ಉಡುಪಿ: ದೇಶದಲ್ಲಿ ಕೇವಲ ಐಪಿಎಸ್ ಐಎಎಸ್ ಅಧಿಕಾರಿಗಳು ಮಾತ್ರವಲ್ಲ, ಪಂಚಾಯತ್ ಅಭಿವೃದ್ಧಿ ಅಧಿಕಾರಿಯಿಂದ ಹಿಡಿದು ರಾಷ್ಟ್ರಪತಿಯವರೆಗೆ ಆರ್ಎಸ್ಎಸ್ ಕಾರ್ಯಕರ್ತರು ಇದ್ದಾರೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್ ಕುಮಾರ್ ತಿರುಗೇಟು ನೀಡಿದ್ದಾರೆ.
ದೇಶದ 4000 ಐಎಎಸ್ ಐಪಿಎಸ್ ಅಧಿಕಾರಿಗಳು ಆರ್ಎಸ್ಎಸ್ ಕಾರ್ಯಕರ್ತರಾಗಿದ್ದಾರೆಂಬ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಗೆ ಸ ಬುಧವಾರ ಉಡುಪಿಯಲ್ಲಿ ಸಚಿವರು ಪ್ರತಿಕ್ರಿಯಿಸಿದರು.
ಎಚ್.ಡಿ. ಕುಮಾರಸ್ವಾಮಿ ಅವರ ಲೆಕ್ಕಾಚಾರ ಕಡಿಮೆಯಾಗಿದೆ, ದೇಶದಲ್ಲಿ ಕೇವಲ 4000 ಅಲ್ಲ ಅದಕ್ಕೂ ಹೆಚ್ಚು ಜನ ಆರ್ಎಸ್ಎಸ್ನವರಿದ್ದಾರೆ. ಆರ್ಎಸ್ಎಸ್ ಒಂದು ವ್ಯಕ್ತಿಯನ್ನು ನಿರ್ಮಾಣ ಮಾಡುವ ಸಂಘಟನೆ, ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರ ನಿರ್ಮಾಣ ಮಾಡುವ ಪರಿಕಲ್ಪನೆಯಡಿಯಲ್ಲಿ ಆರ್ಎಸ್ಎಸ್ ಕೆಲಸ ಮಾಡುತ್ತದೆ. ನಮ್ಮಂಥ ಅನೇಕ ವ್ಯಕ್ತಿಗಳನ್ನು ಆರ್ಎಸ್ಎಸ್ ತಯಾರು ಮಾಡಿದೆ. ಇಂಥ ವ್ಯಕ್ತಿತ್ವ ನಿರ್ಮಾಣ ಮಾಡಿಕೊಂಡ ಸಾವಿರಾರು ಮಂದಿ ಬೇರೆ ಬೇರೆ ಕ್ಷೇತ್ರದಲ್ಲಿದ್ದಾರೆ ಎಂದು ಸಚಿವ ಸುನೀಲ್ ತಿಳಿಸಿದರು.
ರಾಷ್ಟ್ರ ನಿರ್ಮಾಣದ ಪರ ಇರುವವರು ಆರ್ಎಸ್ಎಸ್ ಅನ್ನು ಸ್ವಾಗತಿಸುತ್ತಾರೆ. ಎಲ್ಲರ ಮುಖಾಂತರ ರಾಷ್ಟ್ರ ನಿರ್ಮಾಣ ಮಾಡುವ ಗುರಿ ಇದೆ. ರಾಷ್ಟ್ರ ನಿರ್ಮಾಣದ ಕನಸು ಇಲ್ಲದವರು ಮಾತ್ರ ಇದನ್ನು ವಿರೋಧಿಸುತ್ತಾರೆ ಎಂದ ಸುನೀಲ್ ಕುಮಾರ್, ಈ ರೀತಿ ಮಾತನಾಡುವವರ ಬಗ್ಗೆ ಅನುಕಂಪವಿದೆ. ಭಾರತ ವಿಶ್ವಕ್ಕೆ ಮಾರ್ಗದರ್ಶನ ಮಾಡಬೇಕೆಂದು ಅಬ್ದುಲ್ ಕಲಾಂ ಬಯಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಈ ಸಾಧನೆ ಮಾಡುತ್ತಿದ್ದಾರೆ ಎಂದು ಹೇಳಿದರು.
ಭಾರತ ನಂಬರ್ 1 ಆಗಲು ವ್ಯಕ್ತಿ ನಿರ್ಮಾಣವಾಗಬೇಕು. ವ್ಯಕ್ತಿ ನಿರ್ಮಾಣ ಮಾಡುವ ಏಕೈಕ ಸಂಘಟನೆ ಆರ್ಎಸ್ಎಸ್. ಅಪ್ಪ ಮಕ್ಕಳಾದ ಮಾಜಿ ಪ್ರಧಾನಿ ಎಚ್.ಡಿ. ದೇವೆಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಬೇರೆ ಬೇರೆ ಸಂದರ್ಭದಲ್ಲಿ ಬೇರೆ-ಬೇರೆ ರೀತಿ ಮಾತನಾಡುತ್ತಾರೆ. ಆರ್ಎಸ್ಎಸ್ ಹೆಸರನ್ನು ಬೇಕಾದಂತೆ ಬಳಸಿಕೊಂಡಿದ್ದಾರೆ. ಅವರಿಗೆ ಬೇಕಾದಂತೆ ಬಳಸಿಕೊಳ್ಳುವ ಸಂಘಟನೆ ಆರ್ಎಸ್ಎಸ್ ಅಲ್ಲ. ಕುಮಾರಸ್ವಾಮಿ ಹೇಳಿದರು ಎಂದು ಈ ಕೆಲಸ ನಿಲ್ಲುವುದಿಲ್ಲ, ಈ ಕೆಲಸ ಇನ್ನಷ್ಟು ವೇಗ ಪಡೆದುಕೊಳ್ಳಲಿದೆ ಎಂದು ಸಚಿವ ಸುನೀಲ್ ಕುಮಾರ್ ತಿಳಿಸಿದರು