇಖರ್ ಹಾಗೂ ವೈ.ಎನ್.ಕೃಷ್ಣೆಗೌಡ ಶಿವರಾಂ ವಿರುದ್ಧ ರಣಕಹಳೆ ಆರಂಭಿಸಿದ್ದಾರೆ.
ಇನ್ನೂ ಜೆಡಿಎಸ್ ನಲ್ಲಿ ಹಾಲಿ ಶಾಸಕ ಕೆ.ಎಸ್.ಲಿಂಗೇಶ್ ಒಬ್ಬರೆ ಅಭ್ಯರ್ಥಿ. ಇವರು ಮಾತ್ರ ತಾಲ್ಲೂಕಿಗೆ ೧೮೦೦ ಕೋಟಿ ಅನುದಾನ ತಂದಿದ್ದೇನೆ, ಮುಂದಿನ ಎಂ ಎಲ್ ಎ. ನಾನೆ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಆದರೆ ಕಳೆದ ಭಾರಿ ಮತದಾರರು ಕೈ ಹಿಡಿದರು ಅಂದ ಮಾತ್ರಕ್ಕೆ ಈ ಭಾರಿಯೂ ಕೈ ಹಿಡಿತಾರೆ ಅನ್ನೋ ಮಾತು ಸುಳ್ಳು.ಏಕೆಂದರೆ ಲಿಂಗೇಶ್ ಮೇಲೆ ಜೆಡಿಎಸ್ ಕಾರ್ಯಕರ್ತರು ಅಸಮಾಧಾನ ಗೊಂಡಿದ್ದಾರೆ ಎಂಬ ಮಾತಿದೆ. ಅಲ್ಲದೇ ಲಿಂಗೇಶ್ ಭೂಹಗರಣದಲ್ಲಿ ಸಿಲುಕಿಕೊಂಡಿರುವ ಆರೋಪವೂ ಇದೆ.
ಬಿಜೆಪಿ ಕಥೆಯೇನು: ಬೇಲೂರಿನ ಇತಿಹಾಸದಲ್ಲಿಯೆ ತಾವರೆ(ಕಮಲ) ಅರಳಿಲ್ಲ. ಈ ಭಾರಿ ಅರಳುತ್ತೋ..ಮುದುಡುತ್ತೋ..ಗೊತ್ತಿಲ್ಲ.
ಬಿಜೆಪಿ ಪಕ್ಷದಲ್ಲಿಯೂ ಬರೋಬ್ಬರಿ ೬ ಜನ ಟಿಕೇಟ್ ಆಕಾಂಕ್ಷಿಗಳಿದ್ದಾರೆ. ಕೆಲವರು ಸ್ಥಳಿಯರಾದರೆ, ಕೆಲವರು ವಲಸಿಗರು. ಕಳೆದ ಭಾರಿ ಹುಲ್ಲಳ್ಳಿ ಸುರೇಶ್, ಲಿಂಗೇಶ್ ವಿರುದ್ದ ಸ್ಪರ್ಧಿಸಿ ಪರಾಭವ ಗೊಂಡಿದ್ದರು.ಕಾಂಗ್ರೆಸ್ ನಿಂದ ದಿ.ವೈ.ಎನ್.ರುದ್ರೇಶ್ ಗೌಡ ಪತ್ನಿ ಕೀರ್ತನಾ ಮೂರನೆ ಸ್ಥಾನಕ್ಕೆ ತಲುಪಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಭಾರಿ ಬಿಜೆಪಿ ಜಿಲ್ಲಾದ್ಯಕ್ಷ ಹುಲ್ಲಳ್ಳಿ ಸುರೇಶ್ ಮಾತ್ರ ಸೋತರೂ ಕೂಡ ೫ ವರ್ಷದಿಂದಲೂ ಜನರ ಜೊತೆಗಿದ್ದು ಮನಗೆದ್ದಿದ್ದಾರೆ.
