ಚಿತ್ರದುರ್ಗ : ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳನ್ನು ಪ್ರತಿ ಮನೆ, ಮನೆಗೆ ತಿಳಿಸಿ ವಿರೋಧಿಗಳ ಟೀಕೆಗಳಿಗೆ ತಕ್ಕ ಉತ್ತರ ನೀಡುವ ಸಾಮರ್ಥ್ಯ ಬೆಳೆಸಿಕೊಳ್ಳುವಂತೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಕಾರ್ಯಕರ್ತರಿಗೆ ಹಾಗೂ ಪದಾಧಿಕಾರಿಗಳಿಗೆ ಕರೆ ನೀಡಿದರು.
ನಗರದ ಚಳ್ಳಕೆರೆ ಟೋಲ್ಗೇಟ್ನಲ್ಲಿರುವ ಎಸ್.ಎಸ್.ಕೆ.ಎಸ್. ಸಮುದಾಯ ಭವನದಲ್ಲಿ ಭಾರತೀಯ ಜನತಾ ಪಾರ್ಟಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ವತಿಯಿಂದ ಸೇವಾ ಮತ್ತು ಸಮರ್ಪಣಾ ಅಭಿಯಾನದಡಿ ಬುಧವಾರ ನಡೆದ ಸೇವಾ ಯಜ್ಞದಲ್ಲಿ ಸಮರ್ಪಿತ ಜೀವನ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿಯವರು ಪೌರತ್ವ ಕಾಯಿದೆ ತಿದ್ದುಪಡಿ ಜಾರಿಗೆ ತಂದಿರುವುದಕ್ಕೆ ಸಾಕಷ್ಟು ವಿರೋಧಗಳು ವ್ಯಕ್ತವಾದವು. ಈ ಕಾಯಿದೆಯಿಂದ ನಮ್ಮ ದೇಶದ ಮುಸಲ್ಮಾನರನ್ನು ಹೊರಹಾಕಲಾಗುತ್ತದೆಂದು ಕಾಂಗ್ರೆಸ್ನವರು ಅಪಪ್ರಚಾರ ಮಾಡುತ್ತಿದ್ದಾರೆ. ನಿಜಕ್ಕೂ ಇದು ಒಳ್ಳೆಯ ಕಾಯಿದೆ. ಪಾಕಿಸ್ತಾನ, ಆಫ್ಘಾನಿಸ್ತಾನ, ಬಂಗಾಳದಲ್ಲಿರುವ ಹಿಂದುಗಳು ಭಾರತಕ್ಕೆ ಬಂದಾಗ ಪೌರತ್ವ ನೀಡುವುದು ಇದರ ಉದ್ದೇಶ. ಜಮ್ಮು ಮತ್ತು ಕಾಶ್ಮೀರದಲ್ಲಿ 371 ನೇ ಕಾಯಿದೆ ರದ್ದುಪಡಿಸಿರುವುದರಿಂದ ಆ ಭಾಗವನ್ನು ವಶಪಡಿಸಿಕೊಳ್ಳಲು ನೆರವಾಗಲಿದೆ ಎಂದು ಹೇಳಿದರು.
