ಉಡುಪಿ: ದಶಕಗಳ ಹೋರಾಟದ ಸಲುವಾಗಿ ದತ್ತಪೀಠ ವಿಚಾರದಲ್ಲಿ ನ್ಯಾಯ ಸಿಕ್ಕಿದೆ. ನ್ಯಾಯಾಲಯದ ತೀರ್ಪು ಅಧ್ಯಯನ ಮಾಡಿ, ಹಿಂದುಗಳ ಭಾವನೆಗೆ ಧಕ್ಕೆ ಬಾರದಂತೆ ಸರಕಾರ ಸೂಕ್ತ ನಿರ್ಣಯ ತೆಗೆದುಕೊಳ್ಳುತ್ತದೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್ ಕುಮಾರ್ ತಿಳಿಸಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದತ್ತಪೀಠದ ಕುರಿತ ತೀರ್ಪನ್ನು ಅಧ್ಯಯನ ಮಾಡಿ ಅದರ ಅನುಷ್ಠಾನಕ್ಕಾಗಿ ಕಾನೂನು, ಕಂದಾಯ ಮತ್ತು ಹಿಂದು ಧಾರ್ಮಿಕ ದತ್ತಿ ಸಚಿವರನ್ನೊಳಗೊಂಡ ಸಮಿತಿ ರಚನೆ ಮಾಡಿ ಶೀಘ್ರವೇ ಸುತ್ತೋಲೆ ಹೊರಡಿಸುತ್ತೇವೆ. ವಿಳಂಬ ಮಾಡುವ ಯಾವುದೇ ಉದ್ದೇಶವಿಲ್ಲ, ದತ್ತಪೀಠದ ಕುರಿತು ಒಳ್ಳೆಯ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.
ನವರಾತ್ರಿ ಉತ್ಸವವನ್ನು ಭಕ್ತಿ ಪ್ರಧಾನದಿಂದ ಆಚರಣೆ ಮಾಡಲು ಸರಕಾರ ಅವಕಾಶ ಕೊಡುತ್ತದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳ ಸುತ್ತೋಲೆ ಪರಿಶೀಲಿಸಿ, ನವರಾತ್ರಿ ಉತ್ಸವವನ್ನು ಚೆನ್ನಾಗಿ ಮಾಡಲು ತೀರ್ಮಾನಿಸಿದ್ದೇವೆ. ಮೈಸೂರು ದಸರಾದ ಜಂಬೂಸವಾರಿಗೆ 500 ಮಂದಿ ನಿಗದಿಪಡಿಸಲಾಗಿದೆ. ರಾಜ್ಯದ ಉಳಿದೆಡೆ ಇತಿಮಿತಿ ಅರ್ಥ ಮಾಡಿಕೊಂಡು ನವರಾತ್ರಿ ಉತ್ಸವ ಆಚರಿಸಲಾಗುತ್ತದೆ ಎಂದು ಸಚಿವ ಸುನೀಲ್ ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕಾರಣ ಅವರ ಪಕ್ಷ ಆಂತರಿಕ ವಿಚಾರ. ರಾಜ್ಯದ ಜನರಲ್ಲಿ ಅವರು ತಮ್ಮ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ. ಸ್ವತಃ ಅವರೇ ಒಂದು ಕ್ಷೇತ್ರದಲ್ಲಿ ಸೋತಿದ್ದಾರೆ, ಇನ್ನೊಂದರಲ್ಲಿ ಕಷ್ಟಪಟ್ಟು ಗೆದ್ದಿದ್ದಾರೆ. ಮೈಸೂರಿನಲ್ಲಿ ಅವರಿಗೆ ಅಸ್ತಿತ್ವವೇ ಇಲ್ಲದಂತಾಗಿದೆ. ಕಾಂಗ್ರೆಸ್ ಎಲ್ಲ ಉಪಚುನಾವಣೆ ಸೋತಿದೆ. ಈಗ ಯಾವ ರಾಜಕಾರಣ ಮಾಡಬೇಕೆಂದು ಅವರು ತೀರ್ಮಾನಿಸಬೇಕು, ಒಟ್ಟಿನಲ್ಲಿ ಜನ ಅವರನ್ನು ತಿರಸ್ಕಾರ ಮಾಡಿದ್ದಾಾರೆಂದು ಸಿದ್ದರಾಮಯ್ಯರಿಗೆ ರಾಷ್ಟ್ರ ರಾಜಕಾರಣಕ್ಕೆ ಸೋನಿಯಾ ಬುಲಾವ್ ವಿಚಾರವಾಗಿ ಸಚಿವ ಸುನೀಲ್ ಪ್ರತಿಕ್ರಿಯಿಸಿದರು.
ಹಾನಗಲ್ ಮತ್ತು ಸಿಂದಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ನೇತೃತ್ವವನ್ನು ಸಿದ್ದರಾಮಯ್ಯ ಅಥವಾ ಯಾರೇ ತೆಗೆದುಕೊಂಡರು ಅಡ್ಡಿ ಇಲ್ಲ. ಬಿಜೆಪಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಎರಡೂ ಉಪ ಚುನಾವಣೆ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.