ಇನ್ನೂ..ಕೊರಟಿಕೆರೆ ಪ್ರಕಾಶ್ ಸ್ಥಳಿಯರು, ಈಭಾರಿ ಸ್ಥಳೀಯರಿಗೆ ಟಿಕೇಟ್ ನೀಡಬೇಕು ಎಂದು ಹಠಬಿಡದೆ ತಾಲ್ಲೂಕಿನಲ್ಲಿ ಸಭೆ ಸಮಾರಂಭ, ದೇವಾಲಯಗಳಿಗೆ ತೆರಳಿ ಆರ್ಥಿಕ ಸಹಾಯ ನೀಡುವ ಮೂಲಕ ಚುನಾವಣಾ ಹೋರಾಟದಲ್ಲಿದ್ದಾರೆ . ಜೊತೆಗೆ ಬೇಲೂರಿನಲ್ಲಿ ನಡೆದ ದಸರಾ ದರ್ಬಾರ್ ನಲ್ಲಿ ಮುಖಂಡತ್ವ ವಹಿಸಿ ಲಿಂಗಾಯತ ಮತ ಸೆಳೆಯುವಲ್ಲಿಯೂ ಕೂಡ ಸಫಲರಾಗಿದ್ದಾರೆ.
ಸೆಲೆಬ್ರಿಟಿಗಳ ಪ್ರಿಯ ಎಂದೆ ಕರೆಯಿಸಿ ಕೊಳ್ಳುತ್ತಿರುವ ಸಿದ್ದೇಶ್ ನಾಗೇಂದ್ರ, ಕೆಲ ತಿಂಗಳ ಹಿಂದೆ ಯಷ್ಟೆ ಬೇಲೂರಿಗೆ ಬಂದು ದೇವಾಲಯದ ಜೀರ್ಣೋದ್ಧಾರ, ಸೇರಿದಂತೆ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಬೇಲೂರು ಉತ್ಸವ ಆಯೋಜನೆ ಮಾಡಿ, ಒಕ್ಕಲಿಗರ ಮತ ಸೆಳೆಯಲು ಕಸರತ್ತು ನಡೆಸಿದ್ದಾರೆ.
ಸುರಭಿ ರಘು ಮೂಲತಃ ತಾಲ್ಲೂಕಿನ ಚೀಕನಹಳ್ಳಿ ಗ್ರಾಮದವರು.ಇತ್ತಿಚೆಗೆ ಆಗಾಗ ಬೇಲೂರು ಕ್ಷೇತ್ರದಲ್ಲಿ ಕಾಣಿಸಿಕೊಂಡು ಕೆಲ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಇತ್ತ, ಸಂತೋಷ್ ಕೆಂಚಾಂಬ ಮೂಲತಃ ಆರೆಸೆಸ್ಸ್ ಸಂಘ ಪರಿವಾರದ ಮಾಸ್ಟರ್ ಮೈಂಡ್. ಮೊದ ಮೊದಲು ಬೇಲೂರಿನಲ್ಲಿ ಸ್ವಚ್ಛತೆಗೆ ಪ್ರಾಮುಖ್ಯತೆ ನೀಡುವ ಮೂಲಕ ತಮ್ಮ ಜನಪರ ಕೆಲಸಗಳನ್ನು ಮಾಡುತ್ತಾ ಬಂದಿದ್ದರು. ಈ ನಡುವೆ,ಕೆಲ ಕನ್ನಡ ಪರ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿ, ತಮ್ಮ ಅಸ್ತಿತ್ವಕ್ಕೆ ಧಕ್ಕೆ ತಂದುಕೊಂಡಿದ್ದು ಹೌದು. ಕೆಲ ಸಂಘಟನೆ ಮಖಂಡರ ಬಾಯಿಗೆ ತುತ್ತಾಗಿ, ಹಿಂದೂ ಮುಸ್ಲಿಮರ ನಡುವೆ ಸಾಮರಸ್ಯ ಹಾಳು ಮಾಡಿದರು ಎಂಬ ಮಾತು ಮತದಾರರಲ್ಲಿ ಹರಿದಾಡಿದೆ. ಒಟ್ಟಾರೆ ಕ್ಷೇತ್ರದ ಮನದಾಳ ಏನು ಎಂಬುದರ ಬಗ್ಗೆ ಕೆಲದಿನಗಳಲ್ಲಿಯೇ ಸ್ಪಷ್ಟ ಚಿತ್ರಣ ಹೊರಬೀಳಲಿದೆ.