ಮಹಿಳೆಯರಿಗೂ ಸಮಾನ ಹಕ್ಕು ನೀಡಬೇಕೆಂದು ಡಾ.ಬಿ.ಆರ್.ಅಂಬೇಡ್ಕರ್ ಪ್ರಸ್ತಾಪಿಸಿದ್ದಕ್ಕೆ ನೆಹರು ಒಪ್ಪದಿದ್ದಾಗ ಬೇಸರಗೊಂಡು ಅಂಬೇಡ್ಕರ್ ಮಂತ್ರಿ ಪದವಿಗೆ ರಾಜಿನಾಮೆ ನೀಡುತ್ತಾರೆ. ಆಗ ಮತ್ತೆ ಚುನಾವಣೆಯಾದಾಗ ಅಂಬೇಡ್ಕರ್ ವಿರುದ್ದ ಅಭ್ಯರ್ಥಿಯನ್ನು ಸ್ಪರ್ಧೆಗಿಳಿಸಿ ಸೋಲಿಸಿದ್ದು, ಇದೇ ಕಾಂಗ್ರೆಸ್ನವರು. ಪಂಜಾಬ್ನಲ್ಲಿ ರೈತರು ಚಳುವಳಿ ನಡೆಸುತ್ತಿರುವುದು ಬೆಳೆಗೆ ಕನಿಷ್ಟ ಬೆಂಬಲ ಬೆಲೆ ನೀಡಬೇಕೆಂದು. ಆದರೆ ಕಾಂಗ್ರೆಸ್ನವರು ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಕೇಂದ್ರ ಸರ್ಕಾರದ ಕೃಷಿ ಕಾಯಿದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆಂದು ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದರು.
ಬಿಜೆಪಿ ರಾಜ್ಯ ಮಾಧ್ಯಮ ವಕ್ತಾರ ಮೋಹನ್ ವಿಶ್ವ ಮಾತನಾಡಿ, ಗುಜರಾತ್ ಮುಖ್ಯಮಂತ್ರಿಯಿಂದ ಹಿಡಿದು ದೇಶದ ಪ್ರಧಾನಿ ಹುದ್ದೆಗೆ ಏರಿರುವ ನರೇಂದ್ರ ಮೋದಿಯವರು 20 ವರ್ಷಗಳಿಂದ ರಾಜಕೀಯ ಅಧಿಕಾರದಲ್ಲಿರುವುದು ದೊಡ್ಡ ಇತಿಹಾಸ. ತಾಳ್ಮೆ, ಮೌನ, ಕಠಿಣ ಶ್ರಮ, ಬದ್ದತೆ, ಜನಸೇವೆಯ ಮೂಲಕವೇ ವಿರೋಧಿಗಳ ಟೀಕೆಗಳಿಗೆ ಉತ್ತರ ನೀಡುತ್ತಿದ್ದಾರೆ.
ಗೋದ್ರಾ ಹತ್ಯಾಕಾಂಡ ಸೇರಿದಂತೆ ಅನೇಕ ವಿಚಾರಣೆಗಳನ್ನು ಎದುರಿಸಿದ ಮೋದಿಯವರು ಯಾವ ಆಪಾದನೆ ಟೀಕೆಗಳಿಗೂ ಎದೆಗುಂದಲಿಲ್ಲ. ಸ್ವಾಮಿವಿವೇಕಾನಂದ ಅವರ ಆಸೆಯಂತೆ ಭಾರತವನ್ನು ವಿಶ್ವಗುರು ಮಾಡಲು ಹೊರಟಿರುವ ಮೋದಿಯವರ ಆದರ್ಶ, ಚಿಂತನೆಗಳನ್ನು ಪಕ್ಷದ ಕಾರ್ಯಕರ್ತರು, ಪದಾಧಿಕಾರಿಗಳು, ಮುಖಂಡರು ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.
ಬಿಜೆಪಿ ನಗರ ಮಂಡಲ ಅಧ್ಯಕ್ಷ ಕೆ.ಶಶಿಧರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿ.ಅನಿತ್ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಬದ್ರಿನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಸಿದ್ದಾಪುರ, ಜಿಲ್ಲಾ ಕಾರ್ಯದರ್ಶಿ ಎ.ರೇಖಾ, ಗ್ರಾಮಾಂತರ ಮಂಡಲ ಅಧ್ಯಕ್ಷ ನಂದಿ ನಾಗರಾಜ್, ನಗರಸಭೆ ಅಧ್ಯಕ್ಷೆ ತಿಪ್ಪಮ್ಮ ವೆಂಕಟೇಶ್ ವೇದಿಕೆಯಲ್ಲಿದ್ದರು.